ಹೃದಯ ಸಮುದ್ರ.

೧.ಹೃದಯಸಮುದ್ರ

ಬೇಂದ್ರೆಯವರಿಗೆ ಅರವತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ಅವರ ಐದು ಕವನಸಂಕಲನಗಳನ್ನು ಕೂಡಿಸಿ “ಅರಳು-ಮರಳು” ಎನ್ನುವ

ಬೃಹತ್-ಕವನಸಂಕಲನವನ್ನು ಪ್ರಕಟಿಸಲಾಯಿತು. ಆ ಐದು ಸಂಕಲನಗಳು ಇಂತಿವೆ:

(೧) ಸೂರ್ಯಪಾನ

(೨) ಹೃದಯಸಮುದ್ರ

(೩) ಮುಕ್ತಕಂಠ

(೪) ಚೈತ್ಯಾಲಯ

(೫) ಜೀವಲಹರಿ

ಹೃದಯಸಮುದ್ರ ಕವನಸಂಕಲನದ ಮೊದಲ ಕವನವೂ “ಹೃದಯಸಮುದ್ರ”ವೇ. ಈ ಕವನದ ಬಗೆಗೆ ಬೇಂದ್ರೆಯವರು ಈ ರೀತಿ ಟಿಪ್ಪಣಿ ನೀಡಿದ್ದಾರೆ:

“ಶ್ರೀ ಅರವಿಂದರ ಅತಿಮಾನಸ ಸಾಕ್ಷಾತ್ಕಾರದಿಂದ ಬಂದ ಸಂಸಾರೋತ್ತಾರಕ ಕರೆಯನ್ನೇ ನೆನಿಸಿ ಈ ಭಾವಲಹರಿ ಉತ್ಕಟತೆಯನ್ನು ತಾಳಿದೆ.”

ಮನುಷ್ಯನು ಉತ್ಕ್ರಾಂತಿ ಪಥದಲ್ಲಿ ಮುಂದುವರೆಯುತ್ತಿದ್ದಾಗ ಕೊನೆಯ ಘಟ್ಟದಲ್ಲಿ ಅವನ ಪ್ರಜ್ಞೆಯು ‘ಸುಪ್ರಮಾನಸ’ ಅವಸ್ಥೆಯನ್ನು ತಲುಪುವದಾಗಿ ಶ್ರೀ ಅರವಿಂದರು ಹೇಳುತ್ತಿದ್ದರು. (ಸ್ವತಃ ಅವರು ಈ ಅವಸ್ಥೆಯನ್ನು ತಲುಪಿದ್ದರು).

ಲೌಕಿಕ ಪ್ರಜ್ಞೆಯಿಂದ ಅಲೌಕಿಕ ಪ್ರಜ್ಞೆಗೆ ಸಾಗಲು ಅವರು ನೀಡಿದ ಕರೆಯನ್ನು ಕವಿ ‘ಸಂಸಾರೋತ್ತಾರಕ ಕರೆ’ ಎಂದು ಕರೆದಿದ್ದಾರೆ. ಈ ಕರೆ ಪ್ರಬಲವಾದಾಗ, ಕರೆಯ ನಾದ ಕವಿಯ ಮನಸ್ಸನ್ನು ವ್ಯಾಪಿಸಿ ಅವನಲ್ಲಿ ಭಾವೋತ್ಕಟತೆ ಆದ ಸಂದರ್ಭದಲ್ಲಿ ಈ ಕವಿತೆ ಹೊರಹೊಮ್ಮಿದೆ.

[ಈ ಕರೆಯ ಪರಿಣಾಮವು ಸಾಧಕನ ಅವಸ್ಥೆಯನ್ನು ಅವಲಂಬಿಸಿರುತ್ತದೆ. ಶ್ರೀನಿವಾಸ ನಾಯಕರಿಗೂ ಸಹ ಒಮ್ಮೆ ಇಂತಹ ಕರೆ ಕೇಳಿ ಬಂದಿತು. ಅವರ ಪೂರ್ವ ಜನ್ಮದಲ್ಲಿಯ ಸಾಧನೆ ಬಹುಶಃ ದೊಡ್ಡದಿರಬೇಕು. ಅವರು ತಕ್ಷಣ ತಮ್ಮ ಲೌಕಿಕ ಸಂಪತ್ತನ್ನು ಬಿಸಾಕಿ, ತಂಬೂರಿ ಎತ್ತಿಕೊಂಡು ‘ಪುರಂದರ ದಾಸ’ರಾದರು. ತಮ್ಮ ಹೆಂಡತಿ ಮಕ್ಕಳ ಕೈಯಲ್ಲಿಯೂ ಜೋಳಿಗೆಯನ್ನೇ ಕೊಟ್ಟರು.]

…………………………………………….

‘ಹೃದಯಸಮುದ್ರ’ ಕವನದ ಪೂರ್ತಿಪಾಠ ಇಂತಿದೆ:

“ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ,

ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವದು ಪುಟ್ಟಪೂರಾ,

ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ,

ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.

ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ,

ಹರಿತsದ ಭಾವ, ಬೆರಿತsದ ಜೀವ ಅದರೊಳಗೆ ಒಳಗೆ ಒಳಗೆ.

ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್‌ನಿಮ್ಮ ಆತ್ಮಗಳಿಗೆ.

ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ.

ಇದು ಉಪ್ಪು ನೀರ ಕಡಲಲ್ಲೊ; ನಮ್ಮ ಒಡಲಲ್ಲೆ ಇದರ ನೆಲೆಯು.

ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದsದ ಇದರ ಬೆಲೆಯು.

ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವದು ಇದರ ಸೆಲೆಯು,

ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವದು ಇದರ ಕಳೆಯು.

ಬಂದವರ ಬಳಿಗೆ ಬಂದsದ ಮತ್ತು ನಿಂದವರ ನೆರೆಗು

ಬಂದsದೋ ಬಂದsದ,

ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ

ಅಂದsದೋ ಅಂದsದ.”

…………………………………………..

ಕವಿಯು ಆಧ್ಯಾತ್ಮ ಸಾಧಕನ ಹೃದಯವನ್ನೇ ಒಂದು ಸಮುದ್ರಕ್ಕೆ ಹೋಲಿಸಿ ಕವನವನ್ನು ಪ್ರಾರಂಭಿಸಿದ್ದಾರೆ.

ಆದರೆ ಈ ಸಮುದ್ರವು ಸದ್-ಭಾವನೆಗಳಿಂದ ತುಂಬಿದ ಹೃದಯಸಮುದ್ರ. ಅಂತೆಯೇ ಇದು ಬಂಗಾರ ನೀರಿನ ಸಮುದ್ರ.

“ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ,

ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವದು ಪುಟ್ಟಪೂರಾ,

ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ,

ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.”

ಅನಂತ ದೂರದಲ್ಲಿರುವ ಆಕಾಶದ ಬಣ್ಣ ನೀಲಿ. ಈ ಸಮುದ್ರದ ತೀರಗಳ ಬಣ್ಣವೂ ನೀಲಿಯೇ. ಯಾಕೆಂದರೆ ದೈವಿಭಾವದ ಈ ಸಮುದ್ರವೂ ಸಹ ಅನಂತವಾಗಿದೆ. ಇದರ ತೀರವು ‘ತೀರ’ದಂತಹದು, ಇದಕ್ಕೆ ಅಂತವಿಲ್ಲ.

ಈ ಸಮುದ್ರದಲ್ಲಿ ಏಳುವ ಸತ್-ಭಾವನೆಯ ತೆರೆಗಳು ಎಂತಹವು? ಅವು ಮಿಂಚಿನ ಬಳಗ!

ಮಿಂಚು ಪ್ರಕಾಶಮಾನವಾಗಿರುತ್ತದೆ. ಅದರ ಕಣ್ಣು ಕೋರೈಸುವ ಬೆಳಕು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಆದರೆ ಕೊನೆಯಿಲ್ಲದ ಮಿಂಚಿನ ಬಳಗ? ಅದು ಅಪೂರ್ವ ಸಿದ್ಧಿಯ ಮಾನಸಿಕ ಸ್ಥಿತಿಯಾಗಿದೆ.

[ಶಂಕರಾಚಾರ್ಯರು ತಮ್ಮ ‘ಸೌಂದರ್ಯಲಹರಿ’ಯಲ್ಲಿ ತಪಸ್ವಿಗಳು ದೇವಿಯನ್ನು ಕಾಣುವ ಬಗೆಯನ್ನೂ ಇದೇ ರೀತಿಯಾಗಿ ಬಣ್ಣಿಸಿದ್ದಾರೆ.

“ ತಟಿಲ್ಲೇಖಾ ತನ್ವೀಂ, ತಪನಶಶಿವೈಶ್ವಾನರಮಯೀಮ್

ನಿಷಣ್ಣಾಂ ಷಣ್ಣಾಂ ಅಪ್ಯುಪರಿ ಕಮಲಾನಾಂ ತವ ಕಲಾಮ್

ಮಹಾಪದ್ಮಾಟವ್ಯಾಂ ಮೃದಿತಮಲಮಾಯೇನ ಮನಸಾ

ಮಹಾಂತಃ ಪಶ್ಯಂತಃ ದಧತಿ ಪರಮಾಹ್ಲಾದ ಲಹರೀಮ್ .”

