ಸಂಜೆ ಹಾಡು.
೧.ಸಂಜೆ ಪಯಣ.
ಸಂಜೆ ಬೆಳಕಿನ ನಡುವೆ ಒಂಟಿ ದೀಪವ ಹಿಡಿದು
ನಾನು ಹೊರಟಿದ್ದೆನೆ ನಿನ್ನ ಮನೆಗೆ;
ದೊರ ಪಯಣ ನೋವು ನನ್ನನಾವರಿಸಿಹುದು
ಗವಿಯ ಇನ್ನೋಂದು ಮುಖ ಕಾಣಲಿಲ್ಲ.
ಅದರಾಚೆಗೊಂದು ಉದ್ಯಾನವಿಹುದೆನ್ನುವರು
ಪನ್ನೀರ ಚಿಲುಮೆಗಳ ಬಳಸಿನಲ್ಲಿ;
ಹೆಜ್ಜೆಯಿಕ್ಕಿದೆ ನಾನು ಬರಿದೆ ಗೋಳಡುವೆನು
ಬೆಳ್ಳಿ ಬೆಳಕನು ಕಾಣುವಾಸೆಯಿಂದ.
ಒಣಮರದ ಮೇಲೊಂದು ಕಪ್ಪು ಹಕ್ಕಿಯು ಕುಳಿತು
ಹಳೆಯ ಹಾಡನು ಮತ್ತೆ ತೆರೆಯುತಿಹುದು;
ಪಯಣವನು ನಿಲ್ಲಿಸಲು ಐದಾರು ಸಲ ನಾನು
ಗುಹೆಯ ನಡುವಣ ಹಾದಿಯಲ್ಲಿ ನಿಂತೆ.
ಇನ್ನೊಂದು ಜೀವ ಕೈ ಹಿಡಿದು ಜೊತೆಗೊ ಬಂದು
ಬೆಳಕ ತೋರುವೆನೆಂದು ಹೇಳುತಿಹುದು;
ಹೊರ ಬಂದೆ, ಮಳೆಬಿಲ್ಲ ಕಂಡೆ ಬಲುದೂರದಲಿ
ಈ ಲೋಕ ಹೀಗೆಯೇ ಎಂದುಕೊಂಡೆ.
೨.ಕಾಯುವೆನು ಅವರಿಗಾಗಿ.
ನಕ್ಕ ನಿಮಿಷಗಳಿಂದ ನಾನು ಮೌನಕೆ ಬಂದೆ,
ದೂರ ದೂರದ ಕನಸ ತುಂಬಿಕೊಂಡು;
ಯಾರೊ ಬಂದರು ಎಂದು ನನಗಿವಳು ಹೇಳೀದಳು,
ಮುತ್ತುಸಂಜೆಯ ಕಡೆಯ ನಿಮಿಷದಲ್ಲಿ.
ಯಾರು ಬಂದರು ಎಂದು ನನಗೆ ಹೊಳೆಯುತ್ತಿಲ್ಲ,
ಇವಳು ನಕ್ಕಳು ನನ್ನ ಕಡೆಗೆ ನೋಡಿ;
ನನ್ನನ್ನು ಬಲ್ಲ ಜನ ನನಗುಂಟು ಊರಿನಲಿ,
ತಿಳಿದಿಲ್ಲ ನನಗವರ ಇಂಗಿತಗಳು.
ಬಂದವರು ನನ್ನವರು ಎಂದು ತಿಳೀದಿದ್ದೇನೆ,
ದೂರದಲಿ ಹಲವು ದನಿ ಕಿವಿಗೆ ಬಿತ್ತು;
ಅವರು ಯಾರೇ ಇರಲಿ, ಅವರಿಗೊಳಿತನು ಬಯಸಿ,
ಕಾಯುವೆನು ಇದ್ದಲ್ಲೆ ಅವರಿಗಾಗಿ.
೩.ಬದುಕು ಮತ್ತು ಹಾಡು.
ಎಲ್ಲಿ ಕತ್ತಲೆಯಿತ್ತೊ ಅಲ್ಲಿ ತನ್ನಿರಿ ಬೆಳಕ
ಹಸಿದ ಹೊಟ್ಟೆಯ ಮೇಲೆ ಬೆಳ್ದಿಂಗಳನು ಚೆಲ್ಲಿ
ಮುಂಬರಿವ ನಮಗೆ ಶುಭವನ್ನು ತರಲಿ;
ಮಲಗಿದರೆ ಕನಸು, ಎದ್ದರೆ ಪಯಣ : ಹೀಗಿದೆ ಬದುಕು
ಹಾದಿಯುದ್ದಕು ಹೂವ ಚಲ್ಲುತಿರಲಿ.
