ಗರಿ.

೧. ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ.

ಬೇಂದ್ರೆಯವರು ತಮ್ಮ ಕೆಲವು ಕವನಗಳಲ್ಲಿ ಕಾವ್ಯವು ಸೃಷ್ಟಿಗೊಳ್ಳುವ ವಿಧಾನವನ್ನೇ ಕಡೆದಿದ್ದಾರೆ. ಉದಾಹರಣೆಗೆ ಅವರ ’ಗರಿ’ ಕವನಸಂಕಲನದಲ್ಲಿಯ ಕೊನೆಯ ಕವನ ’ಗರಿ’ಯನ್ನೇ ನೋಡಿರಿ:

“ಎಲ್ಲೆಕಟ್ಟು ಇಲ್ಲದಾ

ಬಾನಬಟ್ಟೆಯಲ್ಲಿದೊ

ಎಂsದೆಂದು ಹಾರುವೀ

ಹಕ್ಕಿ-ಗಾಳಿ ಸಾಗಿದೆ”

’ಕವಿಯ ಕಾವ್ಯಪಕ್ಷಿಯು ಮನೋಆಕಾಶದಲ್ಲಿ ಹಾರುತ್ತಿರುವಾಗ ಉದುರಿದ ಗರಿಗಳೇ ತಮ್ಮ ಕವನಗಳು’ ಎಂದು ಬೇಂದ್ರೆ ಹೇಳುತ್ತಾರೆ. “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಇದೂ ಸಹ ’ಗರಿ’ ಕವನಸಂಕಲನದಲ್ಲಿಯ ಒಂದು ಕವನ. ಈ ಕವನದ ಶೀರ್ಷಿಕೆ: ಭಾವಗೀತೆ.

ಕವಿಕುಲಗುರು ಕಾಳಿದಾಸನು ಬರೆದ ’ಅಭಿಜ್ಞಾನ ಶಾಕುಂತಲಮ್’ ನಾಟಕದಲ್ಲಿ, ನಾಯಕ ಹಾಗು ನಾಯಕಿಯರ ಭೇಟಿಯಾಗುವದೇ ಭೃಂಗದ ನಿಮಿತ್ತವಾಗಿ. ಮಹಾರಾಜಾ ದುಷ್ಯಂತನು ಮೃಗಯಾವಿಹಾರಕ್ಕಾಗಿ ಕಾಡಿಗೆ ತೆರಳಿರುತ್ತಾನೆ. ಅಲ್ಲಿ ಕಣ್ವ ಋಷಿಗಳ ಆಶ್ರಮವಿರುತ್ತದೆ. ಮಲ್ಲಿಗೆ ಬಳ್ಳಿಗೆ ನೀರುಣಿಸಲು ಬಂದ ಶಕುಂತಲೆಯನ್ನು ದುಂಬಿಯೊಂದು ಕಾಡತೊಡಗುತ್ತದೆ. ಆ ಅಸಹಾಯಕ ಸುಕುಮಾರ ಬಾಲೆಯು ದುಂಬಿಯನ್ನು ನಿವಾರಿಸುವ ವ್ಯರ್ಥ ಯತ್ನದಲ್ಲಿದ್ದಾಗ, ದುಷ್ಯಂತನು ಅವಳಿಗೆ ಸಹಾಯಹಸ್ತ ಚಾಚುತ್ತಾನೆ. ಮುಂದಿನ ಕತೆ ಎಲ್ಲರಿಗೂ ಗೊತ್ತಿದ್ದದ್ದೇ.

ಈ ರೀತಿಯಾಗಿ ಕಾಳಿದಾಸನ ಕಲ್ಪನೆ ಭೃಂಗದ ಬೆನ್ನೇರಿ, ವಿಶ್ವಮಾನ್ಯವಾದ ಒಮ್ದು ಶ್ರೇಷ್ಠ ನಾಟಕವನ್ನು ನಿರ್ಮಿಸಿತು. ಬೇಂದ್ರೆಯವರ ಕಲ್ಪನೆಗಳೂ ಸಹ ಅವರ ಮನದಲ್ಲಿ ಅಮೂರ್ತ ರೂಪದಿಂದ ಮೂರ್ತರೂಪಕ್ಕೆ ಕಾವ್ಯವಾಗಿ ಪರಿಣಮಿಸುತ್ತಿದ್ದವು. ಈ process ಅನ್ನೇ ಬೇಂದ್ರೆ ತಮ್ಮ “ಭಾವಗೀತೆ” ಕವನದಲ್ಲಿ ಬಣ್ಣಿಸಿದ್ದಾರೆ.

“ಭಾವಗೀತೆ”

“ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”

ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ

ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ

ಓಂಕಾರದ ಶಂಖನಾದಕಿಂತ ಕಿಂಚಿದೂನಾ

ಕವಿಯ ಏಕತಾನ ಕವನದಂತೆ ನಾದಲೀನಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ

ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ

ಉಸಿರಿನಿಂದ ಹುದುಕುವಂತೆ ತನ್ನ ಬಾಳ ಮೇಲಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ತಿರುಗತಿತ್ತು ತನ್ನ ಸುತ್ತ ಮೂಕಭಾವ ಯಂತ್ರಾ

ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ

ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ

ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ

ದಾಂಗುಡಿಗಳ ಬಿಡುತಲಿತ್ತು, ಅರಳಲಿತ್ತು, ಪ್ರೇಮಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ವಜ್ರಮುಖವ ಚಾಚಿ ಮುತ್ತತಿತ್ತು ಹೂವ ಹೂವಾ

ನೀರ ಹೀರಿ ಹಾರತಿತ್ತು ನೀರಸವಾ ಜಾವಾ

ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಗಾಳಿಯೊಡನೆ ತಿಳ್ಳಿಯಾಡುತದರ ಓಟಾ

ದಿಕ್ತಟಗಳ ಹಾಯುತಿತ್ತು; ಅದರ ಬಿದಿಗೆ ನೋಟಾ

ನಕ್ಕ ನಗುವ ಚಿಕ್ಕೆಯೊಡನೆ ಬೆಳೆಸತಿತ್ತು ಕೂಟಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ

ಅಲ್ಲು ಇಲ್ಲು ಚೆಲುವು ನಿಂತು ಹಾಕತಿತ್ತು ತಾಳಾ

’ಬಂತೆಲ್ಲಿಗೆ?’ ಕೇಳುತಿದ್ದನೀಯಂತ ಕಾಳಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಮಾತು ಮಾತು ಮಥಿಸಿ ಬಂದ ನಾದದ ನವನೀತಾ

ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ

ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ

ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ

ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಇಂಗ್ಲಿಶ್ ಕವಿಯೊಬ್ಬನು ಕಾವ್ಯಸೃಷ್ಟಿಯನ್ನು “One percent inspiration and ninetynine percent perspiration” ಎಂದು ವರ್ಣಿಸಿದ್ದಾನೆ. ಆದರೆ ಬೇಂದ್ರೆಯವರಿಗೆ ಕಾವ್ಯಸೃಷ್ಟಿ ಉಸಿರಾಟದಷ್ಟೆ ಸಹಜ. ಅವರ ಮನೋರಂಗದಲ್ಲಿ ಕಲ್ಪನೆಗಳು ತೇಲಾಡುತ್ತಿರುತ್ತವೆ.

(“ತೇಲಾಡುವಾಗ ಮನಸು

ಮೇಲಾಡತಾವ ಕನಸು” ನೆನಪಿಸಿಕೊಳ್ಳಿರಿ.)

ಅವರ ಬತ್ತಳಿಕೆಯಲ್ಲಿ ಪದಗಳ ಬಾಣಗಳು ಅಕ್ಷಯವಾಗಿವೆ. ಪ್ರಾಸಕ್ಕಾಗಿ ಅವರು ತಡಕಾಡಲೇ ಬೇಕಿಲ್ಲ. ಇದೆಲ್ಲಕ್ಕೂ ಮೇಲಾಗಿ, ಅವರ ಕವನಗಳು ನಾದದ ಗುಂಗು ಹಿಡಿದು ಹೋಗುತ್ತವೆ.

ಈ ಕವನದ ಮೊದಲ ನುಡಿಯನ್ನೇ ತೆಗೆದುಕೊಳ್ಳಿರಿ:

“ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”

ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ

ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಕವಿಕುಲಗುರು ಕಾಳಿದಾಸನ ಕಲ್ಪನೆಯನ್ನೇ ಬಳಸಿಕೊಂಡು, ಆ ಭೃಂಗವನ್ನು ಕವಿಯ ಮನಸ್ಸಿಗೆ ಹೋಲಿಸಿ, ಕಲ್ಪನೆಯ ಚೆಲ್ಲಾಟವನ್ನು ಬೇಂದ್ರೆ ಬಣ್ಣಿಸುತ್ತಾರೆ. ಭೃಂಗದ ಪಕ್ಕಗಳ ಚಲನೆಯಿಂದ ಗಾಳಿಯಲ್ಲಿ ಉಂಟಾಗುವ ಸಹಜ ಚಲನೆಯನ್ನೇ ಬೇಂದ್ರೆ ಪ್ರಾಸಕ್ಕೆ ಹೋಲಿಸುತ್ತಾರೆ. ಈ ಸಂದರ್ಭದಲ್ಲಿ ಕವಿಯ ಮನಸ್ಸಿನಲ್ಲಿ ಕಾವ್ಯಕನ್ನಿಕೆಯ ಮಂದಹಾಸವು ಮಿಂಚಿ ಮಾಯವಾಗುತ್ತದೆ. ಅಂದರೆ ಕವಿಗೆ ಕಾವ್ಯದ ಹೊಳವು ತೋರುತ್ತದೆ.

ಈಗ ಎರಡನೆಯ ನುಡಿಯನ್ನು ನೋಡಿರಿ:

ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ

ಓಂಕಾರದ ಶಂಖನಾದಕಿಂತ ಕಿಂಚಿದೂನಾ

ಕವಿಯ ಏಕತಾನ ಕವನದಂತೆ ನಾದಲೀನಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಈ ಮಂದಹಾಸದ ಮಿಂಚನ್ನು ಬೇಂದ್ರೆಯವರು ಹಿಡಿಯಲು ಹೋಗುವದು ನಾದದ ಜಾಡಿನ ಬೆನ್ನತ್ತಿ. ಜೇನು ಹುಳವು ಗುಂಯ್ ಗುಂಯ್ ನಾದವನ್ನು ಮಾಡುತ್ತ ಪರಾಗವನ್ನು ಹುಡುಕುವಂತೆ, ಬೇಂದ್ರೆಯವರೂ ಸಹ ನಾದದ ಹಿಂದೆ ಹೊರಡುತ್ತಾರೆ. ಈ ನಾದವು ಓಂಕಾರದ ಶಂಖನಾದಕ್ಕಿಂತ ತುಸುವೇ ಕಡಿಮೆಯದು. ಏಕೆಂದರೆ ಓಂಕಾರದ ಶಂಖನಾದವು ಪಾರಲೌಕಿಕ. ಈ ನಾದವು ಎಷ್ಟೆಂದರೂ ಲೌಕಿಕವೇ. ಆದರೆ ಈ ನಾದವು ಒಂದೇ ಗುಂಗಿನಲ್ಲಿ ಲೀನವಾಗಿದೆ. ಇಲ್ಲಿ ಕವಿಯ ಏಕತಾನದಂತೆ ಅಂದರೆ monotonous ಎನ್ನುವ ಅರ್ಥವಿಲ್ಲ; ಆದರೆ ಒಂದೇ ಗುಂಗಿನ ನಾದ ಎನ್ನುವ ಅರ್ಥವಿದೆ.