(ಹೇ ದೇವಿ, ಷಟ್ಚಕ್ರಗಳ ಮೇಲಿರುವ ಸಹಸ್ರದಳಕಮಲದಲ್ಲಿರುವ , ಮಿಂಚಿನ ಬಳ್ಳಿಯಂತಹ ರೂಪವುಳ್ಳ, ಸೂರ್ಯ, ಚಂದ್ರ ಹಾಗು ಅಗ್ನಿ ಸ್ವರೂಪಳಾದ ನಿನ್ನನ್ನು ವಿಮಲ ಮನಸ್ಸಿನ ತಪಸ್ವಿಗಳು ನೋಡುತ್ತಾರೆ.)]

ಈ ಮಾನಸಸಮುದ್ರವು ಬೇಂದ್ರೆಯವರಿಗೆ ವೈಯುಕ್ತಿಕ ಸ್ವರೂಪದ್ದಲ್ಲ. (ಅವರ ಕವಿತೆ ಯಾವಾಗಲೂ ಸಹೃದಯನಿಗೆ ಉದ್ದೇಶಿತವಾದದ್ದು.) ಅಂತೆಯೇ ಈ ತಮ್ಮ ಸಮುದ್ರದಲ್ಲಿ ಅವರು ಎಲ್ಲ ಸಹಯಾತ್ರಿಕರ ನೆಲೆಗಳನ್ನು ಕಾಣುತ್ತಾರೆ.

“ ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ.

ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.”

ಊರಿದರೆ ಮಾತ್ರ ಊರು ಸಿಗುವದು. ಊರುವದು ಧೀರನಿಗೇ ಸಾಧ್ಯ. ಧೀರನೆಂದರೆ ಸಾಧಕನೇ ಸೈ. ಎಲ್ಲಾ ಸಾಧಕರ ಮಾನಸಸಮುದ್ರ ಒಂದೇ. ಅದು ಭಗವಂತನು ವಾಸಿಸುವ ಹಾಲ್ಗಡಲು.

ಈ ಹಾಲ್ಗಡಲ ವಾಸವನ್ನು ನೆನಸಿಕೊಂಡೇ ಪುರಂದರದಾಸರು ಹಾಡಿದರಲ್ಲವೆ?

“ಅಲ್ಲಿರುವದು ನಮ್ಮ ಮನೆ, ಇಲ್ಲಿರುವದು ಸುಮ್ಮನೆ!”

ಅಂತಹ ಮಾನಸಸಮುದ್ರದಲ್ಲಿ ‘ನಾವು’ ಅಂದರೆ ಸಾಧಕರು ಇದ್ದೇವೆ ; ನಮ್ಮೊಳಗೆ ‘ತಾವು’ ಅಂದರೆ ಭಗವಂತ ಇದ್ದಾನೆ.

ಬೇಂದ್ರೆಯವರ ಅನೇಕಾರ್ಥ ಪದ ಬಳಕೆ ಇಲ್ಲಿಯೂ ಕಾಣುತ್ತದೆ. ‘ನಾವು’ ಪದದ ಮತ್ತೊಂದು ಅರ್ಥ ಡೋಣಿ ; ‘ತಾವು’ ಅಂದರೆ ಠಾವು, i.e.ಬಂದರು,port. ‘ಅದು ಇಲ್ಲವಣ್ಣ ದೂರಾ.’

ನೀಲ ಕ್ಷಿತಿಜದಷ್ಟು ದೂರವಾಗಿ ಕಾಣುವ ಈ ತೀರ ಸಾಧಕನಿಗೆ ದೂರವಲ್ಲ ಎಂದು ಬೇಂದ್ರೆ ಹೇಳುತ್ತಾರೆ. ಅಥವಾ ಈ ಬಂದರು ದೂರವಿಲ್ಲ; ಅದು ನಮ್ಮಲ್ಲಿಯೇ ಇದೆ ಎಂದೂ ಅವರು ವಿಶೇಷಾರ್ಥ ನೀಡುತ್ತಾರೆ.

ಇದೇ ಅರ್ಥವನ್ನು ಪುರಂದರದಾಸರೂ ಸಹ ತಮ್ಮ ಹಾಡಿನಲ್ಲಿ ಹೇಳಿದ್ದಾರೆ:

“ಒಂದೇ ಕೂಗಳತೆ ಕಾಣೊ ವೈಕುಂಠಕೆ”.

ಇಂತಹ ಮಾನಸಸಮುದ್ರದಲ್ಲಿರುವ ಸಾಧಕನ ಮುಂದಿನ ಘಟ್ಟವೇನು ಎನ್ನುವದನ್ನು ಕವನದ ಎರಡನೆಯ ನುಡಿಯಲ್ಲಿ ಬೇಂದ್ರೆ ಈ ರೀತಿಯಾಗಿ ವರ್ಣಿಸಿದ್ದಾರೆ:

“ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ,

ಹರಿತsದ ಭಾವ, ಬೆರಿತsದ ಜೀವ ಅದರೊಳಗೆ ಒಳಗೆ ಒಳಗೆ.

ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್‌ನಿಮ್ಮ ಆತ್ಮಗಳಿಗೆ.

ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ.”

This is the moment of Divine Call. ದೇವರು ಕರೆ ಕೊಟ್ಟ ಗಳಿಗೆ; ಇದು ದಿವ್ಯಗಳಿಗೆ. ಈ ಕರೆ ಎಷ್ಟು ಉತ್ಕಟವಾದದ್ದೆಂದರೆ ಇದು ಸಮುದ್ರದ ತೆರೆಗಳಂತೆ ಬಂದು ನಮ್ಮನ್ನು ತನ್ನಲ್ಲಿ ಮುಳುಗಿಸುತ್ತದೆ. (ನೆರೆ ಎನ್ನುವ ಪದಕ್ಕೆ ಸೇರು ಎನ್ನುವ ಅರ್ಥವೂ ಇರುವದರಿಂದ ತೆರೆಗಳು ಎಂದು ಬಹುವಚನ ಉಪಯೋಗಿಸಲಾಗಿದೆ.) ಇದು ನೆರೆ ಅಂದರೆ ಮಹಾಪೂರದಂತೆ ಬಂದು ನಮ್ಮನ್ನು ಕೊಚ್ಚಿಕೊಂಡು ಹೋಗುತ್ತದೆ. ಈ ಕರೆಯ ತೆರೆಯತ್ತ ನಮ್ಮ ಭಾವ ಹರಿಯುತ್ತದೆ. (‘ನೆರೆ’ ಎನ್ನುವ ಪದಕ್ಕೆ mature ಎನ್ನುವ ಅರ್ಥವೂ ಇದೆ.)

‘ಹರಿತsದ ಭಾವ’; ನಮ್ಮ ಜೀವಭಾವವು ಈ ಕರೆಯತ್ತ, ಕರೆ ಕೊಡುವವನತ್ತ ಹರಿಯುತ್ತದೆ; ‘ಹರಿತsದ’ ಅಂದರೆ ಹರಿತವಾಗುತ್ತದೆ, sharp ಆಗುತ್ತದೆ ಎಂದೂ ಬೇಂದ್ರೆ ಹೇಳುತ್ತಾರೆ. ಭಗವಂತನ ಈ ಕರೆಯೊಳಗೆ ನಮ್ಮ ಜೀವ ಬೆರತು ಹೋಗುತ್ತದೆ. ನಮಗೆ ಸ್ವತಂತ್ರ ಆತ್ಮಭಾವ ಉಳಿಯುವದೇ ಇಲ್ಲ. ನಮ್ಮ ಆತ್ಮಗಳಿಗೆಲ್ಲ ಇದೇ ಸಮಯ, the moment of merger. ‘ಆತ್ಮಗಳಿಗೆ’ ಎಂದರೆ ಆತ್ಮದ ‘ಗಳಿಗೆ’=our moment ಎಂದೂ ಅರ್ಥೈಸಬಹುದು.

ನಾವು ಈ ಪ್ರಕ್ರಿಯೆಯಲ್ಲಿ ಸಂಶಯ ಪಡುವ ಕಾರಣವೇ ಇಲ್ಲ. ಯಾಕೆಂದರೆ ಈ ಪ್ರಕ್ರಿಯೆಯ ಕಾರಣಪುರುಷನು ನಮ್ಮನ್ನು ಸಾಗರ ದಾಟಿಸುವ ಅಂಬಿಗ; ನಾವು ನಂಬಬಹುದಾದ, ನಂಬಲೇಬೇಕಾದ ನಂಬಿಗ.

ದಾಸರು ಹೇಳುವಂತೆ: “ಅಂಬಿಗ, ನಾ ನಿನ್ನ ನಂಬಿದೆ; ಜಗದಂಬಾರಮಣ ನಿನ್ನ ನಂಬಿದೆ.”

ಮೂರನೆಯ ನುಡಿಯಲ್ಲಿ ಬೇಂದ್ರೆ ಈ ಸಮುದ್ರವು ಲೌಕಿಕ ಸಾಗರವಲ್ಲ, ಅಲೌಕಿಕ ಸಾಗರ ; ಅರ್ಥಾತ್ ಕ್ಷುದ್ರ ಭಾವನೆಗಳ ಸಾಗರವಲ್ಲ , ದೈವೀ ಭಾವನೆಗಳ ಸಾಗರ ಎನ್ನುವದನ್ನು ಸ್ಪಷ್ಟಪಡಿಸುತ್ತಾರೆ.

“ಇದು ಉಪ್ಪು ನೀರ ಕಡಲಲ್ಲೊ ; ನಮ್ಮ ಒಡಲಲ್ಲೆ ಇದರ ನೆಲೆಯು.

ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದsದ ಇದರ ಬೆಲೆಯು.

ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವದು ಇದರ ಸೆಲೆಯು,

ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವದು ಇದರ ಕಳೆಯು.”