ತುಟಿ ಒಣದವರ ಹಾಡನ್ನು ಕೇಳುವಿರೇನು ?
ಆದರೂ ಹಾಡು ಬರುವುದು ಸಂಜೆಯೊಳಗಾಗಿ
ಕನಸಿನ ಪರಂಪರೆಯ ನೆಯ್ದು ;
ಹಾದಿಬೀದಿಗಳಲ್ಲಿ ಬತ್ತಲೆ ಮಗು ಅತ್ತು
ಸಂಜೆಯಾಯಿತು ಎಂಬ ಚಿಂತನೆಯಲಿ.
ಕೆರೆ ಬತ್ತಿದಾಗ ಕಣ್ಣಲ್ಲಿ ನೀರು ಬರುವುದು
ರೊಕ್ಕವನು ಕೊಟ್ಟು ಕೊಳ್ಳುವ ಸರಕೆ ಸಂತೋಷ ?
ಸಂಗೀತಕ್ಕೆ ಬೇಕು ಶ್ರುತಿ, ಲಯ, ಆಲಾಪನೆ
ಹಸಿವ ಹಾಡುವುದೆಂತು, ತಾಳವೆಲ್ಲಿವೆ ಅದಕೆ ?
ಬೀದಿ ದೀಪದ ಕೆಳಗೆ ಸತ್ತ ನಾಯಿಯ ಸುತ್ತ
ಹತ್ತಾರು ಮಕ್ಕಳು ಮರಿ ;
ಬೀದಿನಲ್ಲಿಯ ತುಟಿಗೆ ಭೃಂಗ ಮುತ್ತಿಕ್ಕುವುದು.
ಕುಡಿವ ನೀರಿಗೆ ಸಹಿತ ಕಷ್ಟವಾಗಿರುವಾಗ
ಯಾವ ರಾಗದಿ ಹಾಡಿದರೆ ಕೊಡ ತುಂಬುವುದು ?
ಬಾಯಿ ತುಂಬುವ ತನಕ ಹಾಡು ತುಂಬುವುದಿಲ್ಲ.
ದೇಗುಲ ಬಾಗಿಲಲಿ ಮಂತ್ರಾಕ್ಷತೆಯ ಚೆಲ್ಲಿ
ಹೊರಟು ಹೋಗಿದ್ದಾರೆ ನಂಬುವ ಜನ;
ಧಾತು - ಈಶ್ವರಗಳಲಿ ಕ್ಷಾಮ ಬಂದಿತ್ತೆಂದು
ಅಜ್ಜಯ್ಯ ಹಾಡುವನು ಮರಿಮಗನಿಗೆ.
ಈಗ ಎಲ್ಲೆಲ್ಲು ಹಾಹಾಕಾರವೆದ್ದಿಹುದು,
ಈ ಅಶಾಂತಿಯೇ ನಿಮಗೆ ಎಲ್ಲ ಹಾಡು.
ಯಾವ ಹಾಡನು ನೀವು ಕೇಳಬಯಸುತ್ತೀರಿ,
ಹಾಡು ಕೇಳುವುದಷ್ಟೆ ಸಂತೋಷವೆ ?
ಹಾಡು, ಗೋಡೆಗೆ ಒರಗು, ಕಣ್ಣು ಮುಚ್ಚಿಕೊ
ಆಗ ಬರುವುದು ಬುದ್ದಿ!
ಕೆಲವರಿಗೆ ಹಾಡು ಬೇಕಂತೆ, ಕೇಳದ ಒಡನೆ
ನಿದ್ದೆ ಬರಬೇಕಂತೆ! ಅದು ಎಲ್ಲಿ ಸಿಕ್ಕುವುದು ?
ಬಾಂದಳದ ತನಕ ಕ್ಯೂ ಬೆಳೆದಿರುವುದು,
ತಂತಿಗಳ ಕಿತ್ತ ತಂಬೂರಿಯಾಯಿತು ಹಾಡು!