ಈಗ ಮೂರನೆಯ ನುಡಿಯನ್ನು ನೋಡಿರಿ:

ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ

ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ

ಉಸಿರಿನಿಂದ ಹುದುಕುವಂತೆ ತನ್ನ ಬಾಳ ಮೇಲಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಕಾವ್ಯದ ಮೂಲವಸ್ತು ಕವಿಯ ಮನದಲ್ಲೇ ಇರುವಂಥಾದ್ದು. ಉದಾಹರಣೆಗೆ ಪ್ರೇಮ, ಭಕ್ತಿ, ವಾತ್ಸಲ್ಯ ಇತ್ಯಾದಿ. ಜೇಡರ ಹುಳು ತನ್ನ ಮೈಯಿಂದಲೇ ಎಳೆಗಳನ್ನು ತೆಗೆದು ಬಲೆ ಹೆಣೆಯುವಂತೆ, ಕವಿ ತನ್ನ ಮನದಲ್ಲಿ ಇರುವ ಭಾವನೆಗಳಿಂದಲೇ ಕವನವನ್ನು ಹೆಣೆಯುತ್ತಾನೆ. ಆದರೆ ಈ ಕಾವ್ಯದ ಹಣೆಬರಹವನ್ನು ಬರೆಯುವವರು ಯಾರು?

ಸ್ವತಃ ಕವಿತೆಯೇ ತನ್ನ ಭಾಲದ(=ಹಣೆಯ) ಮೇಲಿನ ರೇಖೆಯನ್ನು ಬರೆದುಕೊಳ್ಳುವದು. ನಂತರದಲ್ಲಿ ತನ್ನ ಬಾಳಿನ ಮೇಲಾ(=ಜಾತ್ರೆ, ಪ್ರಪಂಚ)ವನ್ನು ಸಹ ಅದು ತಾನೇ ಹುಡುಕುತ್ತ ಹೋಗುವದು. ಇದರರ್ಥ ಕವನವು ಭಾವಪೂರ್ಣವಾಗಿದ್ದರೆ, ಯಶಸ್ವಿಯಾಗುವದು, ಬಾಳುವದು. ಇಲ್ಲವಾದರೆ………………..!

ಈಗ ನಾಲ್ಕನೆಯ ನುಡಿಯನ್ನು ನೋಡಿರಿ:

ತಿರುಗತಿತ್ತು ತನ್ನ ಸುತ್ತ ಮೂಕಭಾವ ಯಂತ್ರಾ

ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ

ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಕಲ್ಪನೆಯ ಗರ್ಭದಲ್ಲಿ ಕವನ ಮೂಡುತ್ತಿರುವಾಗ ಕವಿ ಏನು ಮಾಡುತ್ತಿರುತ್ತಾನೆ? ಅವನೊಬ್ಬ ಮೂಕಭಾವದ ಯಂತ್ರ. ಕವಿಯ ಮನಸ್ಸಿನ ಗರ್ಭಗುಡಿಯಲ್ಲಿ ಕಾವ್ಯದ ಮಂತ್ರಪಠಣ ನಡೆಯುತ್ತಿದ್ದಾಗ, ಕವಿ ಅದನ್ನು ಗ್ರಹಿಸಲು ಸಿದ್ಧನಾಗಿ ನಿಲ್ಲಬೇಕಷ್ಟೆ. ಇಲ್ಲಿ ವರಕವಿಗಳಿಗೂ ನರಕವಿಗಳಿಗೂ ಇರುವ ಅಂತರವನ್ನು ನಾವು ಲಕ್ಷದಲ್ಲಿಟ್ಟುಕೊಳ್ಳಬೇಕು. ತಮ್ಮ ಕವನಗಳನ್ನು ಅಂಬಿಕಾತನಯದತ್ತ ಕೇಳಿಸಿಕೊಳ್ಳುತ್ತಾನೆ, ಬೇಂದ್ರೆ ಮಾಸ್ತರ ಅದನ್ನು ಬರೆದುಕೊಳ್ಳುತ್ತಾರೆ ಎನ್ನುತ್ತಾರೆ ಬೇಂದ್ರೆಯವರು. ಕುಮಾರವ್ಯಾಸನೂ ಸಹ ತಾನು ಕೇವಲ ಲಿಪಿಕಾರ ಎಂದುಕೊಂಡದ್ದನ್ನು ಗಮನಿಸಬೇಕು.

ಇನ್ನು ಐದನೆಯ ನುಡಿಯನ್ನು ನೋಡಿರಿ:

ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ

ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ

ದಾಂಗುಡಿಗಳ ಬಿಡುತಲಿತ್ತು, ಅರಳಲಿತ್ತು, ಪ್ರೇಮಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಕವನವು ಕೊನೆಗೊಮ್ಮೆ ಜೀವ ತಳೆದಾಗ ಅದು ಎಲ್ಲೆಲ್ಲೂ ಹರ್ಷದ ವಾತಾವರಣವನ್ನು ಸೃಜಿಸುತ್ತದೆ. ಹೂಬಳ್ಳಿಗಳೆಲ್ಲ ಕಂಪು ಸೂಸುತ್ತವೆ. ಚಿತ್ತವೆಂಬ ರಂಗವು ವಿಶಾಲವಾಗುತ್ತದೆ, ಮಹತ್ತಾಗುತ್ತದೆ, ಅಲ್ಲಿ ಪ್ರೇಮಭಾವನೆಯು ತುಂಬುತ್ತದೆ.

ಆದರೆ, ದುಂಬಿ ಮುತ್ತಿಟ್ಟು ಹೋದ ಹೂವಿನ ಸ್ಥಿತಿ? ಅದನ್ನು ಆರನೆಯ ನುಡಿಯಲ್ಲಿ ನೋಡಬಹುದು:

ವಜ್ರಮುಖವ ಚಾಚಿ ಮುತ್ತತಿತ್ತು ಹೂವ ಹೂವಾ

ನೀರ ಹೀರಿ ಹಾರತಿತ್ತು ನೀರಸವಾ ಜಾವಾ

ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಹೂವು ತನ್ನಲ್ಲಿಯ ಮಕರಂದವನ್ನು ದುಂಬಿಗೆ ಕೊಟ್ಟಂತೆ, ಕವಿಯೂ ಸಹ ತನ್ನ ಮನಸ್ಸಿನಲ್ಲಿದ್ದ ಮೂಲವಸ್ತುಗಳನ್ನು ಕಲ್ಪನೆಯ ದುಂಬಿಗೆ ಕೊಟ್ಟಿರುತ್ತಾನೆ. ಈಗ ದುಂಬಿ ಹಾರಿ ಹೋಗಿದೆ. ಪರಾಗಸ್ಪರ್ಷದಿಂದ ಕಾವ್ಯಶಿಶು ಜನಿಸಿದೆ. ಆದರೆ ಕವಿ ಬರಿದಾಗಿದ್ದಾನೆ. ಅವನ ಸಾಫಲ್ಯ ಅವನ ಎದುರಿಗಿದೆ. ಆದರೆ ಅವನ ಬಾಳಿಗೀಗ ಕೊನೆ ಬಂದಿತೆನ್ನುವ ಭಾವನೆಯಲ್ಲಿ ಆತ ವೈಫಲ್ಯವನ್ನೂ ಅನುಭವಿಸುತ್ತಿದ್ದಾನೆ.

ಇತ್ತ ಈ ಕಲ್ಪನಾಭೃಂಗವೇನು ಮಾಡುತ್ತಿದೆ. ಅದನ್ನು ನೋಡಲು ಏಳನೆಯ ನುಡಿಯನ್ನು ನೋಡಬೇಕು:

ಗಾಳಿಯೊಡನೆ ತಿಳ್ಳಿಯಾಡುತದರ ಓಟಾ

ದಿಕ್ತಟಗಳ ಹಾಯುತಿತ್ತು; ಅದರ ಬಿದಿಗೆ ನೋಟಾ

ನಕ್ಕ ನಗುವ ಚಿಕ್ಕೆಯೊಡನೆ ಬೆಳೆಸತಿತ್ತು ಕೂಟಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಈ ಭೃಂಗವು ಗಾಳಿಯೊಡನೆ ತಿಳ್ಳಿ (=ಒಂದು ಗ್ರಾಮೀಣ ಆಟ) ಆಡುತ್ತ, ಆಡುತ್ತ , ಓಡುತ್ತ, ಓಡುತ್ತ ದಿಕ್ತಟಗಳನ್ನೇ ಹಾಯುತ್ತಿದೆ. (“ಎಲ್ಲೆಕಟ್ಟು ಇಲ್ಲದಾ ಬಾನಬಟ್ಟೆಯಲ್ಲಿದೊ” ಸಾಲನ್ನು ನೆನೆಪಿಸಿಕೊಳ್ಳಬಹುದು). ಅದರ ಬಿದಿಗೆ ಚಂದ್ರಮನ ನೋಟವು ನಕ್ಕು ನಗುವ ಚಿಕ್ಕೆಯನ್ನು (=twinkling star) ಕೂಟಕ್ಕೆ ಕರೆಯುತ್ತಿದೆ(=wooing).

ಆದರೆ, ಇದು ನಿರಂತರವೆ? ಬೇಂದ್ರೆ ಎಂಟನೆಯ ನುಡಿಯಲ್ಲಿ ಏನು ಹೇಳುತ್ತಾರೆನ್ನುವದನ್ನು ನೋಡೋಣ:

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ

ಅಲ್ಲು ಇಲ್ಲು ಚೆಲುವು ನಿಂತು ಹಾಕತಿತ್ತು ತಾಳಾ

’ಬಂತೆಲ್ಲಿಗೆ?’ ಕೇಳುತಿದ್ದನೀಯನಂತ ಕಾಳಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಕಾವ್ಯದ ಪ್ರಾಣತಂತು ಈ ರೀತಿಯಾಗಿ ತನ್ನ ಬಾಳನ್ನು ಹೆಣೆಯುತ್ತಿತ್ತು. ಚೆಲುವೂ ಸಹ ಅದಕ್ಕೆ ತಾಳ ಹಾಕುತ್ತಿತ್ತು. ಆದರೆ, ಅನಂತನಾದ ಕಾಲನು ಇವರಿಗೆ ಕೇಳುವ ಪ್ರಶ್ನೆ: “ಬಂತೆಲ್ಲಿಗೆ?” ಅರ್ಥಾತ್, ನಿಮ್ಮ ಕಾಲ ಮುಗಿಯಬಂತು! ಬಾಳಿನಲ್ಲಿ, ಸಂಸಾರದಲ್ಲಿ ಯಾವುದೂ ಸ್ಥಿರವಲ್ಲ. ಶಂಕರಾಚಾರ್ಯರು ಹೇಳುವಂತೆ: ಕಾಲೋ ಜಗದ್ಭಕ್ಷಕಃ.

ಆದರೆ, ಇದಕ್ಕೆ ನಾವು ಹೆದರಿಕೊಳ್ಳಬೇಕೆ? ಸಾವಿಗೆ ಮುಖಾಮುಖಿಯಾಗಿರುವದು ಯಾವದು?—ಹುಟ್ಟು. ಕವನದ ಒಂಬತ್ತನೆಯ ನುಡಿಯನ್ನು ನೋಡಿರಿ:

ಮಾತು ಮಾತು ಮಥಿಸಿ ಬಂದ ನಾದದ ನವನೀತಾ

ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ

ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ…………..