ನಮ್ಮ ಒಡಲು ಅಂದರೆ ನಮ್ಮ ಅಂತಃಕರಣದಲ್ಲಿಯೇ ಈ ಕಡಲಿನ ನೆಲೆ ಇದೆ. ಈ ನೆಲೆಯೇ ಈ ಕಡಲಿನ ಸೆಲೆಯು. ಕಂಡಕಂಡವರಿಗೆ ಇದರ ಬೆಲೆ ಗೊತ್ತಾಗದು. ಒಳಗಣ್ಣಿನಿಂದ ಕಂಡವರಿಗಷ್ಟೇ ಇದರ ಮೌಲ್ಯದ ಅರಿವಾಗುವದು. ಸಿಕ್ಕಸಿಕ್ಕಲ್ಲಿ ಈ ಸೆಲೆ ಒಡೆಯಲಾರದು. ಸಾಧನೆಯಿಂದ ಪವಿತ್ರಗೊಂಡ ತಾಣದಲ್ಲಿ ಮಾತ್ರ ಈ ಸೆಲೆ ಚಿಮ್ಮುವದು. ಯಾಕೆಂದರೆ ಇದು ತೀರ್ಥಕ್ಷೇತ್ರವಿದ್ದಂತೆ. (ತಲಕಾವೇರಿಯಂತೆ ಎನ್ನೋಣವೆ?) ಇದರ ಕಾಂತಿ ನಮಗೆ ಹೊಳೆಯಬೇಕಾದರೆ ನಮ್ಮ ಕಣ್ಣು ಅರಳಿರಬೇಕು. ಈ ಅರಳಿದ ಕಣ್ಣು ಈ ದಿವ್ಯತೀರ್ಥದ ಕಡೆಗೆ ಹೊರಳಬೇಕು. ಆಗ ಮಾತ್ರ ದಿವ್ಯಪ್ರಭೆಯ ಈ ಕಾರಂಜಿ ನಮ್ಮ ಕಣ್ಣಿಗೆ ಹೊಳೆಯುವದು.

ಈ ಸಾಕ್ಷಾತ್ಕಾರವು ಕವಿಯನ್ನು ಆನಂದದಿಂದ ತುಂಬಿದೆ. ಅಂತೆಲೇ ಆತ ಉದ್ಘೋಷಿಸುತ್ತಿದ್ದಾನೆ:

“ಬಂದವರ ಬಳಿಗೆ ಬಂದsದ ಮತ್ತು ನಿಂದವರ ನೆರೆಗು

ಬಂದsದೋ ಬಂದsದ,

ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ

ಅಂದsದೋ ಅಂದsದ.”

‘ಯಾರು ಬಂದಿದ್ದಾರೆಯೋ, ಅಂದರೆ ದಿವ್ಯಕರೆಯನ್ನು ಕೇಳಿ ಬಂದಿದ್ದಾರೆಯೊ’ ಅವರ ಬಳಿಗೆ ಈ ಮಹಾಪ್ರವಾಹ ಬಂದಿದೆ. ಯಾರು ಇಲ್ಲಿ ಬಂದು ನಿಂತಿದ್ದಾರೊ ಅವರ ಪಕ್ಕದಲ್ಲಿಯೆ(=ನೆರೆಗು) ಬಂದಿದೆ. ಅವರ ನೆರೆಗೆ (ಅಂದರೆ ಅವರನ್ನು mature ಮಾಡುವ ಸಲುವಾಗಿ, ಪಕ್ವಗೊಳಿಸುವ ಸಲುವಾಗಿ) ನಿಂತುಕೊಂಡಿದೆ. ನಿಂದವರ ನೆರೆಗೆ ಅನ್ನುವದಕ್ಕೆ ಮತ್ತೊಂದು ಅರ್ಥವನ್ನು ಹೇಳಬಹುದು. ಯಾರು ಬಾರದೆ ಅಲ್ಲಿಯೇ ನಿಂತಿದ್ದಾರೆಯೋ ಅವರ ಪಕ್ಕಕ್ಕೂ ಸಹ ಈ ನೆರೆ ಬಂದು ನಿಂತಿದೆ.

ಈ ‘ಕರೆ’ ಸಾಧಕನಿಗೆ ಏನು ಹೇಳುತ್ತಿದೆ?

“ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ

ಅಂದsದೋ ಅಂದsದ.”

ನವಮನುವು ಬಂದಿರುವನು ಎನ್ನುವ ಈ ಘೋಷಣೆ ಶ್ರೀ ಅರವಿಂದರ ಕಾಣ್ಕೆಯ ವಿವರಣೆ.

ಅರವಿಂದರು ಮಾನವನ ಉತ್ಕ್ರಾಂತಿಯಲ್ಲಿ ನಂಬಿಗೆ ಇಟ್ಟವರು. ಮನುಷ್ಯನು ತನ್ನ ಕೆಳಮಟ್ಟದ ಮಾನಸಿಕ ಸ್ಥಿತಿಯಿಂದ ಮೇಲೆದ್ದು ಸುಪ್ರಮಾನಸ (supramental, supermind) ಸ್ಥಿತಿಯನ್ನು ತಲುಪಬೇಕು, ತಲುಪಿಯೇ ತೀರುತ್ತಾನೆ ಎನ್ನುವದು ಅವರ ಕಾಣ್ಕೆ. ಬೇಂದ್ರೆಯವರು ಅದನ್ನೇ ನವಮನುವಿನ ರೂಪಕದ ಮೂಲಕ ಹೇಳುತ್ತಿದ್ದಾರೆ.

ಶ್ರೀ ಅರವಿಂದರನ್ನು ಮಾನಸಿಕವಾಗಿ ತಮ್ಮ ಗುರುವಾಗಿ ಸ್ವೀಕರಿಸಿದ ಬೇಂದ್ರೆಯವರು, ಶಿಷ್ಯರ ಸಾಧನೆ ಹಾಗು ಗುರುವಿನ ಅನುಗ್ರಹವನ್ನು ‘ಹೃದಯಸಮುದ್ರ’ ಕವನದ ಮೂಲಕ ಚಿತ್ರಿಸಿದ್ದಾರೆ.

[ಬೇಂದ್ರೆಯವರ assimilation ಪ್ರತಿಭೆಯ ಒಂದು ಝಳಕನ್ನು ಈ ಕವನದಲ್ಲಿ ಸಹ ನೋಡಬಹುದು. ಬೇಂದ್ರೆಯವರು ಕನ್ನಡ, ಮರಾಠಿ, ಸಂಸ್ಕೃತ ಹಾಗು ಇಂಗ್ಲೀಶಿನಲ್ಲಿಯ ಪ್ರಾಚೀನ ಹಾಗು ಅರ್ವಾಚೀನ ಜ್ಞಾನವನ್ನು ಕುಡಿದವರು. ಕನ್ನಡದ ಜಾನಪದ ಸಂಪತ್ತನ್ನು ಅರಗಿಸಿಕೊಂಡವರು. ಇದೆಲ್ಲ ಅವರ ಪ್ರತಿಭೆಯ ಮೂಸೆಯಲ್ಲಿ ಅವರದೇ ಕವನವಾಗಿ ಬರುವದನ್ನು ‘ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ’ ಎನ್ನುವ ಸಾಲಿನಲ್ಲಿ ನೋಡಬಹುದು. ಪುರಂದರದಾಸರ “ಅಂಬಿಗ, ನಾ ನಿನ್ನ ನಂಬಿದೆ; ಜಗದಂಬಾರಮಣ ನಿನ್ನ ನಂಬಿದೆ ” ಎನ್ನುವ ಸಾಲು ಬೇಂದ್ರೆಯವರ ಈ ಕವಿತೆಯಲ್ಲಿ ಅವರದೇ ಪಾಕವಾಗಿ ಬಂದಿದೆ.

ಇದರಂತೆ ಶೇಕ್ಸಪಿಯರನ ನಾಟಕವೊಂದರಲ್ಲಿಯ ಹಾಡೊಂದನ್ನು ಗಮನಿಸಿರಿ:

Under the greenwood tree

Who wants to lie with me

Here shall he see no enemy

But winter and rough weather.

ಈ ಹಾಡಿನ ಪ್ರಭಾವವನ್ನು ಬೇಂದ್ರೆಯವರ ಈ ಕವನದಲ್ಲಿ ಗುರುತಿಸಬಹುದು:

“ ಮಳೆ ಬರಲಿ, ಚಳಿ ಇರಲಿ, ಬಿಸಿಲು ಕುದಿಸುತಲಿರಲಿ, ಮಂಜು ಸುರಿಯುತಲಿರಲಿ,

ಮುಮ್ಮುಖದ ಋತಮಾನ ಹೇಗು ಇರಲಿ, ನಗುತ ಒಲಿವೆವು ನಾವು, ನಗುತ ಒಲಿಸುವೆವು.”

ಪಾಕಪ್ರವೀಣನೊಬ್ಬನು ಬೇರೆಯವರು ಉಪಯೋಗಿಸುವ ಪದಾರ್ಥಗಳನ್ನೇ ಉಪಯೋಗಿಸಿ, ಅಪೂರ್ವ ಅಡುಗೆಯನ್ನು ಸಿದ್ಧಪಡಿಸುತ್ತಾನೆ. ಇದರಂತೆ ಬೇಂದ್ರೆಯವರ ಪ್ರತಿಭಾ ಕೌಶಲ್ಯ.]