ನೊಂದ ಜೀವಕ್ಕೆ ಬೇಕಾದ್ದು ಸಿರಿಹಾಡು. ಇಂಪಾದ ಹಾಡು
ಚೆಲುವು ಸೂಸುವ ಹಾಡು, ಭಾವಪೂರ್ಣ ಹಾಡು;
ದುರ್ಭಿಕ್ಷದಲಿ ನಾವದನು ಪಡೆಯುವುದು ಹೇಗೆ ?
ಯಾರೊ ಅತ್ತಂತಾಯ್ತು ಹಾಡು ಮುಗಿದು.
೪.ಆಹ್ವಾನ.
ಹೂವ ಚೆಲ್ಲಿದ ಹಾದಿಯಲ್ಲಿ ನಾನಿದ್ದೇನೆ
ಸಂಪಿಗೆಯ ನರುಗಂಪು ಅರಳುತಿಹುದು ;
ಹಳೆಯ ನೆನೆಪುಗಳಲ್ಲಿ ಚೆಲುವ ಕಂಡಿದ್ದೇನೆ
ಹೂವ ಮೇಗಣ ಗಾಳಿ ಬೀಸುತಿಹುದು.
ವರುಷ ಕಳೆದರೆ ವರುಷ ಹೊಸ ದನಿಯ ಪುಟಗಳಲಿ
ನಲಿವು ತೆರೆಯುತ್ತಿಹುದು ಪ್ರೀತಿಯಿಂದ ;
ಮಾಘ ಮಾಸದ ಸಂಜೆ ನೀನು ಸಿಕ್ಕಿದ್ದೀಯೆ
ಹೊಸತು ಏನಾದರೂ ಬೇಕೆನ್ನುವೆ.
ನನ್ನ ಕನ್ನಡಿ ಹಳತು, ಮುಖ ಹೊಸತು, ಓ ಗೆಳೆಯ
ನೀನು ಬಂದಿದ್ದೀಗ ಸರಿಹೋಯಿತು ;
ಚಿತ್ರ ಮರುಕೊಳಿಸುವುದು, ಚೆಲುವು ಸರಿವುದು ಬಲಕೆ
ಗೆಲವು ಬಾವುಟವೆತ್ತಿ ಕಾಯುವುದು.
ಹೊಸ ಕಾಣ್ಕೆ, ಹೊಸ ಕಣ್ಣು ಕೈ ಬೀಸಿ ಕರೆಯುತಿದೆ
ಸಂಗೀತ ಹರಿಯುತಿದೆ ಕಣೆವೆಯಲ್ಲಿ;
ಕೆಲವು ಹಾಡುಗಳಂತು ಕಣ್ಣೀರ ಸುರಿಸುತ್ತ
ಮುಂದೆ ನಡೆವುವು ಮುತ್ತುಸಂಜೆಯಲ್ಲಿ.
ಬಾ ಗೆಳೆಯ, ಗೋಧೂಳಿಯಲ್ಲಿ ಚಾಟಿಯನೆಸೆದು
ನೋವು ನಲಿವುಗಳನ್ನು ನೆನೆಯುತ್ತ ಬಾ;
ಹಳತು ಹೊಸತಾಗುವುದು ನಮ್ಮೂರ ಬೀದಿಯಲಿ,
ನಕ್ಷತ್ರಗಳ ಕೆಳಗೆ ದಾರಿ ಸುಗಮ.
೫.ಕೈಮರದ ಬಳಿ.
ಕೆಲವು ಹೂ ರಾತ್ರಿಯಲ್ಲರಳಿ ಕಂಪನು ಬೀರಿ ನೆಲಕೆ ಬೀಳುವುವು;
ಮುಂಬೆಳಗಿನಲ್ಲಿ ಹಕ್ಕಿಯ ಹಾಡು ಪರಿಮಳಿಸಿ ಮುಗಿದು ಬಿಡುವುದು;
ಕೆಲವು ಮಕ್ಕಳು ಉಂಡೊ ಉಣ್ಣದೆಯೊ ಹೋಗುವುವು ತಂತಮ್ಮ ಶಾಲೆಗಳಿಗೆ;
ಬಸಿರಿ ಭಾವಿಗೆ ಬಂದು ಬಿಂದಿಗೆಯ ನೂಕುವಳು ತಳದ ನೀರಿಗೆ;
ಅಂಗಡಿಯ ತೆರೆದು ಧೂಳನು ಹೊಡೆದು ಕೂರುವರು ನಮ್ಮೂರ ವರ್ತಕರು;
ಊರ ದೇಗುಲದಲ್ಲಿ ಕೇಳಿ ಬರುವುದು ಭಜನೆ, ಅಜ್ನಾತ ಸಂಗೀತ;
ಚೈತ್ರಚಿತ್ರೋದಯದ ಗುಂಗಿನಲಿ ನಾನಿದ್ದು ಹೂವಿನಂತಹ ಮಾತು ಬಿಡಿಸುವೆನು ಪ್ರೀತಿಯಲಿ.