ಮಾತು ಅಂದರೆ ವಾಕ್. ಈ ವಾಕ್ಕನ್ನು ಕಡೆದಾಗ ಜನಿಸಿದ್ದು ಈ ನಾದದ ಬೆಣ್ಣೆ(=ನವನೀತ). ಇದೇ ಈಗ ಜನಿಸಿದ ಈ ಸದ್ಯೋಜಾತ ಶಿಶುವು ನಿರುದ್ದಿಶ್ಯವಾಗಿ ಹಿಗ್ಗುತ್ತದೆ;ಜೊತೆಗೆ ಹಿಗ್ಗನ್ನು ಬೀರುತ್ತದೆ. ಅಲ್ಲದೆ ಹಿಗ್ಗುತ್ತದೆ(=ವಿಕಸನಗೊಳ್ಳುತ್ತದೆ). ತನ್ನಲ್ಲಿಯೇ ಪ್ರೀತಿಯನ್ನು ತುಂಬಿಕೊಂಡಿದೆ. ಇದರ ಪ್ರೀತಿಗೆ, ಇದರ ಆಟಕ್ಕೆ ಯಾವುದೇ ಅರ್ಥ(=ಉದ್ದೇಶ) ಬೇಕಾಗಿಲ್ಲ, ಯಾವುದೇ ಸ್ವಾರ್ಥ ಇದಕಿಲ್ಲ. ಭಾವಗೀತೆ ಎಂದರೆ ಹಿಗಿರಬೇಕು.

ಕೊನೆಯ ನುಡಿಯಲ್ಲಿ ಬೇಂದ್ರೆ ಮೊದಲಿನ ನುಡಿಯನ್ನು ಮತ್ತೆ ಬರೆದಿದ್ದಾರೆ. ಭಾವಗೀತೆಯ ಕಲ್ಪನಾವಿಲಾಸವು ಯಾವ ರೀತಿಯಲ್ಲಿ ಕವಿಯನ್ನು, ಓದುಗರನ್ನು ಉಲ್ಲಾಸಗೊಳಿಸುವದು ಎಂದು ತಿಳಿಸುತ್ತಾರೆ. ನಿಜವಾಗಲೂ ಅವರ ಕವನಗಳು ಭೃಂಗದ ಬೆನ್ನೇರಿ ಸಾಗುವದಲ್ಲದೆ, ಓದುಗರನ್ನೂ ಸಹ ಕರೆದೊಯ್ಯುವವು.

ಹೆಚ್ಚಿನ ಓದಿಗೆ : http://sallaap.blogspot.com/2008/04/blog-post_11.html

ಛಂದಸ್ಸು ಬೇಂದ್ರೆಯವರ ಕಾವ್ಯದ ಸಹಜವಾದ ಸಿದ್ಧಿಗಳಲ್ಲಿ ಒಂದು. ಬೇಂದ್ರೆಯವರು ಕವನವನ್ನು ಬರೆಯುತ್ತಿದ್ದಿಲ್ಲ ; ಕವನವು ಅವರ ಮನದಲ್ಲಿ ಮೂಡುತ್ತಿತ್ತು. ಒಂದು ಘಟನೆಯು ಅವರ ಮನದಲ್ಲಿ ಒಂದು ಭಾವವನ್ನು ಉದ್ದೀಪಿಸಿದ ಬಳಿಕ, ಆ ಭಾವಕ್ಕೆ ತಕ್ಕದಾದ ನಾದ ಹಾಗೂ ಛಂದಗಳೊಂದಿಗೆ ಪ್ರಾಸಬದ್ಧ ಪದಗಳು ಅವರ ಮನದಿಂದ ಕವನರೂಪದಲ್ಲಿ ಹೊರಹೊಮ್ಮುತ್ತಿದ್ದವು.

ಇದರ ಒಂದು ಶ್ರೇಷ್ಠ ಉದಾಹರಣೆ ಎಂದರೆ ‘ಪಾತರಗಿತ್ತಿ ಪಕ್ಕ’ ಎನ್ನುವ ಕವನ.

ಪಾತರಗಿತ್ತಿಯು ಎಷ್ಟು ಕ್ಷಿಪ್ರವಾಗಿ ರೆಕ್ಕೆಗಳನ್ನು ಬಡೆಯುವದೊ, ಅಷ್ಟೇ ಕ್ಷಿಪ್ರವಾದ metre ಈ ಕವನಕ್ಕಿದೆ. ಪಾತರಗಿತ್ತಿಯು ಕ್ಷಣಾರ್ಧದಲ್ಲಿ ಎಲ್ಲೆಲ್ಲಿ ಸುತ್ತಾಡುವದೊ, ಈ ಕವನ ಸಹ ಅದೇ ವೇಗದಲ್ಲಿ ಎಲ್ಲೆಲ್ಲೊ ಸುತ್ತಾಡುತ್ತದೆ. (ಕಲ್ಪನೆಯ ರೆಕ್ಕೆಗಳ ಮೂಲಕ ಹಾರಾಡಿದರೂ ಸಹ ಬೇಂದ್ರೆಯವರ ಕವನ ವಾಸ್ತವದ ನೆಲೆಗಳನ್ನು ಬಿಡುವದಿಲ್ಲ.)

ಇಂತಹದೇ ಸಹಜ ಛಂದಸ್ಸಿನ ಮತ್ತೊಂದು ಕವನ : “ಸಂಜೀಯ ಜಾವಿಗೆ ”.

ಮೂರೂಸಂಜೆಯ ಹೊತ್ತಿನಲ್ಲಿ ಬೇಂದ್ರೆಯವರು ತಮ್ಮ ಮನೆಯ ಮುಂಭಾಗದಲ್ಲಿ ಕುಳಿತುಕೊಂಡಿದ್ದಾರೆ. ಅವರ ಪುಟ್ಟ ಮಗಳು ಮಂಗಲಾ ನೀರು ತರುವವರ ಜೊತೆಗೆ ತಾನೂ ಸಹ ಬಾವಿಗೆ ಹೊರಟಿದ್ದಾಳೆ. ಆ ಕಾಲದಲ್ಲಿ ನೀರನ್ನು ಕೆರೆ ಅಥವಾ ಬಾವಿಯಿಂದಲೇ ತರಬೇಕಾಗಿತ್ತು. ಹೊತ್ತು ಮೂಡುವ ಮುನ್ನ ಹಾಗೂ ಹೊತ್ತು ಮುಳುಗುವ ಸಮಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು.

ಈ ಪುಟ್ಟ ಬಾಲೆ, ಪುಟ್ಟ ಬಿಂದಿಗೆ ಹೊತ್ತುಕೊಂಡು ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತ ನೀರು ತರಲು ಹೊರಟಾಗ, ಬೇಂದ್ರೆಯವರಿಗೆ ವಿನೋದವೆನಿಸಿದೆ. ಅವರು ಅವಳ ಚಲನವಲನವನ್ನು ಕೌತುಕದಿಂದ ಗಮನಿಸುತ್ತಿದ್ದಾರೆ. ಅವಳ ಪುಟ್ಟ ಹೆಜ್ಜೆಗಳ ತಾಳಕ್ಕೆ ತಕ್ಕಂತೆ ಅವರ ಮನದಲ್ಲಿ ಕವನ ಮೂಡುತ್ತಿದೆ.

ಕವನದ ಪೂರ್ತಿಪಾಠ ಇಂತಿದೆ:

ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||

ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||

ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||

ಒಲಿದಾಡೊ ರೀತಿಗೆ | ಹಾಡ್ಯಾನೊ ಗೀತಿಗೆ ||

ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||

ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ ||

ಕಿರಗೀಯ ನೀರಿಗೆ | ಒದೆಯೂತ ದಾರಿಗೆ ||

ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ ||

ಏನಾರ ನಡಿಗೆ | ಯಾವೂರ ಹುಡಿಗೆ ||

ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||

ಎರಡೂನು ಸಾಲಿಗೆ | ಹಾದ್ಯುದ್ದ ಬೇಲಿಗೆ ||

ಗುಲಬಾಕ್ಷಿ ಮಲ್ಲಿಗೆ | ಕೇಳತಾವ ಕಲ್ಲಿಗೆ ||

“ ಕಳಸೋದೆ ನೀರಿಗೆ | ಇಂಥ ಸುಕುಮಾರಿಗೆ ||

ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||

ಸಂಜೀಯ ಜಾವಿಗೆ | ಬಂದ್ಯಲ್ಲ ಬಾವಿಗೆ ||

ಮಾತೀಗು ಆಚೆಗೆ | ಮೀರಿದ್ದ ನಾಚಿಗೆ ||

ಮುಸುಕ್ಯಾವ ಹೂವಿಗೆ | ಬಂದೀಯೆ ಬಾವಿಗೆ ||

ಗಿಲುಕೆಂಬೊ ಬಳಿಗೆ | ಕೆಲಸೊಂದೊ ಗಳಿಗೆ ||

ಗೆಳತೇರ ಒಂದಿದೆ | ಸೇದಿದೆ ಬಿಂದಿಗೆ ||

ಸಂಜೀಯ ಜಾವಿಗೆ | ಬಂದೀಯೆ ಬಾವಿಗೆ ||

ಮೂಗಿನ ನೇರಿಗೆ | ಹೊರಳೀದೆ ಊರಿಗೆ ||

ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ ||

ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ ||

ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ ||

ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ ||

ಒಂದೇನೆ ಬಾರಿಗೆ | ಹೋದೆ ಸೀ-ನೀರಿಗೆ ||

ಬೆವರೀನ ಸಾರಿಗೆ | ತಂದೀದಿ ಯಾರಿಗೆ ||

ಇಬ್ಬನಿ ಹೂವಿಗೆ | ನಸುಕಿನ ಜಾವಿಗೆ ||

ಮುತ್ತ್ಹನಿ ಮಾರಿಗೆ | ಮುತ್ತ್ಯಾವೊ ನಾರಿಗೆ ||

ಸಂಜೀಯ ಜಾವಿಗೆ | ಹೋಗಿಯು ಬಾವಿಗೆ ||

ಕೆಲಸಾನ ಆಟಿಗೆ | ಮಾಡುವ ಸೂಟಿಗೆ |

ಹಸನಾದ ಧರತಿಗೆ | ಮೆಚ್ಚಿದೆ ಗರತಿಗೆ ||

ಕುಣಿಸಿದೆ ಇಂದಿಗೆ | ಕಣ್ಬಿಟ್ಟ ಮಂದಿಗೆ ||

ನೀವಾಳಿ ದಿಟ್ಟಿಗೆ | ಕಣ್ಣೆಲ್ಲ ಒಟ್ಟಿಗೆ ||

ಸಂಜೀಯ ಜಾವಿಗೆ | ಹೋಗಿದ್ದ್ಯೆ ಬಾವಿಗೆ ||

ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||

ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||

ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||

ಒಲಿದಾಡೊ ರೀತಿಗೆ | ಹಾಡ್ಯಾನ ಗೀತಿಗೆ ||

ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||

vvvvvvvvvvvvvvvvvvvvvvvvvvvvvvvvvvvvvvvvvvvvvvv

ಪುಟ್ಟ ಮಂಗಲೆಯನ್ನು ಎತ್ತಿಕೊಂಡು ಆಡುವದರಿಂದ ತಂದೆಗೆ ಸಂತೋಷ ಉಕ್ಕುತ್ತದೆ. ಅವಳನ್ನು ಆತ ಎತ್ತಿ ಎತ್ತಿ ಕುಣಿಸುತ್ತಾನೆ. ಇಬ್ಬರ ಮನಸ್ಸೂ ಆನಂದದ ಆಸೆಯಲ್ಲಿ ಅರಳುತ್ತದೆ. ಕುಣಿಸುವಾಗ ಈತ ಮಾಡುವ ‘ಊ ಊ’ ರಾಗದ ದನಿಗೆ ತಕ್ಕಂತೆ ಅವಳು ತೂಗುತ್ತಾಳೆ. ಒಬ್ಬರಿಗೊಬ್ಬರು ಮಮತೆಯಿಂದ ಸ್ಪಂದಿಸುತ್ತಾರೆ. ಈ ಸ್ಪಂದನದಿಂದ ಉದ್ದೀಪ್ತನಾದ ಕವಿಯಲ್ಲಿ ಹಾಡು ಮೂಡುತ್ತದೆ.

“ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||

ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||

ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||

ಒಲಿದಾಡೊ ರೀತಿಗೆ | ಹಾಡ್ಯಾನೊ ಗೀತಿಗೆ ||

ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||”

ಇಂತಹ ಕಾವ್ಯೋದ್ದೀಪನಕ್ಕೆ ಕಾರಣಳಾಗುವ ಈ ಮಗಳು , ಮಂಗಳೆ ಇದೀಗ ಮೂರೂಸಂಜೆಯ ಹೊತ್ತಿನಲ್ಲಿ ನೀರು ತರಲು ಬಾವಿಗೆ ಹೊರಟಿದ್ದಾಳೆ.

ಈ ಪುಟ್ಟ ಬಾಲೆ ನಡೆಯುತ್ತಿರುವ ಪರಿಯಾದರೂ ಎಂತಹದು? ಅವಸರದಲ್ಲಿ ಧಾವಿಸುತ್ತಿರುವದರಿಂದ ತಾನು ಉಟ್ಟುಕೊಂಡ ಕಿರಿಗೆ (=ಸಣ್ಣ ಸೀರೆ)ಯ ನಿರಿಗೆಗಳನ್ನು ಅವಳು ಚಿಮ್ಮುತ್ತಿದ್ದಾಳೆ. ಈ ಕಿರಿಗೆ ಸಹ ಅವಳಿಗೆ ದೊಡ್ಡದೇ ಆಗಿದೆ. ಅದು ಅವಳ ಅಂಗಾಲುಗಳನ್ನು ದಾಟಿ, ನೆಲವನ್ನು ಸ್ಪರ್ಷಿಸುತ್ತದೆ. ಆದುದರಿಂದ ಕವಿ ಇದನ್ನು ‘ಒದೆಯೂತ ದಾರಿಗೆ’ ಎಂದು ಬಣ್ಣಿಸುತ್ತಾನೆ.

“ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ ||

ಕಿರಗೀಯ ನೀರಿಗೆ | ಒದೆಯೂತ ದಾರಿಗೆ ||

ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ ||

ಏನಾರ ನಡಿಗೆ | ಯಾವೂರ ಹುಡಿಗೆ ||

ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||”

ಅದರಂತೆ ಅವಳ ಗೆಜ್ಜೆಗಳು ಅವಳ ಹೆಜ್ಜೆಗೆ ತಾಕುತ್ತಿವೆ. ಈ ಪುಟ್ಟ ಚೆಲುವಿಯನ್ನು ಕಂಡ ಕವಿಗೆ ತನ್ನ ಮಗಳಲ್ಲಿಯೇ ಹೊಸದೊಂದು ಸೌಂದರ್ಯ ಕಾಣುತ್ತದೆ. She appears to him as a beautiful stranger! ಅಗಾಧಪಟ್ಟುಕೊಂಡ ಕವಿ, “ಏನಾರ ನಡಿಗೆ, ಯಾವೂರ ಹುಡಿಗೆ!” ಎಂದು ಉದ್ಗಾರವೆತ್ತುತ್ತಾನೆ.

ಇವಳು ಹೋಗುತ್ತಿರುವ ಕಿರುದಾರಿಯ ಎರಡೂ ಬದಿಗೆ ಬೇಲಿ ಹಬ್ಬಿದೆ. ಆ ಬೇಲಿಯಲ್ಲಿ , ಬಾವಿಯ ಸನಿಹದಲ್ಲಿ ಗುಲಬಾಕ್ಷಿ ಹಾಗು ಕಾಡುಮಲ್ಲಿಗೆ ಬೆಳೆದಿವೆ. ಅವೂ ಸಹ ಈ ಬಾಲೆಯನ್ನು ನೋಡುತ್ತವೆ. ತಂದೆಯಲ್ಲಿ ಕೌತುಕವನ್ನು ಹುಟ್ಟಿಸಿದ ಈ ದೃಶ್ಯವು ಹೂವುಗಳಲ್ಲಿ ಕನಿಕರವನ್ನು ಹುಟ್ಟಿಸಿದೆ. ನೈಸರ್ಗಿಕ ವಸ್ತುಗಳಲ್ಲಿ ಹುಟ್ಟುವ ಅನುಕಂಪ ಭಾವನೆಯು, ಮನುಷ್ಯರಲ್ಲಿ ಹುಟ್ಟಲಾರದೇನೊ?

“ಎರಡೂನು ಸಾಲಿಗೆ | ಹಾದ್ಯುದ್ದ ಬೇಲಿಗೆ ||

ಗುಲಬಾಕ್ಷಿ ಮಲ್ಲಿಗೆ | ಕೇಳತಾವ ಕಲ್ಲಿಗೆ ||

“ ಕಳಸೋದೆ ನೀರಿಗೆ | ಇಂಥ ಸುಕುಮಾರಿಗೆ ||

ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||

ಸಂಜೀಯ ಜಾವಿಗೆ | ಬಂದ್ಯಲ್ಲ ಬಾವಿಗೆ || ”

ಹೂವು ಮೃದುತ್ವದ ಪ್ರತೀಕ. ಕಲ್ಲು ಕಾಠಿಣ್ಯದ ಪ್ರತೀಕ.

(‘ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ’ ಎನ್ನುವ ಕಾಳಿದಾಸನ ವಾಕ್ಯವನ್ನು ನೆನಪಿಸಿಕೊಳ್ಳಿ.) ಕಲ್ಲುಮನಸ್ಸಿನ ಕಲ್ಲನ್ನೇ ಈ ಹೂವುಗಳು ಕೇಳುತ್ತವೆ:

“ ಕಳಸೋದೆ ನೀರಿಗೆ , ಇಂಥ ಸುಕುಮಾರಿಗೆ ? ಅದೂ ಸಹ ಇಂತಹ ಮುಚ್ಚಂಜೆಯ ವೇಳೆಯಲ್ಲಿ? ”

ಈ ಪ್ರಶ್ನೆಗೆ ಆ ಕಲ್ಲು ಸಹ ಕರಗಿರಬಹುದೆ?

ಕಾಲವನ್ನು ಗುರುತಿಸಲು ಮನುಷ್ಯರಿಗೆ ಕಾಲಯಂತ್ರವೆನ್ನುವ ಸಾಧನವಿದೆ. ಮರ, ಗಿಡ, ಹೂವು ಮೊದಲಾದ ನೈಸರ್ಗಿಕ ವಸ್ತುಗಳು ಕಾಲವನ್ನು ಹೇಗೆ ಗುರುತಿಸುತ್ತಿವೆ?

“ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||

ಮೂರೂಸಂಜೆಯ ನಾಲಿಗೆ (=ಮುಳುಗುತ್ತಿರುವ ಸೂರ್ಯಕಿರಣಗಳು) ಇವಳ ಅಂಗಾಲನ್ನು ಸ್ಪರ್ಶಿಸುತ್ತಿವೆ. ಇದು ಹೊತ್ತು ಮುಳುಗುವ ಸಮಯ. ಇಂತಹ ಸಮಯದಲ್ಲಿ ಯಾರಾದರೂ ಇಂತಹ ಪುಟ್ಟ ಹುಡುಗೆಯನ್ನು ನೀರು ತರಲು ಕಳಿಸಬಹುದೆ?

ತಮ್ಮ ಪ್ರಶ್ನೆಗೆ ಉತ್ತರಿಸುವರಾರೂ ಇಲ್ಲವೆಂದು ಆ ಹೂವುಗಳು ಆ ಹುಡುಗೆಯನ್ನೇ ಕೇಳುತ್ತವೆ:

“ಯಾಕವ್ವಾ, ಸಂಜೀಯ ಜಾವಿಗೆ ಬಂದ್ಯಲ್ಲ ಬಾವಿಗೆ ? ”

ಯಾರಿಂದಲೂ ಉತ್ತರ ಸಿಗದಿದ್ದಾಗ, ಆ ಹೂವುಗಳು ತಮ್ಮ ಮಾತಿಗಾಗಿ ತಾವೇ ನಾಚಿಕೊಳ್ಳುತ್ತವೆ. (ಹೂವುಗಳು ನಾಚಿಕೊಳ್ಳುವದೆಂದರೇನು? ಕೆಲವು ಹೂವುಗಳು ಸಂಜೆಯಾದಾಗ ಮುಚ್ಚಿಕೊಳ್ಳುತ್ತವೆ.) ಮೃದು ಸ್ವಭಾವದ ಆ ಹೂವುಗಳ ನಾಚಿಗೆಯ ಭಾವನೆಯು ಮಾತಿನಲ್ಲಿ ಹೇಳಲು ಸಾಧ್ಯವಾಗದಂತಹದು. (ಅದಕ್ಕಾಗಿಯೇ ಅವು ಮುಚ್ಚಿಕೊಳ್ಳುವದು.)

“ಮಾತೀಗು ಆಚೆಗೆ | ಮೀರಿದ್ದ ನಾಚಿಗೆ ||

ಮುಸುಕ್ಯಾವ ಹೂವಿಗೆ | ಬಂದೀಯೆ ಬಾವಿಗೆ ||

ಗಿಲುಕೆಂಬೊ ಬಳಿಗೆ | ಕೆಲಸೊಂದೊ ಗಳಿಗೆ ||

ಗೆಳತೇರ ಒಂದಿದೆ | ಸೇದಿದೆ ಬಿಂದಿಗೆ ||

ಸಂಜೀಯ ಜಾವಿಗೆ | ಬಂದೀಯೆ ಬಾವಿಗೆ ||”

ಈ ಬಾಲೆಯಾದರೊ ಬಳೆಗಳನ್ನು ಗಿಲುಕೆನ್ನಿಸುತ್ತ, ಒಂದೇ ಗಳಿಗೆಯಲ್ಲಿ ತನ್ನ ಜೊತೆಗಾತಿಯರೊಡನೆ ನೀರು ಸೇದಿಕೊಂಡು, ತನ್ನ ಬಿಂದಿಗೆಯನ್ನು ತುಂಬಿಕೊಂಡು ಈಗ ಮರಳಿ ಹೋಗುತ್ತಿದ್ದಾಳೆ !

“ಮೂಗಿನ ನೇರಿಗೆ | ಹೊರಳೀದೆ ಊರಿಗೆ ||

ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ ||

ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ ||

ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ ||

ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ || ”

ಮರಳುತ್ತಿರುವ ಈ ಬಾಲೆಯ ತಲೆಯ ಮೇಲೆ ಇರುವದು ಬಿಂದಿಗೆ

ಹಾಗೂ ಕಾಲಲ್ಲಿ ಇರುವದು ಅಂದಿಗೆ ; ಈ ವರ್ಣನೆಯನ್ನು ಆಪಾದಮಸ್ತಕ ವರ್ಣನೆ ಎನ್ನಬಹುದಲ್ಲವೆ?

ತಲೆಯ ಮೇಲಿನ ಬಿಂದಿಗೆಯು ತುಂ ತುಂ ಎಂದು ಧ್ವನಿಸುತ್ತಿದ್ದರೆ, ಕಾಲೊಳಗಿನ ಅಂದಿಗೆಗಳು ಝಣ್ ಝಣ್ ಎನ್ನುತ್ತಿವೆ. ಬಿಂದಿಗೆಯ ಹಾಗೂ ಅಂದಿಗೆಯ ಧ್ವನಿಗಳು ಸಮತಾಳದಲ್ಲಿ ಸಂವಾದಿಯಾಗಿ ಹೊಂದಿಕೊಂಡಿವೆ !