ಹಾಗಿದ್ದರೆ, ಬೇಂದ್ರೆಯವರ ಈ ಕವನ “ಹೃದಯಸಮುದ್ರ” ಎಷ್ಟರ ಮಟ್ಟಿಗೆ ಸಫಲವಾದ ಕವನವೆನ್ನಬಹುದು?

ಇದಕ್ಕೆ ಉತ್ತರ ಮಾತ್ರ ಆಶಾದಾಯಕವಿಲ್ಲ. “ಗಂಗಾವತರಣ” ಕವನಸಂಕಲನದ ಬಳಿಕ ಬಂದ ಬೇಂದ್ರೆಯವರ ಬಹುತೇಕ ಕವನಗಳು ಒಳಮುಖವಾದ ಕವನಗಳು. ಬೇಂದ್ರೆಯವರ ಮೊದಲಿನ ಕವನಗಳಿಗೂ, ನಂತರದ ಈ ಕವನಗಳಿಗೂ ಒಂದು ಪ್ರಮುಖ ವ್ಯತ್ಯಾಸವನ್ನು ಕಾಣಬಹುದು. ಅದನ್ನೊಂದು ರೂಪಕದ ಮುಖಾಂತರ ಸ್ಪಷ್ಟಪಡಿಸಿಕೊಳ್ಳೋಣ:

ಬೇಲೂರಿನ ಶಿಲ್ಪಕಲೆಯಲ್ಲಿ ಕುಸುರಿಕೆಲಸಕ್ಕೆ ಪ್ರಾಧಾನ್ಯ. ಬೇಂದ್ರೆಯವರ ಮೊದಲಿನ ಕಾವ್ಯವನ್ನು ಇಲ್ಲಿಯ ಶಿಲಾಬಾಲಿಕೆಯರ ಚೆಲುವಿಗೆ ಹೋಲಿಸಬಹುದು. ‘ಗಂಗಾವತರಣ’ದ ನಂತರದ ಅವರ ಕಾವ್ಯವನ್ನು ಗೊಮ್ಮಟೇಶ್ವರನಿಗೆ ಹೋಲಿಸಬಹುದು. ಭವ್ಯತೆಯೇ ಇಲ್ಲಿ ಪ್ರಾಧಾನ್ಯ ; ಕುಸುರಿ ಕೆಲಸವಲ್ಲ.

ಹಾಗಿದ್ದರೆ, ಬೇಂದ್ರೆಯವರ ಅನೇಕ ಅನುಭಾವದ ಕವನಗಳಲ್ಲಿ ಶ್ರವಣಬೆಳಗೊಳದ ಗೊಮ್ಮಟನ ಭವ್ಯತೆ ಬಂದಿದೆಯೇ?

Sorry, sir.

ಶ್ರವಣಬೆಳಗೊಳದ ಗೊಮ್ಮಟನ ಭವ್ಯತೆ ಹಾಗು ದೈವೀ ಪ್ರಸನ್ನ ಕಳೆಯು ಕಾರ್ಕಳ ಅಥವಾ ಧರ್ಮಸ್ಥಳದ ಗೊಮ್ಮಟರ ಶಿಲ್ಪದಲ್ಲಿ ಇಲ್ಲ. ಅದರಂತೆಯೇ ಬೇಂದ್ರೆಯವರ ಅನುಭಾವ ಕಾವ್ಯದಲ್ಲಿ ಸಹ ಈ ಕೊರತೆ ತೋರಿಬರುತ್ತದೆ.

“ಹೃದಯಸಮುದ್ರ” ಕವನದಲ್ಲಿ ಬೇಂದ್ರೆಯವರ patent ಎನ್ನಿಸುವ ಅನೇಕಾರ್ಥ ಪದಗಳಿವೆ. ಅವರ ಎಲ್ಲ ಕವನಗಳಲ್ಲಿರುವ ಕ್ರಮಬದ್ಧತೆ, ವಾಸ್ತವಿಕ ನಿರೂಪಣೆ ಇಲ್ಲಿಯೂ ಇದೆ. ಆದರೂ ಸಹ ಓದುಗನ ಹೃದಯಕ್ಕೆ ತಟ್ಟುವಂತೆ ಸಾಧಕನ ಮನಃಸ್ಥಿತಿಯನ್ನು ಬಿಂಬಿಸುವದರಲ್ಲಿ ಕವನ ಸೋತಿದೆ ಎನ್ನಬಹುದು.

ಕನ್ನಡದ ಬೇರೆ ಕೆಲವು ಗೀತೆಗಳು ಎಷ್ಟು ಸಮರ್ಥವಾಗಿ ಈ ಕಾರ್ಯವನ್ನು ಮಾಡಿವೆ ಎನ್ನುವದಕ್ಕೆ ಕೆಲವು ಉದಾಹರಣೆಗಳನ್ನು ಕೊಡಬಹುದು:

(೧) ಮಧುರಚೆನ್ನರು ಸಾಧಕನ ಹಂಬಲವನ್ನು ಹೀಗೆ ವರ್ಣಿಸುತ್ತಾರೆ:

“ ನಿಲ್ಲು ನಿಲ್ಲೆಲೆ ನವಿಲೆ, ನಿನ್ನ ಕಣ್ಣುಗಳೇಸು

ಕಣ್ಣ ಬಣ್ಣಗಳೇಸು ಎಣಿಸಲಾರೆ!

ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ,

ತಾಳಲಾರದು ಜೀವ, ಹೇಳಬಾರೆ!”

(೨) ಅಕ್ಕ ಮಹಾದೇವಿಯ ವಚನವಂತೂ ಪ್ರಸಿದ್ಧವಿದೆ.

ಈ ವಚನದಲ್ಲಿ ಸಾಕ್ಷಾತ್ಕಾರ ಪಡೆದ ಸಾಧಕನ ಚಿತ್ರವಿದೆ:

“ ಅಕ್ಕ ಕೇಳವ್ವ, ನಾನೊಂದ ಕನಸ ಕಂಡೆ

ಅಕ್ಕ ಅಡಕೆ ಓಲೆ ತೆಂಗಿನಕಾಯಿ ಕಂಡೆ

ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು……”

ಇದರ ಕಾರಣ ಸ್ಪಷ್ಟ. ಅನುಭಾವದ ಸಾಕ್ಷಾತ್ ಅನುಭವವಿಲ್ಲದೆ, ಅನುಭಾವ-ಕವನ ರಚಿಸಲಾಗದು. ಬೇಂದ್ರೆಯವರ ಮಾತಿನಲ್ಲಿಯೇ ಹೇಳುವದಾದರೆ:

“ ಕಟ್ಟೋರೆಲ್ಲ ಕವಿಗಳಲ್ಲಾ, ಹುಟ್ಟೋರೆಲ್ಲಾ ಭವಿಗಳಲ್ಲಾ,

ಕರು ಕೂಡ ಕಟ್ಟಿದ್ದುಂಟು, ಬಸವಣ್ಣನೂ ಹುಟ್ಟಿದ್ದುಂಟು.”

ಕನ್ನಡಕ್ಕೆ ಶ್ರೇಷ್ಠ ಕಾವ್ಯವನ್ನು ನೀಡಿದ ವರಕವಿಗಳು, ತಮ್ಮ ಕಾವ್ಯಜೀವನಕ್ಕೆ ತಿರುವು ಬಂದಾಗ, ಸಂಪೂರ್ಣವಾಗಿ ಸಫಲರಾಗಲಿಲ್ಲ. ಆದರೆ ಕನ್ನಡದ ಮತ್ತೊಬ್ಬ ಉದ್ದಾಮ ಕವಿಯಾದ ಗೋಪಾಲಕೃಷ್ಣ ಅಡಿಗರು ತಮ್ಮ ಕಾವ್ಯಜೀವನದ ಎಲ್ಲಾ ಘಟ್ಟಗಳಲ್ಲಿಯೂ ಸಫಲರಾದವರು.

ನವೋದಯ ಕಾವ್ಯದಲ್ಲಿ ಸಫಲತೆ ಪಡೆದ ಅಡಿಗರ ಕವನ

“ ಯಾವ ಮೋಹನಮುರಲಿ ಕರೆಯಿತು, ದೂರ ತೀರಕೆ ನಿನ್ನನು ” ಜನಪ್ರಿಯ ಕವನವಾಗಿದೆ.

ಕನ್ನಡದ ನವ್ಯಕಾವ್ಯಕ್ಕಂತೂ ಅವರೇ ಜನಕರು. ಇದು ಅವರ ಕಾವ್ಯಜೀವನದ ಎರಡನೆಯ ಘಟ್ಟ.

“ ವರ್ಧಮಾನ ” ಕವನ ನವ್ಯಕಾವ್ಯಕ್ಕಿಂತ ಭಿನ್ನವಾದ ಅವರ ಕಾವ್ಯಜೀವನದ ಮೂರನೆಯ ಘಟ್ಟ.

ಈ ಘಟ್ಟದಲ್ಲಿಯೂ ಸಹ ಅಡಿಗರ ಕಾವ್ಯ ಕಳೆಗುಂದಲಿಲ್ಲ.

ಅವರ ಭಾಷೆಗಿರುವ ಚೆಲುವು ಅಪ್ಸರೆಗಿರುವ ಚೆಲುವು,ಕಳೆಗುಂದದ ಚೆಲುವು.