ಎಲ್ಲದರ ಆಚೆಗಿನ್ನೊಂದಿಹುದು ಎನ್ನುವರು ಎಲ್ಲತಿಳಿದವರು, ಜೊತೆಗೂ ಬರುವ ಸ್ನೇಹಿತರು;
ನೀರು ತಿಳಿಯುವ ತನಕ ಕಾದು ನಿಲ್ಲುವುದಷ್ಟೆ ನಮ್ಮ ಕರ್ತವ್ಯ;
ಯಾರು ಕೇಳಲಿ ನಾನು ಗುಡಿಯೊಳಗೆ ಇರುವುದೆ ನಮ್ಮ ದೇವರು ಎಂದು?
ಕೈಮರದ ನೆರಳಿನಲಿ ಸರದಿಯಲಿ ಬಂದೆ ಬರುವರು ಎಂದು ನಾನು ನಂಬಿದ್ದೆನೆ;
ಹೆಜ್ಜೆಗಂಟಿದ ನೆರಳ ದಾಟಲಾರದೆ ನಾನು ಹಳೆಯ ಹಾಡೊಂದನ್ನು ಹಾಡುತ್ತಲಿದ್ದೇನೆ;
ಬಿಸಿಲಕಾವಿಗೆ ನೊಂದು ಸುಖದುಃಖಗಳ ನಡುವೆ ಹಾಡಿಕೊಂಡಿದ್ದೇನೆ.
೬.ನನ್ನ ಮನೆಗೇ ನಾನು ಅತಿಥಿ.
ಕತ್ತಲೆಯ ಕೋಣೆಯಿಂದೆದ್ದು ಬಣ್ದವ ನಾನು
ಬಾಗಿಲನು ತೆರೆದು ಹುಣ್ಣಿಮೆಯ ಸಿರಿಗೆ ;
ದೂರ ಯಾವುದೊ ಹಕ್ಕಿ ಹೆಮ್ಮರದ ಕೊಂಬೆಯಲಿ
ರೆಕ್ಕೆ ಬಡಿಯಿತು ಇರುಳ ಸಂಭ್ರಮದಲಿ.
ಬೆಳಕು ಹರಿಯಿತು, ಹಕ್ಕಿಹಾಡು ಮೊದಲಾಗಿತ್ತು
ಕೊಂಬೆ ತುದಿಯಲಿ ಇದ್ದ ಹಣ್ಣ ಕೆಡವಿ ;
ಬೆಳಗಾಗ ಕಡಲ ತಡಿಗೋಡಿದೆನು ಆತುರದಿ
ಕಂಡೆ ನಾ ಮುನ್ನೀರಿನದ್ಭುತವನು.
ದೋಣಿ ಒಂದೊಂದಾಗಿ ಕಡಲೆದೆಗೆ ನುಗ್ಗಿದವು
ಸಂತಸದಿ ಹಾಡಿದಳು ಕಪ್ಪುಹುಡುಗಿ ;
ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ, ಅದಕ್ಕೆ
ಕಂಡ ನೋಟ ಸಮುದ್ರದಂಥ ಪ್ರಾಣಿ.
ಮುನ್ನೀರ ಘೋಷದಲಿ ಬಾಳ ಹಾದಿಯ ಕಂಡೆ,
ನಾ ಕಂಡೆ ದೋಣಿಗರ ಸಾಹಸವನು ;
ದೂರದೂರದ ದೋಣಿ ಹಾಡ ಕೇಳಿದೆ ನಾನು,
ಎದೆ ತುಂಬ ಪ್ರೀತಿಯನು ತುಂಬಿಕೊಂಡೆ.
