ಜಿ ಎಸ್ ಶಿವರುದ್ರಪ್ಪ

ಜಿ ಎಸ್ ಶಿವರುದ್ರಪ್ಪ - (ಜನನ:ಫೆಬ್ರುವರಿ ೭,೧೯೨೬) ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರು. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು. ನವೆಂಬರ್ ೧,೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು.ಸುಮಾರು ಐದೂವರೆ ದಶಕಗಳಿಂದ ಕಾವ್ಯ ಕೃಷಿ ಮಾಡುತ್ತಿರುವ ಶಿವರುದ್ರಪ್ಪ,ಕವಿ ಮಾತ್ರವಲ್ಲ,ಬರಹಗಾರ,ವಿಮರ್ಶಕ,ವಿಶ್ಲೇಷಕ ಹಾಗೂ ನವೋದಯ ಮತ್ತು ನವ್ಯ ಪ್ರಕಾರಗಳೆರಡರಲ್ಲೂ ಕಾವ್ಯ ರಚನೆ ಮಾಡಿರುವ ಸಮರ್ಥರು.

ಜಿ.ಎಸ್. ಶಿವರುದ್ರಪ್ಪನವರು ಅನೇಕ ಭಾವಗೀತೆಗಳನ್ನೂ ರಚಿಸಿದ್ದು,'ಉಡುಗಣ ವೇಷ್ಟಿತ', 'ಎದೆ ತುಂಬಿ ಹಾಡಿದೆನು ಅಂದು ನಾನು', 'ಹಾಡು ಹಳೆಯದಾದರೇನು? ಭಾವ ನವನವೀನ', 'ಎಲ್ಲೋ ಹುಡುಕಿದೆ ಇಲ್ಲದ ದೇವರ', 'ವೇದಾಂತಿ ಹೇಳಿದನು' ಮುಂತಾದವು ಅವರ ಅತ್ಯಂತ ಜನಪ್ರಿಯವಾಗಿರುವ ಭಾವಗೀತೆಗಳಾಗಿವೆ. ಶಿವರುದ್ರಪ್ಪನವರ ಪ್ರಥಮ ಒಲವು ಕವಿತೆ,ನಂತರ ಸಾಹಿತ್ಯಿಕ ವಿಮರ್ಶೆ.ಆದರೆ ಅವರಿಗೆ ೧೯೮೪ರಲ್ಲಿ 'ಕೇಂದ್ರ ಸಾಹಿತ್ಯ ಅಕಾಡೆಮಿ'ಯ ಪ್ರಶಸ್ತಿ ತಂದುಕೊಟ್ಟದ್ದು ಅವರ ಗದ್ಯ ಕೃತಿ "ಕಾವ್ಯಾರ್ಥ ಚಿಂತನ".

ಡಾ.ಜಿ.ಎಸ್.ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಫೆಬ್ರುವರಿ ೭,೧೯೨೬ ರಂದು ಜನಿಸಿದರು. ತಂದೆ ಶಾಲಾ ಉಪಾಧ್ಯಾಯರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಆನರ್ಸ್ (೧೯೪೯); ಎಂ.ಎ. (೧೯೫೩) ಪ್ರಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು. ಕುವೆಂಪುರವರ ಮೆಚ್ಚಿನ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು.೧೯೬೫ರಲ್ಲಿ ತಮ್ಮ ಗುರುಗಳಾದ ಕುವೆಂಪುರವರ ಮಾರ್ಗದರ್ಶನದಲ್ಲಿ ಬರೆದ 'ಸೌಂದರ್ಯ ಸಮೀಕ್ಷೆ' ಎಂಬ ಗ್ರಂಥಕ್ಕೆ ಪಿಹೆಚ್‌ಡಿ ಪದವಿ ಪಡೆದರು.

ತಾವು ಓದಿದ ಮೈಸೂರು ವಿಶ್ವವಿದ್ಯಾಲಯದಲ್ಲೇ ೧೯೪೯ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು ೧೯೬೩ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ಹೋಗಿ ೧೯೬೬ರ ವರೆವಿಗೂ ಅಲ್ಲಿ ಸೇವೆ ಸಲ್ಲಿಸಿದರು. ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ ೧೯೮೭ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು.

ಕವನ ಸಂಕಲನಗಳು

    • ಸಾಮಗಾನ

    • ಚೆಲುವು-ಒಲವು

    • ದೇವಶಿಲ್ಪಿ

    • ದೀಪದ ಹೆಜ್ಜೆ

    • ಅನಾವರಣ

    • ತೆರೆದ ಬಾಗಿಲು

    • ಗೋಡೆ

    • ವ್ಯಕ್ತಮಧ್ಯ

    • ತೀರ್ಥವಾಣಿ

    • ಕಾರ್ತಿಕ

    • ಕಾಡಿನ ಕತ್ತಲಲ್ಲಿ

    • ಪ್ರೀತಿ ಇಲ್ಲದ ಮೇಲೆ

    • ಚಕ್ರಗತಿ

ಚಿತ್ರ ಕೃಪೆ: http://dgmalliphotos.blogspot.com/2009/02/blog-post_19.html