ಹೆಚ್ಚಿನ ಓದಿಗೆ:http://sallaap.blogspot.com/2008/07/blog-post_30.html

೨. ವಿವೇಕಾನಂದರ ‘ಕಾಳೀಮಾತಾ’………ಬೇಂದ್ರೆಯವರ ‘ರೌದ್ರಿ’

ಹೆಚ್ಚಿನ ಓದಿಗೆ: http://sallaap.blogspot.com/search?updated-max=2010-10-08T13%3A01%3A00%2B05%3A30&max-results=29

ಸ್ವಾಮಿ ವಿವೇಕಾನಂದರು ಕಾಶ್ಮೀರದಲ್ಲಿರುವ ಕ್ಷೀರಭವಾನಿ ದೇವಿಯ ದರ್ಶನ ಪಡೆದ ಬಳಿಕ ದಾಲ್ ಸರೋವರದಲ್ಲಿಯ ದೋಣಿ-ಮನೆಗೆ ಮರಳುತ್ತಾರೆ. ಆ ಸಂದರ್ಭದಲ್ಲಿ ಅವರು ಬರೆದ ಕವನವಿದು. ದೇವಿಯು ಜಗಜ್ಜನನಿಯಾದಂತೆಯೇ ಜಗತ್ತಿನ ಸಂಹಾರಕಾರಣಿಯೂ ಹೌದು. ದೇವಿಯ ಅಂತಹ ಉಗ್ರ ಸ್ವರೂಪದ ಬಗೆಗಿನ ಚಿಂತನ ಅವರ ಈ ಕವನದಲ್ಲಿದೆ:

Kali, the Mother

The stars are blotted out,

The clouds are covering clouds.

It is darkness vibrant, sonant.

In the roaring, whirling wind

Are the souls of a million lunatics

Just loosed from the prison-house,

Wrenching trees by the roots,

Sweeping all from the path.

The sea has joined the fray,

And swirled up mountain-waves,

To reach the pitchy sky.

The flash of lurid light

Reveals on every side

A thousand, thousand shades

Of Death begrimed and black-

Scattering plagues and sorrows,

Dancing mad with joy,

Come, Mother, come!

For terror is Thy name,

Death is in thy breath,

And every shaking step

Destroys a world for e'er.

Thou Time, the All-destroyer!

Come, O Mother, come!

Who dares misery love,

And hug the form of Death,

Dance in destruction's dance

To him the Mother comes.

ವಿವೇಕಾನಂದರ ಈ ಕವನದ ಅನುವಾದವನ್ನು ಬೇಂದ್ರೆಯವರು ಮಾಡಿದ್ದಾರೆ. ಅನುವಾದಿತ ಕವನವನ್ನು ‘ಹೃದಯಸಮುದ್ರ’ ಸಂಕಲನದಲ್ಲಿ ಅಳವಡಿಸಲಾಗಿದೆ. ಅದು ಇಂತಿದೆ:

ರೌದ್ರಿ

ಭಾಗ-೧

ಚಿಕ್ಕೆ ಬಾನೊಳಿಂಗಿವೆ

ಮೋಡ ಮುಗಿಲನುಂಗಿವೆ

ಜಿರಗುಟ್ಟುವ ದುರಗುಟ್ಟುವ

ಕತ್ತಲೋ ಕತ್ತಲು

ಸುಟ್ಟುರೆಯೇ ಬಿರುಗಾಳಿಯೇ

ಲೋಕದತ್ತಲಿತ್ತಲೆ

ಮುರಿದು ಸೆರೆ ಬಂತು ನೆರೆ

ಮರುಳಪಡೆಯೆ ಬೆತ್ತಲೆ

ಭಾಗ-೨

ಮರ ಕಿತ್ತಿವೆ ಬುಡ ತಳ

ಹಾದಿ ಉಡುಗೆ ಝಳಝಳ

ಕಡಲು ಕುಣಿಯೆ ಗೊಂದಣ

ತೆರೆ-ಮುರಿ-ನೊರೆ ಧಂಧಣ

ಮಬ್ಬೆ ಮಳೆಯು ನಾಡಿಗೆ

ಮುಗಿಲಿನಂಚು ಕಾಡಿಗೆ

ಸಾವು ಹೊಂಚು, ಅಯ್ಯೊ ಮಿಂಚು

ಕಣ್ತೆರೆದೆಡೆ ಸುತ್ತಿಗೊಂಡ

ಲಕ್ಷಕೋಟಿ ರೂಪುಗೊಂಡ

ಸಾವಿನಿಂದ ಮುತ್ತುತ

ಕಷ್ಟ ನಷ್ಟ ಬಿತ್ತುತ

ಹಿಗ್ಗುಗೊಂಡು ಹುಚ್ಚೆದ್ದು

ಕುಣಿವ ತಾಯಿ ಬಾ!

ಭಾಗ-೩

ರೌದ್ರಿ ನಿನ್ನ ಹೆಸರು

ಮೃತ್ಯು ನಿನ್ನ ಉಸಿರು

ನಿನ್ನ ಒಂದು ನಡೆ ಅಡಿ

ಜಗವ ಮಾಡೆ ಪುಡಿ ಪುಡಿ

ಪ್ರಳಯಂಕರಿ ಓ ಕಾಳಿ

ಬಾ ತಾಯಿಯೆ ಬಾ!

ಕವನರಚನೆಯ ಸಂದರ್ಭದಲ್ಲಿ ಕವಿಯ ಮನಸ್ಸಿನಲ್ಲಿ ಒಂದು ಭಾವ ಇರುತ್ತದೆ. ಅದು ಕವನದ ಆತ್ಮ. ಈ ಭಾವಕ್ಕೆ ಅನುರೂಪವಾದ ಛಂದಸ್ಸನ್ನು, ಪದಗಳನ್ನು ಹಾಗು toneಅನ್ನು ಕವಿಯು ಸೃಷ್ಟಿಸುತ್ತಾನೆ. ಅದು ಕವನದ ದೇಹ. ಅನುವಾದಕನು ಕವನವನ್ನು ಅನುವಾದಿಸುವಾಗ ಕವನದ ಆತ್ಮವನ್ನು ಹಾಗು ದೇಹವನ್ನು ತನ್ನ ಅನುವಾದದಲ್ಲಿ ಸಮರ್ಪಕವಾಗಿ ಮೂಡಿಸಿದರೆ ಅದು ಉತ್ತಮ ಅನುವಾದ. ಬೇಂದ್ರೆಯವರ ಅನುವಾದಗಳು ಇನ್ನೂ ಮೇಲ್ಮಟ್ಟದವು. ವಿವೇಕಾನಂದರ ಈ ಕವನವದ ಉದಾಹರಣೆಯನ್ನೇ ತೆಗೆದುಕೊಳ್ಳಿ.

ವಿವೇಕಾನಂದರು ಕಾಶ್ಮೀರದಲ್ಲಿ ದೇವಿಯ ದರ್ಶನವನ್ನು ಪಡೆದ ನಂತರ, ಪಾರಮಾನಸ ಪ್ರಜ್ಞೆಯಲ್ಲಿ, ದೇವಿಯ ಸಂಹಾರಕಾರಿ ರೂಪವನ್ನು ಅನುಭವಿಸಿ ಬರೆದಿರಬಹುದಾದ ಕವನವಿದು. ಆ ಅನುಭವಕ್ಕೆ ತಕ್ಕ ಛಂದಸ್ಸು ಹಾಗು ಪದಗಳನ್ನು ಅವರು ತಮ್ಮ ಕವನದಲ್ಲಿ ಬಳಸಿದ್ದಾರೆ. ಬೇಂದ್ರೆಯವರು ಕನ್ನಡದಲ್ಲಿ ಅಂತಹದೇ ಛಂದಸ್ಸು ಹಾಗು ಅದೇ ಜಾತಿಯ ಪದಗಳನ್ನು ಬಳಸಿದ್ದಾರೆ. ಮೂಲ ಕವನದ toneಅನ್ನು ಸಹ ಅನುವಾದದಲ್ಲಿ ಸಮರ್ಥವಾಗಿ ಇಳಿಸಿದ್ದಾರೆ. ಇಷ್ಟೇ ಆದರೆ ಇದೊಂದು ಉತ್ತಮ ಅನುವಾದವಾಗಬಹುದಾಗಿತ್ತು. ಆದರೆ ಇದೊಂದು ಶ್ರೇಷ್ಠ ಅನುವಾದವಾಗಲು ಬೇರೊಂದು ಕಾರಣವಿದೆ. ಬೇಂದ್ರೆಯವರು ತಮ್ಮ ಮನೋಲೋಕದ ಬಸಿರಲ್ಲಿ ಮೂಲಕವನವನ್ನು ಹೊತ್ತು, ಆ ಕವನಕ್ಕೆ ಮರುಹುಟ್ಟು ನೀಡಿದ್ದಾರೆ. ಇದು ಕೇವಲ ಪ್ರತಿಕೃತಿಯಲ್ಲ, ಇದು ಮೂಲಕವನದ ಮರುಜನ್ಮ.