ನಾನು ಚುಂಬಿಸಲಾರೆ, ಚುಂಬಿಸದೆ ಇರಲಾರೆ
ಅಡ್ದ ಗೋಡೆಯ ಮೇಲೆ ದೀಪ ನಾನು ;
ನನ್ನ ನಿರ್ಧಾರವನು ಕಡಲ ನೀರಿಗೆ ಬಿಟ್ಟೆ,
ಕಪ್ಪೆಚಿಪ್ಪುಗಳನ್ನು ನೀರಿಗೆಸೆದೆ.
ಹಬ್ಬದೂಟಕ್ಕೆಂದು ಮನೆಗೆ ಬಂದರೆ ನಾನು
ಕೋಣೆಯೊಳಿರಲಿಲ್ಲ ಅಡುಗೆಯವನು ;
ಊಟಕ್ಕೆ ಕರೆದವನು ನಾನೆ, ಬಂದವ ನಾನೆ
ನನ್ನ ಮನೆಗೇ ನಾನು ಒಬ್ಬ ಅತಿಥಿ!.
೭.ನನಗೆ ನಂಬಿಕೆ.
ಹಣ್ಣು ಹೂವುಗಳಿಂದ ನಿನ್ನನರ್ಚಿಸಲರಿಯೆ,
ಕ್ಷೀರಾಭಿಷೇಕವನು ಮಾಡಲಾರೆ;
ಸಂಜೆ ಮುಂಜಾನೆಯಲಿ ನಿನ್ನ ನೆನೆಯುವುದೊಂದೆ
ಕರ್ತವ್ಯವೆಂಬುದನು ನಾನು ಬಲ್ಲೆ.
ಶಂಖಗಳ ನಾನೂದೆ, ಜಾಗಟೆಯಾ ಬಾಜಿಸೆನು
ಮಂಗಳಾರತಿಯ ನಾ ಬೆಳಗಲರಿಯೆ;
ನಿನ್ನ ನೆತ್ತಿಯ ಮೇಲೆ ಸೀಯಾಳವನು ಸುರಿದು
ಕರವಸ್ತ್ರದಿಂದದನು ಒರೆಸೆ ನಾನು.
ಶಾಲ್ಯಾನ್ನ ಭೋಜನವ ನಾನು ಒದಗಿಸಲಾರೆ,
ನಿನ್ನ ಪ್ರಸಾದವನು ಹಂಚಲಾರೆ;
ಬತ್ತಲೆಯ ಮೂಲ ಮೂರ್ತಿಯನು ಕಾಣುವೆ ನಾನು,
ಉತ್ಸವದ ಮೂರ್ತಿಯನು ಹೊಗಳಲಾರೆ.
ಹೊರಗಣ್ಣ ಮುಚ್ಚಿದರೆ ಒಳಗಣ್ಣು ತೆರೆಯುವುದು,
ಕಾಣುವುದು ಎಲ್ಲೆಲ್ಲು ವಿಶ್ವರೂಪ;
ಕಷ್ಟದಲಿ ನೀನೆನ್ನ ಕೈಬಿಟ್ಟೆನೆನ್ನದೆಯೆ
ಭಜಿಸುವೆನು, ನನಗಿಲ್ಲ ಇಷ್ಟು ಕೋಪ.
ಕೊನೆಯಿರದ ದಾರಿಯಲಿ ನಾನು ಮುಂಬರಿಯುತ್ತ
ನಿನ್ನ ನೆನೆಯುತ್ತೇನೆ ಭಕ್ತಿಯಲ್ಲಿ;
ನಿನ್ನೊಲವು ನನ್ನ ಸಂರಕ್ಷಿಸುತ ಬರುತಿಹುದು,
ನನಗೆ ನಂಬಿಕೆ ನಿನ್ನ ಶಕ್ತಿಯಲ್ಲಿ.
೮.ಮಳೆ ನಿಂತಿತ್ತು.
ಮಳಿ ನಿಂತಿತ್ತು. ಹೂ ಅರಳಿತ್ತು
ತಣ್ಣಗೆ ಬೀಸಿತು ಗಾಳಿ ;
ಎಲ್ಲರ ಎದೆಯಲಿ ಸಂತಸವಿತ್ತು
ಪ್ರೇಮಗೀತೆಯನು ಕೇಳಿ.