ಕುಡಿಯಲು ಸಿಹಿನೀರು ತರಲು ಹೋದ ಬಾಲೆ ಒಂದು ಸಾರಿಗೆ ನೀರು ತಂದಳು. ಅಷ್ಟೇ ಸಾಕು, ಅವಳ ಮುಖದ ಮೇಲೆಲ್ಲ ಬೆವರಿನ ಹನಿಗಳು ಮೂಡಿವೆ. ತಂದೆಯ ಕಣ್ಣಿಗೆ ಇದು ಮುಂಜಾವಿನಲ್ಲಿ ಹೂವಿಗೆ ಮುಸುಕಿದ ಇಬ್ಬನಿಯಂತೆ ಕಾಣುವದು. ಈ ಬೆವರಿನ ಹನಿಗಳು ಮುತ್ತಿನ ಹನಿಗಳಂತೆ ಅವನಿಗೆ ಕಾಣುವವು.

“ಒಂದೇನೆ ಬಾರಿಗೆ | ಹೋದೆ ಸೀ-ನೀರಿಗೆ ||

ಬೆವರೀನ ಸಾರಿಗೆ | ತಂದೀದಿ ಯಾರಿಗೆ ||

ಇಬ್ಬನಿ ಹೂವಿಗೆ | ನಸುಕಿನ ಜಾವಿಗೆ ||

ಮುತ್ತ್ಹನಿ ಮಾರಿಗೆ | ಮುತ್ತ್ಯಾವೊ ನಾರಿಗೆ ||

ಸಂಜೀಯ ಜಾವಿಗೆ | ಹೋಗಿಯು ಬಾವಿಗೆ ||”

ಸಂಜೆಯ ಸಮಯದಲ್ಲಿ ನೀರು ತಂದರೂ ಸಹ, ಮುಂಜಾನೆಯ ಇಬ್ಬನಿಗಳು ಮುಖದಲ್ಲಿ ಕಾಣುತ್ತಿವೆಯಲ್ಲ ಎಂದು ಅವನಿಗೆ ಅಚ್ಚರಿಯಾಗುತ್ತಿದೆ. ತನ್ನ ಮಗಳ ಮೊಗವು ಮುಂಜಾನೆಯ ಹೂವಿನಂತೆ ಯಾವಾಗಲೂ fresh ಆಗಿಯೇ ಇರುವದು ಎಂದು ಅವನ ಭಾವನೆಯೆ?

ಆಟವಾಡುವ ವಯಸ್ಸಿನ ಬಾಲೆ ಇವಳು. ಇವಳಿಗೆ ಕೆಲಸವೆಲ್ಲವೂ ಆಟವೇ! ಈ ಪುಟ್ಟ ಗರತಿಯ ಇಂತಹ ಅಚ್ಚುಕಟ್ಟಾದ ವಿಧಾನವನ್ನು ತಂದೆ ಮೆಚ್ಚಿಕೊಳ್ಳುತ್ತಾನೆ. ಅವನ ಮನಸ್ಸು ಕುಣಿಯುತ್ತದೆ. ಈ ಆಟವನ್ನು ನೋಡಿದ ಜನರೂ ಅನೇಕರು. ಅವರ ‘ಕಣ್ಣು’ ಇವಳಿಗೆ ತಾಕಬಾರದಲ್ಲ ! ಅದಕ್ಕಾಗಿ ತಂದೆ ಇವಳಿಗೆ ನೀವಾಳಿಸುತ್ತಾನೆ.

“ಕೆಲಸಾನ ಆಟಿಗೆ | ಮಾಡುವ ಸೂಟಿಗೆ |

ಹಸನಾದ ಧರತಿಗೆ | ಮೆಚ್ಚಿದೆ ಗರತಿಗೆ ||

ಕುಣಿಸಿದೆ ಇಂದಿಗೆ | ಕಣ್ಬಿಟ್ಟ ಮಂದಿಗೆ ||

ನೀವಾಳಿ ದಿಟ್ಟಿಗೆ | ಕಣ್ಣೆಲ್ಲ ಒಟ್ಟಿಗೆ ||

ಸಂಜೀಯ ಜಾವಿಗೆ | ಹೋಗಿದ್ದ್ಯೆ ಬಾವಿಗೆ ||”

ಕವಿ ತನ್ನ ಸವಿ ಅನುಭವವನ್ನು ಮತ್ತೆ ನೆನಪಿಸಿಕೊಳ್ಳುತ್ತಾನೆ.

“ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||

ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||

ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||

ಒಲಿದಾಡೊ ರೀತಿಗೆ | ಹಾಡ್ಯಾನ ಗೀತಿಗೆ ||

ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||”

ಮೊದಲನೆಯ ನುಡಿಯು ಕೊನೆಯ ನುಡಿಯಂತೆಯೇ ಕಾಣುತ್ತಿದೆ. ಆದರೆ ಮೊದಲನೆಯ ನುಡಿಯ ನಾಲ್ಕನೆಯ ಸಾಲಿನಲ್ಲಿ “ ಹಾಡ್ಯಾನೊ ಗೀತಿಗೆ ” ಎನ್ನುವ ಉಲ್ಲಾಸಮಯ ಪ್ರಾರಂಭವಿದ್ದರೆ, ಕೊನೆಯ ನುಡಿಯ ನಾಲ್ಕನೆಯ ಸಾಲಿನಲ್ಲಿ “ ಹಾಡ್ಯಾನ ಗೀತಿಗೆ ” ಎನ್ನುವ ಮಂಗಲಮುಕ್ತಾಯವಿದೆ.

ಬೇಂದ್ರೆಯವರ ಈ ಕವನದ ಎರಡು ವೈಶಿಷ್ಟ್ಯಗಳನ್ನು ಇಲ್ಲಿ ಗಮನಿಸಬಹುದು.

ಮೊದಲನೆಯದು ಸಹಜ ಛಂದಸ್ಸು , ಅಂದರೆ ಕಾವ್ಯದ contentಗೆ ಹೊಂದಿಕೊಳ್ಳುವ metre.

ಎರಡನೆಯದು, ನಿಸರ್ಗದ ವಸ್ತುಗಳಾದ ಹೂವು , ಕಲ್ಲು ಇತ್ಯಾದಿಗಳೊಡನೆ ಕವನ ಹೊಂದಿದ ತಾದಾತ್ಮ್ಯ.

ಈ ಕವನವು ಕೇವಲ ಪುಟ್ಟ ಬಾಲೆಯ ಬಗೆಗಿನ ಕವನವಲ್ಲ. ಇದು ನಿಸರ್ಗವಸ್ತುಗಳ ಬಗೆಗಿನ ಕವನವೂ ಹೌದು.

ಅಂತೆಯೇ ಕವನ ಮುಗಿದ ಬಳಿಕವೂ ಸಹ ಕೆಳಗಿನ ಸಾಲುಗಳು ನಮ್ಮ ಮನಸ್ಸಿನಲ್ಲಿ ರಿಂಗಣಿಸುತ್ತಲೇ ಉಳಿದು ಬಿಡುತ್ತವೆ:

“ಗುಲಬಾಕ್ಷಿ, ಮಲ್ಲಿಗೆ ಕೇಳತಾವ ಕಲ್ಲಿಗೆ

ಕಳಸೋದೆ ನೀರಿಗೆ, ಇಂಥ ಸುಕುಮಾರಿಗೆ ?”

http://sallaap.blogspot.com/2009/04/blog-post_26.html

೩. ‘ಹಕ್ಕಿ ಹಾರುತಿದೆ ನೋಡಿದಿರಾ?’

ಹೆಚ್ಚಿನ ಓದಿಗೆ: http://sallaap.blogspot.com/2009/06/blog-post_24.html

‘ಹಕ್ಕಿ ಹಾರುತಿದೆ ನೋಡಿದಿರಾ?’ ಇದು ಬೇಂದ್ರೆಯವರ ಸುಪ್ರಸಿದ್ಧ ಕವನ. ೧೯೨೯ನೆಯ ಇಸವಿಯಲ್ಲಿ ಬೆಳಗಾವಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರು ಈ ಕವನವನ್ನು ಹಾಡಿದರು. ಬೇಂದ್ರೆಯವರ ಉತ್ತರ ಕರ್ನಾಟಕದ ವೇಷ-ಭೂಷ, ಅವರ ಹಾವಭಾವ ಹಾಗೂ ಹಾಡುಗಾರಿಕೆಯ ಗತ್ತು ಇವುಗಳಿಂದ ನೆರೆದ ಸಭಿಕರೆಲ್ಲ ಮಂತ್ರಮುಗ್ಧರಾದರಂತೆ. ಆನಂತರ ೧೯೩೨ರಲ್ಲಿ ಪ್ರಕಟವಾದ ಅವರ ಪ್ರಥಮ ಕವನ ಸಂಕಲನ ’ಗರಿ’ಯಲ್ಲಿ ಈ ಕವನ ಸೇರ್ಪಡೆಯಾಯಿತು.

ಕವನದ ಪೂರ್ತಿಪಾಠ ಹೀಗಿದೆ:

ಇರುಳಿರಳಳಿದು ದಿನದಿನ ಬೆಳಗೆ

ಸುತ್ತಮುತ್ತಲೂ ಮೇಲಕೆ ಕೆಳಗೆ

ಗಾವುದ ಗಾವುದ ಗಾವುದ ಮುಂದಕೆ

ಎವೆ ತೆರೆದಿಕ್ಕುವ ಹೊತ್ತಿನ ಒಳಗೆ

ಹಕ್ಕಿ ಹಾರುತಿದೆ ನೋಡಿದಿರಾ?

ಕರಿನೆರೆ ಬಣ್ಣದ ಪುಚ್ಚಗಳುಂಟು

ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು

ಕೆನ್ನನ ಹೊನ್ನನ ಬಣ್ಣಬಣ್ಣಗಳ

ರೆಕ್ಕೆಗಳೆರಡೂ ಪಕ್ಕದಲುಂಟು

ಹಕ್ಕಿ ಹಾರುತಿದೆ ನೋಡಿದಿರಾ?

ನೀಲಮೇಘಮಂಡಲ-ಸಮ ಬಣ್ಣ !

ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !

ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು

ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ

ಹಕ್ಕಿ ಹಾರುತಿದೆ ನೋಡಿದಿರಾ?

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ

ಮಂಡಲ-ಗಿಂಡಲಗಳ ಗಡ ಮುಕ್ಕಿ

ತೇಲಿಸಿ ಮುಳುಗಿಸಿ ಖಂಡ-ಖಂಡಗಳ

ಸಾರ್ವಭೌಮರಾ ನೆತ್ತಿಯ ಕುಕ್ಕಿ

ಹಕ್ಕಿ ಹಾರುತಿದೆ ನೋಡಿದಿರಾ?

ಯುಗ-ಯುಗಗಳ ಹಣೆಬರಹವ ಒರಸಿ

ಮನ್ವಂತರಗಳ ಭಾಗ್ಯವ ತೆರೆಸಿ

ರೆಕ್ಕೆಯ ಬೀಸುತ ಚೇತನೆಗೊಳಿಸಿ

ಹೊಸಗಾಲದ ಹಸುಮಕ್ಕಳ ಹರಸಿ

ಹಕ್ಕಿ ಹಾರುತಿದೆ ನೋಡಿದಿರಾ?