ಮಗುವಿಗೆ ಜನ್ಮ ಕೊಡುವ ಕ್ರಿಯೆಗೆ ಕನ್ನಡದಲ್ಲಿ ‘ಹಡೆಯುವದು’ ಎನ್ನುತ್ತಾರೆ. ಇದು ‘ಪಡೆಯುವದು’ ಪದದಿಂದ ಬಂದಿದೆ. ‘ಹಡೆಯುವದಕ್ಕೆ’ ಮೊದಲು ‘ಪಡೆಯಬೇಕಾಗುತ್ತದೆ’. ಬೇಂದ್ರೆಯವರು ವಿವೇಕಾನಂದರಿಂದ ಮೂಲಕವನದ ಭಾವವನ್ನು ಹಾಗು ದೇಹವನ್ನು ‘ಪಡೆದರು’, ಬಳಿಕ ಅದನ್ನೇ ಕನ್ನಡದಲ್ಲಿ ‘ಹಡೆದರು’! ಈ ಪಡೆಯುವ ಹಾಗು ಹಡೆಯುವ ಕ್ರಿಯೆಯ ನಡುವೆ ಮಗುವಿನ ತಾಯಿಯು ತನ್ನದೇ ಆದ ಸತ್ವವನ್ನು ಮಗುವಿಗೆ ನೀಡುತ್ತಾಳೆ. Value addition ಎಂದು ಹೇಳುತ್ತಾರಲ್ಲ, ಆ ರೀತಿಯಲ್ಲಿ. ಈ ಕವನದಲ್ಲಿ ಬೇಂದ್ರೆಯವರು ಅದನ್ನೂ ಮಾಡಿದ್ದಾರೆ. ಹೀಗಾಗಿ ಮೂಲಕ್ಕೆ ವಿರೋಧವಾಗದೇ ಈ ಕವನಕ್ಕೆ ಹೆಚ್ಚಿನ ಸೊಬಗು ಬಂದಿದೆ.

ವಿವೇಕಾನಂದರ ಮೂಲಕವನದ ಪ್ರತಿಯೊಂದು ಸಾಲನ್ನು ಅರ್ಥವ್ಯತ್ಯಾಸವಿಲ್ಲದೆ ಬೇಂದ್ರೆಯವರು ಕನ್ನಡಕ್ಕೆ ಹೇಗೆ ಇಳಿಸಿದ್ದಾರೆ ಎನ್ನುವದನ್ನು ಅರಿಯಬೇಕಾದರೆ, ಪ್ರತಿ ಸಾಲಿನ ಮೂಲವನ್ನು ಹಾಗು ಅನುವಾದವನ್ನು ಜೊತೆಜೊತೆಗೇ ಇಟ್ಟು ಪರೀಕ್ಷಿಸಬೇಕು:

ಮೂಲ/ಅನುವಾದ:

The stars are blotted out,

ಚಿಕ್ಕೆ ಬಾನೊಳಿಂಗಿವೆ

The clouds are covering clouds.

ಮೋಡ ಮುಗಿಲ ನುಂಗಿವೆ.

It is darkness vibrant, sonant

ಜಿರಗುಟ್ಟುವ ದುರುಗುಟ್ಟುವ ಕತ್ತಲೋ ಕತ್ತಲು

(vibrant ಎನ್ನುವ ಪದಕ್ಕೆ ದುರುಗುಟ್ಟುವ ಎನ್ನುವ ಪದವನ್ನು ಹಾಗು sonant ಎನ್ನುವ ಪದಕ್ಕೆ ಜಿರಗುಟ್ಟುವ ಎನ್ನುವ ಪದವನ್ನು ಬೇಂದ್ರೆಯವರು ಬಳಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಅಥವಾ ಕಾಡಿನಲ್ಲಿ ಕತ್ತಲೆ ಕವಿದ ಇರುಳಿನಲ್ಲಿ ಏಕಾಕಿಯಾಗಿ ನಡೆಯುತ್ತಿರುವವನಿಗೆ ಈ ದುರುಗುಟ್ಟುವ ಹಾಗು ಜಿರಗುಟ್ಟುವ ಕತ್ತಲೆಯು ಅನುಭವಕ್ಕೆ ಬಂದಿರುತ್ತದೆ.)

In the roaring, whirling wind

ಸುಟ್ಟುರೆಯೆ ಬಿರುಗಾಳಿಯೆ ಲೋಕದತ್ತಲಿತ್ತಲೆ

Are the souls of a million lunatics just loosed from the prison house

ಮುರಿದು ಸೆರೆ ಬಂತು ನೆರೆ ಮರುಳ ಪಡೆಯೆ ಬೆತ್ತಲೆ.

(ಸೆರೆಯಲ್ಲಿ ಬಂಧಿಸಿಟ್ಟ ಹುಚ್ಚು ಆತ್ಮಗಳನ್ನೆಲ್ಲ ಥಟ್ಟನೆ ಬಿಡುಗಡೆ ಮಾಡಿದರೆ ಹೇಗಿರಬೇಕು? ಅಂತಹ ಒಂದು chaotic ಚಿತ್ರಣವನ್ನು ವಿವೇಕಾನಂದರು ಊಹಿಸಿಕೊಳ್ಳುತ್ತಾರೆ. ಬೇಂದ್ರೆಯವರು ಈ lunatic souls ಅನ್ನುವದನ್ನು ‘ಮರಳು ಪಡೆ’ ಎಂದು ಬಣ್ಣಿಸುತ್ತಾರೆ. ರಣರಂಗದಲ್ಲಿ ಸತ್ತವರ ಮತ್ತು ಅರೆಸತ್ತವರ ದೇಹಗಳನ್ನು ಭಕ್ಷಿಸಲು ಬರುವ spirits ಇವು. ಕುರುಕ್ಷೇತ್ರದ ರಣರಂಗದಲ್ಲಿ ಇಂತಹ ಒಂದು ಸನ್ನಿವೇಷವನ್ನು ಕಲ್ಪಿಸಿ ಕನ್ನಡದ ಒಂದು ಮಹಾಭಾರತ ಕಾವ್ಯದಲ್ಲಿ ಮರಳು ಪಡೆಯ ಭೀಭತ್ಸ ಕಾರ್ಯವನ್ನು ಚಿತ್ರಿಸಲಾಗಿದೆ.)

Wrenching trees by the roots

ಮರ ಕಿತ್ತಿವೆ ಬುಡ ತಳ

Sweeping all from the path

ಹಾದಿ ಉಡುಗೆ ಝಳ ಝಳ

The sea has joined the fray

ಕಡಲು ಕುಣಿಯೆ ಗೊಂದಣ

And swirled up mountain waves

ತೆರೆ-ಮುರಿ-ನೊರೆ ಧಂಧಣ

To reach the pitchy sky

ಮಬ್ಬೆ ಮಳೆಯು ನಾಡಿಗೆ, ಮುಗಿಲಿನಂಚು ಕಾಡಿಗೆ.

The flash of lurid light reveals on every side a thousand thousand shades of Death begrimed and black

ಸಾವು ಹೊಂಚು, ಅಯ್ಯೊ ಮಿಂಚು, ಕಣ್ತೆರೆದೆಡೆ ಸುತ್ತಿಗೊಂಡ, ಲಕ್ಷಕೋಟಿ ರೂಪುಗೊಂಡ

Scattering plagues and sorrows

ಸಾವಿನಿಂದ ಮುತ್ತುತ, ಕಷ್ಟ ನಷ್ಟ ಬಿತ್ತುತ

Dancing mad with joy, Come, mother, come!

ಹಿಗ್ಗುಗೊಂಡು ಹುಚ್ಚೆದ್ದು ಕುಣಿವ ತಾಯಿ ಬಾ!

For terror is thy name

ರೌದ್ರಿ ನಿನ್ನ ಹೆಸರು

Death is in thy breath

ಮೃತ್ಯು ನಿನ್ನ ಉಸಿರು

And every shaking step

ನಿನ್ನ ಒಂದು ನಡೆ ಅಡಿ

Destroys a world for e’er

ಜಗವ ಮಾಡೆ ಪುಡಿ ಪುಡಿ

Thou Time,

ಓ ಕಾಳಿ(=ಕಾಲ ಅಂದರೆ Time)

Who dares misery love, and hug the form of Death, dance in the destruction’s dance

ಪ್ರಳಯಂಕರಿ

Come, O Mother, come!

ಬಾ, ತಾಯಿಯೆ ಬಾ!

ಸೃಷ್ಟಿಯನ್ನಷ್ಟೇ ಬಯಸುವದು ಪ್ರತಿ ಜೀವಿಗೂ ಸಹಜ. ಆದರೆ, ಸೃಷ್ಟಿ-ಸ್ಥಿತಿ-ಸಂಹಾರ ಇವು ಭಗವಂತನ ಅನಿವಾರ್ಯ ಕರ್ತವ್ಯಗಳು. ಈ ಸೃಷ್ಟಿ ಹಾಗು ಸಂಹಾರ ಕಾರ್ಯಗಳು ಲಕ್ಷ ಲಕ್ಷ ರೂಪದಲ್ಲಿ ಪ್ರತಿದಿನವೂ ನಡದೇ ಇರುತ್ತವೆ. ವಿವೇಕಾನಂದರು ತಮ್ಮ ಪಾರಮಾನಸ ಪ್ರಜ್ಞೆಯಲ್ಲಿ ಇದನ್ನು ಅನುಭವಿಸುತ್ತಿದ್ದಾರೆ. ದೇವಿಯ ಎಲ್ಲ ರೂಪಗಳೂ ಮನುಷ್ಯನಿಗೆ ಪೂಜ್ಯವೇ. ಆದುದರಿಂದಲೇ ಈ ಸಂಹಾರರೂಪಿಣಿ ದೇವಿಯನ್ನು ಈ ಕವನದಲ್ಲಿ ಅವರು ಆಹ್ವಾನಿಸಿದ್ದಾರೆ, ಭಜಿಸಿದ್ದಾರೆ. ಈ ಆಹ್ವಾನಕ್ಕೆ ಮತ್ತೂ ಒಂದು ಕಾರಣವಿರಬಹುದು. ಭಾರತದಲ್ಲಿ ಆ ಸಮಯದಲ್ಲಿ ಹರಡಿದ ಅಜ್ಞಾನ, ಬಡತನ, ಕ್ಷೋಭೆ ಇವೆಲ್ಲವುಗಳಿಂದ ನೊಂದ ವಿವೇಕಾನಂದರು ಇವು ನಿರ್ಮೂಲವಾಗಿ ಹೊಸ ಸೃಷ್ಟಿಯೊಂದು ಮೈದಳೆಯಲಿ ಎಂದು ಆಶಿಸಿರಬಹುದು. ಪ್ರಳಯದ ನಂತರ ಹೊಸ ಸೃಷ್ಟಿ ಎನ್ನುವದು ಕಾಲಗತಿಯೇ ಆಗಿದೆ. ಈ ಕಾರಣಕ್ಕಾಗಿಯೂ ವಿವೇಕಾನಂದರು ಪ್ರಳಯಕಾಳಿಯನ್ನು ಆಹ್ವಾನಿಸುತ್ತಿರಬಹುದು!