ದಾರಿಯ ಉದ್ದಕು ಶಾಲೆಯ ಮಕ್ಕಳು
ಬಂದರು ನಗುನಗುತ ;
ತಣ್ಣನೆ ನೆರಳಲಿ ನಡೆಯುತ್ತಿತ್ತು
ಸುಂದರಾಂಗಿಯರ ಕುಣಿತ.
ಕಬ್ಬಿನ ಗದ್ದೆಯ ಒಳಗೂ ಹೊರಗೂ
ಕುಣಿಯುವ ನವಿಲಿನ ಕೇಕೆ ;
ನಕ್ಕರು ಎಲ್ಲರು, ಈಕೆ ಕೇಳಿದಳು
'ಎಲ್ಲರು ನಗುವುದು ಏಕೆ?'
ಗುಡಿಗೋಪುರಗಳ ಎತ್ತರದಲ್ಲಿ
'ಕೃಷ್ಣಾ' ಎಂದಿತು ಗರುಡ ;
ಮೆಟ್ಟಿಲಿನುದ್ದಕು ಕೈಯ ಚಾಚಿದನು
ಕಾಸಿನ ಭಿಕ್ಷಕೆ ಕುರುಡ.
ಇರುಳೂ ಮುಗಿಯಿತು, ಬೆಳಕೂ ಹರಿಯಿತು
ಇದು ಭಗವಂತನ ಕರುಣೆ ;
ದೇವರ ಮನೆಯಲಿ ನಡೆಯುತ್ತಿತ್ತು
ಭಗವನ್ನಾಮ ಸ್ಮರಣೆ.
ತಾವರೆ ಅದಳಿದೆ, ನೈದಿಲೆ ಬಾಡಿದೆ
ಭಟ್ಟರ ತೋಟದ ಕೊಳದಲ್ಲಿ ;
ಸಿರಿಸಂತೋಷವು ಹಬ್ಬುತ್ತಲೆ ಇದೆ
ಚೆಲುವು ಚಿಮ್ಮುತಿಹ ನೆಲದಲ್ಲಿ.
ಬೀದಿ ಬೀದಿಯಲು ಶಾಂತಿಯು ನೆಲಸಿದೆ
ನೆಮ್ಮದಿ ಕಂಡಿದೆ ಬದುಕು ;
ಬಾಗಿಲ ಬಳಿ ಕವಿ ಕೈಯನು ಮುಗಿಯುವೆ
ಆದಕೂ ಇದಕೂ ಎದಕು.
೯.ಗೆಳೆಯನಿಗೆ.
ನೂರು ಕನಸುಗಳಲ್ಲಿ ನಿನ್ನ ಕಂಡೆನು ನಾನು
ನನ್ನೆದೆಯೊಳಚ್ಚಾಯ್ತು ನಿನ್ನ ಹೆಸರು;
ನನ್ನೆಲ್ಲ ಒಲವು ಹೂವಾಗಿ ಅರಳಿತು, ನಕ್ಕೆ -
ಅರಿಹೋಯಿತು ದೂರ ದೂರ ದೀಪ!
ಓ ಗೆಳೆಯ, ನಾ ನಿನ್ನ ಹುಡುಕುತ್ತಲಿದ್ದೇನೆ
ಎಲ್ಲ ಅನುಭವಗಳಲಿ ಒಂಟಿಯಾಗಿ;
ಹೋದುದೆಲ್ಲಿಗೆ ನೀನು ತುಂಬಿದ ಜಗತ್ತಿನಲಿ
ಹೂಗಳಲಿ ಹಣ್ಗಳಲಿ ಹಾಡಿನಲ್ಲಿ?
ದೂರದರ್ಶನದಲ್ಲಿ ಕೇಳಿ ಬಂದಿತು ಹಾಡು
ತಂಪಾಗಿ ಇಂಪಾಗಿ ಮಧುರವಾಗಿ;
ಕೆಲವರು ಬಂದರು ಸಭೆಗೆ, ಎದ್ದು ಹೋದರು ಕೆಲರು
ಈ ಜಗತ್ತಿನ ಚೆಲುವು ಕಣ್ತುಂಬಿತು.
ನೀನೆಂದು ಬರುವೆ, ಓ ಗೆಳೆಯ, ಉದ್ಯಾನದಲಿ
ನೀ ಬರುವ ತನಕ ನಾ ಕಾದಿರುವೆನು.