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ

ತಿಂಗಳೂರಿನ ನೀರನು ಹೀರಿ

ಆಡಲು ಹಾಡಲು ತಾ ಹಾರಾಡಲು

ಮಂಗಳಲೋಕದ ಅಂಗಳಕೇರಿ

ಹಕ್ಕಿ ಹಾರುತಿದೆ ನೋಡಿದಿರಾ?

ಮುಟ್ಟಿದೆ ದಿಗ್ಮಂಡಲಗಳ ಅಂಚ

ಆಚೆಗೆ ಚಾಚಿದೆ ತನ್ನಯ ಚುಂಚ

ಬ್ರಹ್ಮಾಂಡಗಳನು ಒಡೆಯಲು ಎಂದೊ

ಬಲ್ಲರು ಯಾರಾ ಹಾಕಿದ ಹೊಂಚ

ಹಕ್ಕಿ ಹಾರುತಿದೆ ನೋಡಿದಿರಾ?

ಬೇಂದ್ರೆಯವರು ಈ ಕವನದಲ್ಲಿ ಕಾಲವನ್ನು ಹಾರುತ್ತಿರುವ ಹಕ್ಕಿಗೆ ಹೋಲಿಸಿದ್ದಾರೆ. ಈ ಕವನದ ಮೊದಲ ನುಡಿಯಲ್ಲಿ ಕಾಲಪಕ್ಷಿಯನ್ನು ಪರಿಚಯಿಸುವ ವಿಧಾನ ತುಂಬಾ ಸ್ವಾರಸ್ಯಕರವಾಗಿದೆ.

`ಇರುಳು ಅಳಿದು ದಿನವಾಗುವದು'-- ಇದು ಒಂದು ದಿನದ ಕಾಲಮಾನವನ್ನು ಸೂಚಿಸುತ್ತದೆ.

‘ಇರುಳು ಇರುಳು ಅಳಿದು ದಿನದಿನ ಬೆಳಗೆ’ ಅನ್ನುವದು ಈ ಕಾಲಮಾನದ recurrence.

ಈ ರೀತಿಯಾಗಿ ಮೊದಲನೆಯ ಸಾಲಿನ ಮೂಲಕ ಬೇಂದ್ರೆಯವರು ಒಂದು ಚಲನಶೀಲ ಕಾಲವನ್ನು ನಮ್ಮ ಕಣ್ಣೆದುರಿಗೆ ಮೂಡಿಸುತ್ತಾರೆ.

ಈಗ ಕವನದ ಮುಂದಿನ ಸಾಲನ್ನು ನೋಡಿರಿ:

‘ಸುತ್ತಮುತ್ತಲೂ ಮೇಲಕೆ ಕೆಳಗೆ’ ಎನ್ನುವ ಸಾಲು ‘ಅವಕಾಶ’ದ (space) ಮೂರು ಆಯಾಮಗಳನ್ನು (3 co-ordinates) ಬಣ್ಣಿಸುತ್ತದೆ.

ಅಂದರೆ ಈ ಕಾಲವು ‘ವಿಶ್ವವ್ಯಾಪಿ ಕಾಲ’ವಾಯಿತು !

ಕಾಲಪಕ್ಷಿಯ ಬೃಹತ್ ರೂಪವನ್ನು ಈ ರೀತಿಯಾಗಿ ಬೇಂದ್ರೆ ನಿರೂಪಿಸಿದ್ದಾರೆ.

ಈ ಕಾಲಪಕ್ಷಿಯ ಗತಿ ಎಂತಹದು?

‘ಗಾವುದ ಗಾವುದ ಗಾವುದ ಮುಂದಕೆ’!

‘ಮುಂದಕೆ’ ಎಂದು ಹೇಳುವ ಮೂಲಕ ಈ ಕಾಲಪಕ್ಷಿಯು ಕೇವಲ ಗತಿಶೀಲವಲ್ಲ, ಪ್ರ-ಗತಿಶೀಲವೂ ಹೌದು ಎಂದು ಬೇಂದ್ರೆ ಸೂಚಿಸುತ್ತಾರೆ.

ಈ ಗಾವುದ ದೂರವನ್ನು ಚಲಿಸಲು ಈ ಪಕ್ಷಿಗೆ ಬೇಕಾಗುವ ಸಮಯ ಮಾತ್ರ ‘ಎವೆ ತೆರೆದಿಕ್ಕುವ ಹೊತ್ತು’.

ಕೇವಲ ಕಣ್ಣು ಮಿಟುಕಿಸುವ ಸಮಯದಲ್ಲಿ ಈ ಕಾಲಪಕ್ಷಿ ಸುದೂರ ಗಮಿಸಬಲ್ಲದು.

ಸಮಯದ ಅತ್ಯಂತ ಚಿಕ್ಕ ಅಳತೆ ಯಾವುದು ಎಂದರೆ ‘ನಿಮಿಷ’. ಭಾರತೀಯರು ಪೂರ್ವಕಾಲದಿಂದಲೂ ಬಳಸುತ್ತಿದ್ದ ಕಾಲಮಾನ ಇದು. ‘ನಿಮಿಷ’ವನ್ನು ಅಳೆಯುವ ಬಗೆ ಹೇಗೆ? ಕಣ್ಣರೆಪ್ಪೆಯನ್ನು ಬಡಿಯುವ ಕಾಲಮಾನಕ್ಕೆ ‘ನಿಮಿಷ’ ಎನ್ನುತ್ತಾರೆ. ಆದುದರಿಂದ ‘ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಈ ಪದಪುಂಜದ ಅರ್ಥ=ನಿಮಿಷ. ಇದೇ least unit of time. ಆದುದರಿಂದ ಅತಿ ಚಿಕ್ಕ ಕಾಲಮಾನದಲ್ಲಿ ಈ ಹಕ್ಕಿ ಗಾವುದ ದೂರಕ್ಕೆ ಚಲಿಸಬಲ್ಲದು. ಕಲ್ಪನೆಯಂತೆ ಕಾಣುವ ಪದದಲ್ಲಿ ವಾಸ್ತವತೆಯನ್ನು ಹಿಡಿದಿಡುವ ಬೇಂದ್ರೆ-ಪ್ರತಿಭೆಯನ್ನು ಈ ಸಾಲಿನಲ್ಲಿ ನಾವು ಕಾಣುತ್ತೇವೆ.

(ದೇವತೆಗಳು ಕಣ್ಣು ಮುಚ್ಚುವದಿಲ್ಲ ಅಂದರೆ ಕಣ್ಣರೆಪ್ಪೆ ಬಡೆಯುವದಿಲ್ಲ ; ಆದುದರಿಂದ ಅವರು ‘ಅನಿಮೇಷ’ರು.)

ಈಗ ಈ ನುಡಿಯ ಮತ್ತೊಂದು ಆಯಾಮವನ್ನು ನೋಡೋಣ.

ವಿಶ್ವವನ್ನು ವ್ಯಾಪಿಸಿರುವ ಈ ಕಾಲಪಕ್ಷಿ ತನ್ನ ಚಲನೆಯ ಮೂಲಕ ವಿಶ್ವವನ್ನು ಅಂದರೆ ದೇಶವನ್ನು ಬದಲಾವಣೆಗೆ ಒಳಪಡಿಸುತ್ತದೆ. ಇದೇ ಮಾತನ್ನು ವಿಜ್ಞಾನಿ ಐನ್‍ಸ್ಟೈನ್‍ ‘ಕಾಲ ಮತ್ತು ದೇಶ ಇವೆರಡು ಸಾಪೇಕ್ಷವಾಗಿವೆ’ ಎನ್ನುವ ಮೂಲಕ ತಿಳಿಸಿದರು. (Relativity of space and time.)

ಶಂಕರಾಚಾರ್ಯರೂ ಇದೇ ಮಾತನ್ನು ‘ಮಾಯಾಕಲ್ಪಿತ ದೇಶ,ಕಾಲ ಕಲನಾ’ ಎಂದು philosophically ಹೇಳಿದ್ದಾರೆ (=ದೇಶ ಮತ್ತು ಕಾಲ ಇವು ಕೇವಲ ಭ್ರಮೆ.)

ಆದುದರಿಂದ ಬೇಂದ್ರೆಯವರ ಈ ಕಾಲಪಕ್ಷಿ ಕೇವಲ ಸಮಯದ ಪಕ್ಷಿ ಅಲ್ಲ. ವಿಶ್ವವನ್ನೇ ತನ್ನ ಚಲನೆಯಲ್ಲಿ ಬದಲಾಯಿಸುತ್ತಿರುವ ಬೃಹತ್ ಚೈತನ್ಯಪಕ್ಷಿ!

ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಈ ಚೈತನ್ಯರೂಪಿ ಕಾಲಪಕ್ಷಿಯ ಭೌತಿಕ ವಿವರಗಳನ್ನು ಕೊಡುತ್ತಾರೆ:

ಕರಿನೆರೆ ಬಣ್ಣದ ಪುಚ್ಚಗಳುಂಟು

ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು

ಕೆನ್ನನ ಹೊನ್ನನ ಬಣ್ಣ-ಬಣ್ಣಗಳ

ರೆಕ್ಕೆಗಳೆರಡೂ ಪಕ್ಕದಲುಂಟು

ಹಕ್ಕಿ ಹಾರುತಿದೆ ನೋಡಿದಿರಾ?

ಈ ನುಡಿಯನ್ನು ಎರಡು ರೀತಿಯಲ್ಲಿ ಅರ್ಥೈಸಬಹುದು:

ಪುಚ್ಚ ಅಂದರೆ ಬಾಲ. ಇದು ಹಕ್ಕಿಯ ಹಿಂದಿರುತ್ತದೆ. ಇದು ಭೂತಕಾಲ. ಆದುದರಿಂದ ಇದರ ಬಣ್ಣ ಕರಿ.

ಈಗ ಕಣ್ಣಿಗೆ ಕಾಣುತ್ತಿರುವ , ಹೊಳೆಯುತ್ತಿರುವ ಗರಿಯ ಬಣ್ಣ ಬಿಳಿ. ಆದುದರಿಂದ ಇದು ವರ್ತಮಾನ ಕಾಲ. ನಮಗೆ ಮುಂದೆ ಕಾಣುವದು ಭವಿಷ್ಯತ್ ಕಾಲ. ಇದು ಉದಯಿಸುತ್ತಿರುವ ಸೂರ್ಯನ ಹಾಗೆ ಕೆಂಪಾಗಿ ಹಾಗೂ ಬಂಗಾರ ಬಣ್ಣದ್ದಾಗಿರುತ್ತದೆ. ಈ ಮೂರೂ ಕಾಲಗಳು ಕಾಲಪಕ್ಷಿಯ ಚಲನೆಯ ಅಂಶಗಳು.

ಎರಡನೆಯದಾಗಿ, ನಮ್ಮ ಪೃಥ್ವಿಯ ಮೇಲಿನ ಜನಾಂಗಗಳನ್ನು ಗಮನಿಸಿರಿ: ಕರಿಯ ಬಣ್ಣದ ಆಫ್ರಿಕನ್ ಜನಾಂಗ, ಬಿಳಿಯ ಬಣ್ಣದ ಕಾ^ಕೇಸಿಯನ್ ಜನಾಂಗ, ಇವೆರಡರ ನಡುವಿನ ಕೆನ್ನನ ಅಂದರೆ brownie ಜನಾಂಗ ಹಾಗೂ ಕೊನೆಯದಾಗಿ ಹಳದಿ ಬಣ್ಣದ ಅಂದರೆ ಹೊನ್ನ ಬಣ್ಣದ ಮಂಗೋಲಿಯನ್ ಜನಾಂಗ.