ತಮ್ಮ ಅನುವಾದ-ಕವನದಲ್ಲಿ ಬೇಂದ್ರೆಯವರು ಮೂರು ಭಾಗಗಳನ್ನು ಮಾಡಿರುವದನ್ನು ಗಮನಿಸಬೇಕು. ಮೂಲಕವನದ ಸೊಬಗನ್ನು ಸವಿಯಲು ಓದುಗನಿಗೆ ಇದು ನೆರವು ನೀಡುತ್ತದೆ. ಮೊದಲ ಭಾಗದಲ್ಲಿ ನಿಸರ್ಗದ ಜಡರೂಪದ ಕರಾಳ ವರ್ಣನೆ ಇದೆ. ಇದು ಕಲಾವಿದನು ತನ್ನ ಚಿತ್ರಕ್ಕೆ ಕೊಡುವ ಹಿನ್ನೆಲೆಯ ವರ್ಣವಿದ್ದಂತೆ. ಈ ಭಾಗದಲ್ಲಿಯೇ ವಿವೇಕಾನಂದರು ‘ಮರಳು ಪಡೆ’ಯು ಸೆರೆಯಾಗಿ ಇರುವದನ್ನು ಚಿತ್ರಿಸಿದ್ದಾರೆ.

ಎರಡನೆಯ ಭಾಗದಲ್ಲಿ ಈ ಮರಳು-ಪಡೆಯು ಬಿಡುಗಡೆಗೊಂಡು ಮಾಡುವ ಅನಾಹುತವನ್ನು ಚಿತ್ರಿಸಲಾಗಿದೆ. ಮೊದಲ ಭಾಗದಲ್ಲಿ static ಇದ್ದ ಚಿತ್ರಣವು, ಎರಡನೆಯ ಭಾಗದಲ್ಲಿ dynamic ಆಗಿದೆ. ನಿಸರ್ಗವೆಲ್ಲ ಅಲ್ಲೋಲ ಕಲ್ಲೋಲವಾಗಿದೆ. ಇದರ ಪರಿಣಾಮವಾಗಿ ಎಲ್ಲೆಡೆಯೂ ಸಾವು, ನೋವು ಹಬ್ಬಿವೆ. ಈ ಸಾವು ನೋವಿನ, ಈ ವಿಧ್ವಂಸಕಾರ್ಯದ ಅಧಿಷ್ಠಾತ್ರಿಯು ಬೇರಾರೂ ಅಲ್ಲ; ಅವಳೇ ದೇವಿ! ಇದು ಅವಳಿಗೆ ಹಿಗ್ಗು ನೀಡುತ್ತಿರುವ ಪ್ರಳಯ-ನೃತ್ಯ!

ಮೂರನೆಯ ಭಾಗದಲ್ಲಿ ವಿವೇಕಾನಂದರು ಈ ದೇವಿಯ ಲಕ್ಷಣಗಳನ್ನು ಬಣ್ಣಿಸುತ್ತಾರೆ. ಅವಳ ಹೆಸರೇ ಭಯಂಕರಿ (terror). ಮೃತ್ಯುವೇ ಅವಳ ಉಸಿರು! ವಿವೇಕಾನಂದರು ಅವಳ ಹೆಜ್ಜೆಯನ್ನು shaking step ಎಂದು ಬಣ್ಣಿಸುತ್ತಾರೆ. ಯಾಕೆಂದರೆ ತನ್ನ ಆನಂದದಲ್ಲಿಯೇ ಅವಳು ಮದೋನ್ಮತ್ತಳಾಗಿದ್ದಾಳೆ. ಈ ಹೆಜ್ಜೆಯ ಕೆಳಗೆ ಸಿಲುಕಿದ(--ಬೇರೆ ಮಾರ್ಗವೇ ಇಲ್ಲ!--) ಜಗತ್ತು ಪುಡಿಪುಡಿಯಾಗಿ ಹೋಗುತ್ತದೆ. ಇದು ಯಾಕೆ ಅನಿವಾರ್ಯವೆಂದರೆ ಈ ಸೃಷ್ಟಿ ಹಾಗು ಸಂಹಾರ ಇವು ಕಾಲನಿಯಾಮಕವಾಗಿವೆ. (ಶಂಕರಾಚಾರ್ಯರು ತಮ್ಮ ಸ್ತೋತ್ರವೊಂದರಲ್ಲಿ ‘ಕಾಲೋ ಜಗದ್ಭಕ್ಷಕಃ’ = Time swallows the worlds ಎಂದು ಹೇಳಿದ್ದಾರೆ.) ದೇವಿಯು ‘ಕಾಲಿ’, ಅಂದರೆ ಅವಳೇ ಕಾಲದೇವತೆ.

ವಿವೇಕಾನಂದರು ತಮ್ಮ ಕಾಲಾವಧಿಯಲ್ಲಿ ತಮ್ಮ ಸುತ್ತಲೂ ಹರಡಿದ್ದ ಕಷ್ಟ, ಕಾರ್ಪಣ್ಯ ಹಾಗು ಸಾವು, ನೋವುಗಳನ್ನು ನೋಡಿದವರು. ಇದರಿಂದ ವ್ಯಥಿತರಾದ ಅವರು ‘Diabolical is the scheme of the universe!’ ಎಂದು ಉದ್ಗರಿಸಿದ್ದಾರೆ. ಅದರೆ ಇದೆಲ್ಲ ದೈವಯೋಜನೆ ಎಂದು ಅರಿತು, ಆ ದೈವಕ್ಕೆ ತಮ್ಮನ್ನು ಒಪ್ಪಿಕೊಂಡಿದ್ದಾರೆ. ಹಾಗೆಂದು ಅವರು ಕೈಕಟ್ಟಿ ಕೂಡುವ ಸ್ವಭಾವದವರಲ್ಲ. ಜನಸೇವೆಯೆ ಜನಾರ್ದನನ ಸೇವೆ ಎಂದು ಘೋಷಿಸಿದ ವೀರಸನ್ಯಾಸಿ ಅವರು. ಈ ಕವನದಲ್ಲಿ ಅವರು ಆ ಪ್ರಳಯಂಕರಿ ಕಾಳಿಯನ್ನೇ ಆಹ್ವಾನಿಸುವ ಧೀರತೆಯನ್ನು ತೋರಿಸಿದ್ದಾರೆ. ಈ ವಿನಾಶವನ್ನು ಅವರು ‘souls of a million lunatics just losed' ಎಂದು ವರ್ಣಿಸಬೇಕಾದರೆ, ವಿಶ್ವದ ಈ diabolical scheme ಬಗೆಗೆ ಅವರಿಗಿರುವ ಅತೃಪ್ತಿಯನ್ನು ಅರಿಯಬಹುದು!

ವಿವೇಕಾನಂದರ ಕವನಕ್ಕೆ ಬೇಂದ್ರೆಯವರು ನೀಡಿದ ಕೆಲವು value-additions ಹೀಗಿವೆ:

(೧) ಕವನವನ್ನು ಮೂರು ಭಾಗಗಳಲ್ಲಿ ವಿಭಾಗಿಸಿರುವದರಿಂದ ಓದುಗನಿಗೆ, ಕವನದ ಆಂತರ್ಯವನ್ನು ಹಾಗು ಸೊಬಗನ್ನು ಗ್ರಹಿಸಲು ಅನುಕೂಲವಾಗುತ್ತದೆ.

(೨) ಎರಡನೆಯ ಭಾಗದ ಕೊನೆಯ ಸಾಲನ್ನು ಬೇಂದ್ರೆಯವರು ಅನುವಾದಿಸಿದ ರೀತಿ ಅಪೂರ್ವವಾದದ್ದು.

‘Dancing mad with joy, Come, mother, come!’ ಅನ್ನುವ ಸಾಲನ್ನು ಬೇಂದ್ರೆಯವರು

‘ಹಿಗ್ಗುಗೊಂಡು ಹುಚ್ಚೆದ್ದು ಕುಣಿವ ತಾಯಿ ಬಾ!’ ಎಂದು ಅನುವಾದಿಸಿದ್ದಾರೆ. ಮೂಲದಲ್ಲಿ ಇರದ ಆವೇಶ ಅನುವಾದದಲ್ಲಿ ಮೈದೋರಿದೆ.ಇದರ ತಾಂತ್ರಿಕ ಕಾರಣವೆಂದರೆ, ಈ ಪದಭಾಗದ ಮೇಲೆ ಒತ್ತು ಬರುವಂತೆ ಬೇಂದ್ರೆಯವರು ಕವನದ ಓಟವನ್ನು ರೂಪಿಸಿದ್ದಾರೆ.

(೩) ಉದ್ವೇಗ ತುಂಬಿದ ಎರಡನೆಯ ಭಾಗ ಮುಗಿದು ಮೂರನೆಯ ಭಾಗವು ಪ್ರಾರಂಭವಾದಾಗ, ಅನುವಾದದಲ್ಲಿ ಸುವ್ಯಕ್ತವಾಗಿ ಕಾಣುವ ತಾತ್ವಿಕ resignation, ಮೂಲಭಾಗದಲ್ಲಿ ಅಸ್ಪಷ್ಟವಿದೆ.

ವಿವೇಕಾನಂದರ ಕವನವು ಬೇಂದ್ರೆಯವರಲ್ಲಿ ಮರುಹುಟ್ಟು ಪಡೆದಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

[ಟಿಪ್ಪಣಿ:

Raghavendra said...

ಪ್ರೀತಿಯ ಸುನಾಥ್ ಸರ್, ವಿವೇಕಾನಂದರ ಈ ಕವನದ ಬೇಂದ್ರೆಯವರ ಅನುವಾದ ಅತ್ಯಂತ ಸುಂದರವಾಗಿದೆ. ಆದರೆ, ವಿವೇಕಾನಂದರ ಈ ಕವನದ ಆತ್ಮ ಎಂದು ಯಾವ ಭಾಗವನ್ನು ಕರೆಯಬಹುದೋ ಅದೇ ಬೇಂದ್ರೆಯವರ ಅನುವಾದದಲ್ಲಿ ಮಿಸ್ ಆಗಿಬಿಟ್ಟಿದೆ. ನನಗಂತೂ ತುಂಬ ನಿರಾಸೆಯಾಗಿದೆ. ನಾನು ಆ ಭಾಗವನ್ನು ಬೇಂದ್ರೆಯವರು ಹೇಗೆ ಅನುವಾದಿಸಿರಬಹುದು ಎಂಬ ಕುತೂಹಲದಿಂದ ಓದುತ್ತ ಹೋದರೆ ಅದು ಇಲ್ಲವೇ ಇಲ್ಲವಾಗಿದೆ. Who dares misery love, And hug the form of Death, Dance in destruction's dance To him the Mother comes. ಈ ಭಾಗ ಇಡೀ ಕವನದ ಆತ್ಮಭಾಗ ಅಂತ ನನಗೆ ಅನ್ನಿಸುತ್ತದೆ. ಮೊದಲ ಭಾಗದಲ್ಲಿ ನಿಸರ್ಗದ ಜಡರೂಪವು ಎರಡನೆಯ ಭಾಗದಲ್ಲಿ ಅತ್ಯಂತ ರೌದ್ರವಾದ ಚಲನೆಯನ್ನು ಪಡೆದುಕೊಳ್ಳುತ್ತದೆ, ಮತ್ತು ಮೂರನೆಯ ಭಾಗದಲ್ಲಿ ಮೃತ್ಯುವೇ ಆದ ಆ ದೇವಿಯನ್ನು ವಿವೇಕಾನಂದರು ಬಣ್ಣಿಸುತ್ತಾರೆ. ಈ ಮೂರು ಭಾಗಗಳಲ್ಲಿಯೂ ಹೊರಗೇ ಘಟಿಸುವ ಈ ಘಟನೆ ನಾಲ್ಕನೆಯ ಭಾಗದಲ್ಲಿ ಆಂತರ್ಯಕ್ಕೆ ಸಾಗುತ್ತದೆ. ಆ ಸಾಲುಗಳನ್ನು ಸ್ಥೂಲವಾಗಿ ಅನುವಾದಿಸುವುದಾದರೆ: "ಯಾರು ಸಾವಿನ ದೇವತೆಯ ಪ್ರೇಮವನ್ನು ಒಪ್ಪಿಕೊಳ್ಳುತ್ತಾನೆ, ಯಾರು ಲಯಕಾರಕಳಾದ ಕಾಳಿಯನ್ನು ಅಪ್ಪಿಕೊಳ್ಳುತ್ತಾನೆ ಮತ್ತು ಆ ವಿಧ್ವಂಸಕ ನರ್ತನದ ಜೊತೆಗೇ ನರ್ತಿಸಲು ಸಿದ್ಧನಾಗುತ್ತಾನೆ ಅಂತವನಲ್ಲಿಗೆ ಆ ದೇವಿ ಬರುತ್ತಾಳೆ, ದೈವತ್ವ ಅವನದಾಗುತ್ತದೆ" ಬ್ರಹ್ಮಾಂಡದಲ್ಲಿ ಹುಟ್ಟು-ಸಾವು ಒಟ್ಟಿಗೇ ಘಟಿಸುತ್ತಿರುತ್ತದೆ, ಸೃಷ್ಠಿಯಾಗುತ್ತಿದ್ದಂತೆ ಲಯವೂ ಒಟ್ಟೊಟ್ಟಿಗೇ ಆಗುತ್ತಿರುತ್ತದೆ. (ಪ್ರತೀ ಒಳ-ಉಸಿರೂ ಹುಟ್ಟು, ಪ್ರತೀ ಹೊರ-ಉಸಿರೂ ಸಾವು.) ಆದರೆ ಎಷ್ಟು ಜನರಿಗೆ ಆ ಮರಣವು ಮಹಾನವಮಿ ಎಂದು ಸ್ವೀಕರಿಸುವ ಚೈತನ್ಯವಿದ್ದೀತು? ಅಂತಹ ಚೈತನ್ಯವಿದ್ದವನಿಗೆ ಮಾತ್ರ ದೇವಿ ದೊರೆಯುತ್ತಾಳೆ ಎಂಬುದು ಕೊನೆಯ ಪ್ಯಾರಾದ ಅರ್ಥ ಎಂದು ನನಗನ್ನಿಸುತ್ತದೆ. ತಾಂಡವವಾಡುವ ಕಾಳಿಯ ವಿನಾಶೀ ವಿಜ್ರಂಭಣೆಯನ್ನು ಒಪ್ಪಿಕೊಳ್ಳುವವ, ಆ ವಿಜ್ರಂಭಣೆಯನ್ನು ತನ್ನಲ್ಲಿ ಸ್ವೀಕರಿಸುವವ ದೇವೀ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ ಎಂಬುದೇ ಈ ಕವಿತೆಯ ಮುಖ್ಯ ಅರ್ಥ. ಆದರೆ ಬೇಂದ್ರೆಯವರು ಇದನ್ನು ಬಿಟ್ಟಿದ್ದಾರೆಯೇ? ನಿಮ್ಮ ವಿವರಣೆಯಲ್ಲಿಯೂ ಈ ಭಾಗ ನನಗೆ ಕಾಣಲಿಲ್ಲ. ಈ ನನ್ನ ಅನಿಸಿಕೆ ಸರಿಯೇ ತಿಳಿಸಿ.

October 6, 2010 12:48 PM

sunaath said...

ರಾಘವೇಂದ್ರರೆ, ನೀವು ತೋರಿಸಿದ ಅನುವಾದ ಲೋಪವು ಅತ್ಯಂತ ಸಮಂಜಸವಾಗಿದೆ. ಮತ್ತು ಅದರ ಅನುವಾದವನ್ನು ನೀವು ಅತ್ಯಂತ ಸಮರ್ಪಕವಾಗಿ ಗದ್ಯರೂಪದಲ್ಲಿ ನೀಡಿದ್ದೀರಿ. ಬೇಂದ್ರೆ ಯಾಕೆ ಈ ಭಾಗವನ್ನು ಬಿಟ್ಟರು ಎನ್ನುವದನ್ನು ನಾನು ಊಹಿಸಿಕೊಳ್ಳಲಾರೆ.ಒಟ್ಟಿನಲ್ಲಿ ಇದು ಬೇಂದ್ರೆಯವರಿಂದ ಘಟಿಸಿದ ಲೋಪ ಎಂದು ಹೇಳಲೇಬೇಕು. ದೇವಿಯ ವಿನಾಶಕಾರಿ ರೂಪದಿಂದ ತನ್ನ ಮನಸ್ಸಿಗೆ ಆಘಾತವಾಗುತ್ತಿದ್ದರೂ ಸಹ, ತಾನು ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳಲೇಬೇಕೆನ್ನುವದು ವಿವೇಕಾನಂದರ ಆಶಯ. ಆ ಆಶಯವನ್ನು ಬಿಟ್ಟು, ಕೇವಲ ದೇವಿಯ ರೂಪವನ್ನು ಚಿತ್ರಿಸುವದಷ್ಟೇ ಬೇಂದ್ರೆಯವರ ವಿಚಾರವಿದ್ದಿದ್ದೀತು. ಆದರೆ, ಅನುವಾದಕನು ಇಂತಹ ಸ್ವಾತಂತ್ರ್ಯವನ್ನು ವಹಿಸಬಾರದು. ನಿಮ್ಮ ಆಕ್ಷೇಪಣೆಯು ಮೌಲಿಕವಾಗಿರುವದರಿಂದ, ಈ ಆಕ್ಷೇಪಣೆಯನ್ನು ಹಾಗು ಅದಕ್ಕೆ ನನ್ನ ಸಮ್ಮತಿಯನ್ನು ನಾನು ಮೂಲಲೇಖನದ ಟಿಪ್ಪಣಿಯಲ್ಲಿ ಸೇರಿಸುತ್ತೇನೆ (ನಿಮ್ಮ ಅನುಮತಿಯ ಪೂರ್ವಗ್ರಹಿಕೆಯೊಂದಿಗೆ!)