ಈ ಎಲ್ಲ ಜನಾಂಗಗಳನ್ನು ಈ ಕಾಲಪಕ್ಷಿ ಹೊತ್ತುಕೊಂಡು ಮುನ್ನಡೆದಿದೆ ಎಂದೂ ಅರ್ಥೈಸಬಹುದು.

ಇಂತಹ ಒಂದು ಬೃಹತ್ ಪಕ್ಷಿ ನೋಡಲು ಹೇಗೆ ಕಾಣುತ್ತಿರಬಹುದು?

ಇದರ ಹರಹು ಪೃಥ್ವಿಯನ್ನಷ್ಟೇ ಅಲ್ಲ, ನಮ್ಮ ಆಕಾಶಗಂಗೆಯನ್ನೂ (milky way) ದಾಟಿದೆ. ಬೇಂದ್ರೆ ಇದರ ಅನಂತ ವೈಶಾಲ್ಯವನ್ನು ಹೀಗೆ ಬಣ್ಣಿಸುತ್ತಾರೆ :

ನೀಲಮೇಘಮಂಡಲ-ಸಮ ಬಣ್ಣ !

ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !

ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು

ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ

ಹಕ್ಕಿ ಹಾರುತಿದೆ ನೋಡಿದಿರಾ?

ಆಕಾಶ ಅನಂತವಾದದ್ದು. ಅದರ ಬಣ್ಣ ಈ ಕಾಲಪಕ್ಷಿಯದು, ಅಂದರೆ ಕಾಲವೂ ಸಹ ಅನಂತವೇ. ಆ ಅನಂತವಾದ ಆಕಾಶಕ್ಕೆ ರೆಕ್ಕೆ ಒಡೆದರೆ ಹೇಗಿರಬೇಡ!? ಅಂತಹ ಈ ಕಾಲಪಕ್ಷಿಯು ಚಿಕ್ಕೆಗಳ ಮಾಲೆಯನ್ನು ಅಂದರೆ ಆಕಾಶಗಂಗೆಯೇ(=milky way) ಮೊದಲಾದ ವಿಶ್ವಗಳನ್ನು (=galaxies) ಸೆಕ್ಕಿಸಿಕೊಂಡಿದೆ.

ಬೇಂದ್ರೆಯವರು ‘ಸಿಕ್ಕಿಸಿಕೊಂಡಿದೆ’ ಎಂದು ಹೇಳಿಲ್ಲ . ಸೆಕ್ಕಿಸಿಕೊಂಡಿದೆ ಎಂದು ಹೇಳಿದ್ದಾರೆ. ಸೆಕ್ಕಿಸಿಕೊಳ್ಳುವದು ಅಂದರೆ ದಿಮಾಕಿನಿಂದ ಸಿಕ್ಕಿಸಿಕೊಳ್ಳುವದು.

ಈ ಕಾಲಪಕ್ಷಿಯ ಕಣ್ಣುಗಳು ಸೂರ್ಯ ಹಾಗೂ ಚಂದ್ರ ಎನ್ನುವ ಎರಡು ಪ್ರಭಾಬಿಂಬಗಳು. ಸೂರ್ಯ ಹಾಗೂ ಚಂದ್ರರನ್ನು ನಾವು ಕಾಲಗಣನೆಗೆ ಬಳಸುತ್ತೇವೆ. ಆದುದರಿಂದ ಈ ಪ್ರಭಾಬಿಂಬಗಳು ಕಾಲಪಕ್ಷಿಯ ಕಣ್ಣುಗಳು ಎಂದು ಹೇಳುವದು ಯಥಾರ್ಥವಾಗಿದೆ.

ಇಂತಹ ಅದ್ಭುತ ನೋಟದ ಈ ಕಾಲಪಕ್ಷಿಯು ಮಾಡುತ್ತಿರುವದೇನು?

ಅದನ್ನು ನಾಲ್ಕನೆಯ ನುಡಿಯಲ್ಲಿ ಬೇಂದ್ರೆಯವರು ಈ ರೀತಿಯಾಗಿ ಬಣ್ಣಿಸುತ್ತಾರೆ:

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ

ಮಂಡಲ-ಗಿಂಡಲಗಳ ಗಡ ಮುಕ್ಕಿ

ತೇಲಿಸಿ ಮುಳುಗಿಸಿ ಖಂಡ-ಖಂಡಗಳ

ಸಾರ್ವಭೌಮರಾ ನೆತ್ತಿಯ ಕುಕ್ಕಿ

ಹಕ್ಕಿ ಹಾರುತಿದೆ ನೋಡಿದಿರಾ?

ಸಣ್ಣ ಪುಟ್ಟ ರಾಜ್ಯಗಳನ್ನು, ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಹುಟ್ಟಿಸಿ ಬೆಳೆಯಿಸುವದೇ ಈ ಕಾಲಪಕ್ಷಿ. ಅವುಗಳ ತೆನೆ ಒಕ್ಕುವದು ಅಂದರೆ ಅವುಗಳ ಫಲಿತವನ್ನು harvest ಮಾಡುವದು ಈ ಕಾಲಪಕ್ಷಿ. ಈ ತರಹ ಬೆಳೆದು ನಿಂತ ತೆನೆಗಳನ್ನು ಮುಕ್ಕುವದೂ ಸಹ ಈ ಕಾಲಪಕ್ಷಿಯೇ! (ಸುಗ್ಗಿಯ ಸಮಯದಲ್ಲಿ ಹಕ್ಕಿಗಳು ಹೊಲದಲ್ಲಿಯ ಕಾಳುಗಳನ್ನು ಮುಕ್ಕುವದನ್ನು ನೆನಪಿಸಿಕೊಳ್ಳಿರಿ.) ಭೂಮಂಡಲವೆಲ್ಲ ಈ ಹಕ್ಕಿಯ ಆಹಾರವೇ. ಧರಣಿಮಂಡಲದಲ್ಲಿರುವ ಏಳೂ ಖಂಡಗಳನ್ನು ಈ ಹಕ್ಕಿ ತೇಲಿಸುತ್ತದೆ ಹಾಗೂ ಮುಳುಗಿಸುತ್ತದೆ. ಒಂದು ಕಾಲದಲ್ಲಿ ಏಶಿಯಾ ಖಂಡ ಎಲ್ಲಕ್ಕೂ ಮೇಲೆ ತೇಲುತ್ತಿತ್ತು,ಇದೀಗ ಯುರೋಪ ಹಾಗೂ ಅಮೇರಿಕಾ ಖಂಡಗಳು ಮೇಲೆದ್ದಿವೆ!

(ಭೌತಿಕವಾಗಿಯೂ ಸಹ ಇಡೀ ಭೂಪ್ರದೇಶವು ಮೊದಲು ಗೊಂಡವನ ಖಂಡವೆನ್ನುವ ಒಂದೇ ಭೂಮಿಯಾಗಿದ್ದು, ಅನಂತರ ತುಂಡಾಗಿ ಏಳು ಖಂಡಗಳಾದವು.)

ಈ ಖಂಡಗಳಿಗೆ ತಾವು ಸಾರ್ವಭೌಮರೆಂದುಕೊಂಡು ಬೀಗುತ್ತಿರುವವರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರವನ್ನು ಈ ಕಾಲಪಕ್ಷಿ ಮೆಟ್ಟಿ ನಿಂತಿದೆ.

(ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಶ್ ಸಾಮ್ರಾಟರನ್ನು ಅಣಕಿಸುವ ಈ ಸಾಲುಗಳನ್ನು ಬರೆಯಲು ಯಾವುದೇ ಕವಿಗೂ ಅಪಾರ ಧೈರ್ಯ ಬೇಕು. ಸಾಹಿತ್ಯಸಮ್ಮೇಳನದಲ್ಲಿ ಈ ಕವನವನ್ನು ಕೇಳುತ್ತಿದ್ದ ಬಿ.ಎಮ್.ಶ್ರೀಕಂಠಯ್ಯನವರು ಗಾಬರಿಗೊಂಡರೆಂದು ದಾಖಲೆಗಳಿವೆ.)

ಈ ವಿಶ್ವ, ಈ ಭೂಮಿ, ಭೂಮಿಯ ಮೇಲಿನ ಜೀವಜಂತುಗಳು ಇವೆಲ್ಲವುಗಳ ಉಗಮವಾಗಿ ಯಾವ ಕಾಲವಾಯಿತೊ? ಹೊಸ ಯುಗಕ್ಕೊಮ್ಮೆ ಆ ಯುಗದ ಹಣೆಬರಹವನ್ನು ಬರೆಯುವದು, ಹಳೆಯ ಯುಗದ ಹಣೆಬರಹವನ್ನು ಒರೆಸುವದು ಈ ಕಾಲಪಕ್ಷಿಯ ಕೆಲಸ. ಭೂಮಿಯ ಮೇಲಿನ ಶಿಲಾಯುಗ, ಧಾತುಯುಗ, ಪರಮಾಣುಯುಗ ಇವೆಲ್ಲ ಕಾಲದ ಅಧೀನವೇ.

ಆದುದರಿಂದ ಈ ಕಾಲಪಕ್ಷಿಯ ಮಹಿಮೆ ಅಪಾರ. ಅದು ಯುಗ-ಯುಗಗಳನ್ನು, ಮನ್ವಂತರಗಳನ್ನು ತನ್ನ ಆಧೀನದಲ್ಲಿಟ್ಟುಕೊಂಡಿದೆ:

ಯುಗ-ಯುಗಗಳ ಹಣೆಬರಹವ ಒರಸಿ

ಮನ್ವಂತರಗಳ ಭಾಗ್ಯವ ತೆರೆಸಿ

ರೆಕ್ಕೆಯ ಬೀಸುತ ಚೇತನೆಗೊಳಿಸಿ

ಹೊಸಗಾಲದ ಹಸುಮಕ್ಕಳ ಹರಸಿ

ಹಕ್ಕಿ ಹಾರುತಿದೆ ನೋಡಿದಿರಾ?

ಕಾಲಪಕ್ಷಿಯ ಕೆಲಸ ಕೇವಲ ವಿನಾಶಕಾರಿಯಲ್ಲ. ಹೊಸ ಮನ್ವಂತರದ ಶುಭೋದಯವಾಗುವದು ಈ ಕಾಲಪಕ್ಷಿಯಿಂದಲೇ. ಯಾಕೆಂದರೆ ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಪ್ರಾಣವಾಯುವನ್ನು ಕೊಟ್ಟು ಈ ನಿರ್ಜೀವ (inanimate) ಮನ್ವಂತರಗಳನ್ನು ಚೇತನಗೆ ಒಳಪಡಿಸುವದು ಅಂದರೆ ಸಜೀವಗೊಳಿಸುವದು ಈ ಕಾಲಪಕ್ಷಿ. ನಮ್ಮ ಭೂಮಂಡಲದಲ್ಲಿ ಜರುಗಿದ ಸಾಂಸ್ಕೃತಿಕ ಬದಲಾವಣೆಗಳು, ಪುನಶ್ಚೇತನಗಳು (Renaissances) ಎಲ್ಲವೂ ಈ ಕಾಲಪಕ್ಷಿಯ ಮಹಿಮೆಯೇ! ಹೊಸ ಕಾಲದ ಎಳೆಯ ಮಕ್ಕಳಿಗೆ ಹಾರೈಸಿ ಬೆಳೆಸುವದು ಈ ಕಾಲಪಕ್ಷಿಯೇ. ಇದನ್ನೆಲ್ಲ ಪರಿವೀಕ್ಷಿಸುವ ಕಣ್ಣು ನಮಗೆ ಬೇಕು. ಅಂತಲೇ ಬೇಂದ್ರೆ ನಮ್ಮನ್ನು ಕೇಳುತ್ತಿದ್ದಾರೆ:

“ಹಕ್ಕಿ ಹಾರುತಿದೆ ನೋಡಿದಿರಾ?”

ಮಾನವ ದೃಷ್ಟಿ ತತ್ಕಾಲಕ್ಕೆ ಸೀಮಿತವಾಗಿರುತ್ತದೆ. ಆದರೆ ಕವಿಯ ನೋಟ ಕಾಲಾತೀತ, ದೇಶಾತೀತ.

ಮುಂದಿನ ನುಡಿಯಲ್ಲಿ ಬೇಂದ್ರೆಯವರು ಕಾಲಪಕ್ಷಿಯ ಲಾಘವದ ಭವಿಷ್ಯ ನುಡಿಯುತ್ತಿದ್ದಾರೆ:

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ

ತಿಂಗಳೂರಿನ ನೀರನು ಹೀರಿ

ಆಡಲು ಹಾಡಲು ತಾ ಹಾರಾಡಲು

ಮಂಗಳಲೋಕದ ಅಂಗಳಕೇರಿ

ಹಕ್ಕಿ ಹಾರುತಿದೆ ನೋಡಿದಿರಾ?

ಕಾಲದ ಓಟದಲ್ಲಿ ಬೆಳ್ಳಿ ಅಂದರೆ ಶುಕ್ರಗ್ರಹವು ಮನುಷ್ಯನಿಗೆ ಕೇವಲ ಹಳ್ಳಿಯಾಗಬಹುದು, ಚಂದ್ರಲೋಕವು ಬರಿ ಊರಾಗಬಹುದು ಹಾಗೂ ಮಂಗಳಲೋಕವು ಭೂಮಿಗೆ ಅಂಗಳವಾಗಬಹುದು. ಮಾನವನಿಗೆ ಈ ಆಕಾಶಕಾಯಗಳು ಆಡಲು, ಹಾಡಲು ಹಾಗೂ ಹಾರಾಡಲು platforms ಆಗಬಹುದು!

ಮಾನವನು ಭೂಮಿಯಿಂದ ಇತರ ಗ್ರಹ, ಉಪಗ್ರಹಗಳಿಗೆ ಸಂಚರಿಸಬಹುದಾದ ದಾರ್ಶನಿಕ ಮುನ್ನೋಟ ಈ ನುಡಿಯಲ್ಲಿ ವ್ಯಕ್ತವಾಗಿದೆ.

ಕೊನೆಯ ನುಡಿಯಲ್ಲಿ ಬೇಂದ್ರೆಯವರು ಈ ಕಾಲಪಕ್ಷಿಯ ಹಾರಾಟ ಮಾನವನ ಕಲ್ಪನೆಗೆ ಮೀರಿದ್ದು ಎನ್ನುವದನ್ನು ವ್ಯಕ್ತಪಡಿಸುತ್ತಾರೆ:

ಮುಟ್ಟಿದೆ ದಿಗ್ಮಂಡಲಗಳ ಅಂಚ

ಆಚೆಗೆ ಚಾಚಿದೆ ತನ್ನಯ ಚುಂಚ

ಬ್ರಹ್ಮಾಂಡಗಳನು ಒಡೆಯಲು ಎಂದೊ

ಬಲ್ಲರು ಯಾರಾ ಹಾಕಿದ ಹೊಂಚ

ಹಕ್ಕಿ ಹಾರುತಿದೆ ನೋಡಿದಿರಾ?

ವಿಶ್ವಗಳು ಅನೇಕವಿರಬಹುದು. ಈ ವಿಶ್ವಗಳ ದಿಕ್ಕುಗಳು ಅನಂತವಾಗಿರಬಹುದು. ಆದರೆ ಈ ಕಾಲಪಕ್ಷಿಯು ಈ ಎಲ್ಲ ಮಂಡಲಗಳ ಅಂಚನ್ನು ಮುಟ್ಟಿದೆ. ಇಷ್ಟೇ ಅಲ್ಲ, ಈ ಅನಂತತೆಯ ಆಚೆಗೂ ಸಹ ಇದು ತನ್ನ ಚುಂಚನ್ನು ಚಾಚಿದೆ. ಅಬ್ಬಾ, ಎಂತಹ ಕಲ್ಪನೆ !

ಈ ಕಾಲಪಕ್ಷಿಯ ಮನೋಗತ ನಮಗೆ ಅರ್ಥವಾಗಬಹುದೆ? ಇದು ಅಸಾಧ್ಯ ಎನ್ನುವ ಹೊಳಹನ್ನು ‘ಬಲ್ಲರು ಯಾರಾ’ ಎನ್ನುವ ಪ್ರಶ್ನೆಯ ಮೂಲಕ ಬೇಂದ್ರೆ ವ್ಯಕ್ತಪಡಿಸುತ್ತಾರೆ.

ಬ್ರಹ್ಮಾಂಡ ಅಂದರೆ ಬ್ರಹ್ಮದೇವನು ಸೃಷ್ಟಿಸಿದ ಬೃಹತ್ ಅಂಡ. ಆ ಬ್ರಹ್ಮಸೃಷ್ಟಿಗಳನ್ನೇ ಈ ಕಾಲಪಕ್ಷಿ ಒಡೆಯಲೆಂದು ಹೊಂಚು ಹಾಕಿ ಹಾರುತ್ತಿದೆಯೆ? ಇರಬಹುದು, ಅಥವಾ ಅಂಡವು ಒಡೆದಾಗಲೇ ಹೊಸ ಸೃಷ್ಟಿ ಹೊರಗೆ ಬರುವದು ಎನ್ನುವ ಅರ್ಥವೂ ಇಲ್ಲಿ ಇರಬಹುದು.

ಇದಕ್ಕೆ ಉತ್ತರ : “ಬಲ್ಲರು ಯಾರಾ?”

ಇಂತಹ ಹಕ್ಕಿ ಹಾರುತ್ತಿರುವದನ್ನು ನೀವು ನೋಡಿದಿರಾ?

ಬಹುಶ: ಈ ಕಾಣ್ಕೆ, ಈ ನೋಟ ವರಕವಿಗೆ ಮಾತ್ರ ಸಾಧ್ಯ!

ಈ ಕವನದ ಕೆಲವು ವೈಶಿಷ್ಟ್ಯಗಳು:

ಈ ಕವನವನ್ನು ಓದಿದಾಗ ಮೂಡುವ ಭಾವನೆ ಎಂದರೆ ಬೆರಗು.

ವಿಸ್ಮಯರಸವೇ ಈ ಕವನದ ಪ್ರಧಾನ ರಸ. ಈ ರಸವನ್ನು ಬೇಂದ್ರೆಯವರು ಹೇಗೆ ಸಾಧಿಸಿದ್ದಾರೆ?

ಕವನದ ಪ್ರತಿಯೊಂದು ನುಡಿಯ ಕೊನೆಯ ಸಾಲು “ಹಕ್ಕಿ ಹಾರುತಿದೆ ನೋಡಿದಿರಾ?” ಎಂದಾಗಿರುವದನ್ನು ನೀವು ಗಮನಿಸಿರಬಹುದು. ಕವನದ ಏಳೂ ನುಡಿಗಳಲ್ಲಿ ಇದು repeat ಆಗಿದೆ. ಆಗಸದಲ್ಲಿ ಹಾರುವ ಹಕ್ಕಿಯೊಂದನ್ನು ನೋಡಿದ ಹುಡುಗನೊಬ್ಬ ಬೆರಗುಪಟ್ಟು ತನ್ನ ಗೆಳೆಯನೊಬ್ಬನಿಗೆ ಆ ಹಕ್ಕಿಯನ್ನು ತೋರಿಸುತ್ತ, ಬಣ್ಣಿಸುತ್ತ, ಪದೇ ಪದೇ ಉದ್ಗರಿಸುವ ಪ್ರಶ್ನೆಯಂತಿದೆ ಈ ಸಾಲು. ಆ ಹುಡುಗನ ಬೆರಗು ಅವನ ಗೆಳೆಯನಿಗೂ ಸಹ ಹಬ್ಬುತ್ತದೆ.

ಇದು ಬೇಂದ್ರೆಯವರು ವಿಸ್ಮಯರಸವನ್ನು ಈ ಕವನದಲ್ಲಿ ಸಾಧಿಸಿದ ವಿಧಾನ.

ಕವನಕ್ಕೆ ಅವಶ್ಯವಾದ ಛಂದಸ್ಸನ್ನು ಆಯ್ಕೆ ಮಾಡುವದು, ಕವನದಲ್ಲಿ ಲಯವನ್ನು ಸಾಧಿಸುವದು ಇವು ಬೇಂದ್ರೆಯವರ ಸಹಜಸಿದ್ಧಿಗಳು. ಈ ಕವನದ ನುಡಿಗಳಲ್ಲಿ ಐದು ಸಾಲುಗಳಿವೆ. ಕವನದಲ್ಲಿ ನಾಲ್ಕು ಸಾಲುಗಳಿರುವದು ಸಹಜ. ದಾಸರ ಹಾಡುಗಳಿಂದ ಹಿಡಿದು, ನವೋದಯದ ಭಾವಗೀತೆಗಳವರೆಗೆ, ಕನ್ನಡದ ಕವನಗಳು ಬಹುತೇಕವಾಗಿ ಚೌಪದಿಗಳೇ ಆಗಿವೆ. ನಡುಗನ್ನಡದ ಕವಿಗಳು ಷಟ್ಪದಿಗಳನ್ನು ರಚಿಸಿದ್ದಾರೆ ನಿಜ, ಆದರೆ ಅವೂ ಸಹ ಚೌಪದಿಗಳೇ. ಉದಾಹರಣೆಗೆ ಚಾಮರಸನ ಪ್ರಭುಲಿಂಗಲೀಲೆಯ ಈ ಪದ್ಯವನ್ನು ಗಮನಿಸಿರಿ:

ಹಿಡಿಹಿಡಿದುಕೊಂಡರ್ತಿಯಲಿ ಬೆಂ-

ಬಿಡದೆ ಶಿಕ್ಷಾಚಾರ್ಯತನದಲಿ

ಜಡಿದು, ಜಂಕಿಸಿ, ಮುದ್ದುತನ ಮಿಗೆ ಮಾಯೆ ತನ್ನಂತೆ|

ನಡೆಯಕಲಿಸಿದಳಂಚೆವಿಂಡಿಗೆ

ನುಡಿಯಕಲಿಸಿದರಗಿಳಿಗೆ

ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ||

ಭಾಮಿನೀಷಟ್ಪದಿಯ ಈ ನುಡಿಯನ್ನು ಹೀಗೂ ಬರೆಯಬಹುದು:

“ ಹಿಡಿಹಿಡಿದುಕೊಂಡರ್ತಿಯಲಿ, ಬೆಂಬಿಡದೆ ಶಿಕ್ಷಾಚಾರ್ಯತನದಲಿ

ಜಡಿದು ಜಂಕಿಸಿ, ಮುದ್ದುತನ ಮಿಗೆ ಮಾಯೆ ತನ್ನಂತೆ|

ನಡೆಯಕಲಿಸಿದಳಂಚೆವಿಂಡಿಗೆ, ನುಡಿಯಕಲಿಸಿದರಗಿಳಿಗೆ

ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ ”||

ಇದೀಗ ಚೌಪದಿಯಾಯಿತು!

ಹೀಗಿರುವಾಗ, ಬೇಂದ್ರೆಯವರು ಕವನವನ್ನು ಚೌಪದಿಯನ್ನಾಗಿ ಬರೆಯದೆ, ಪ್ರತಿಯೊಂದು ನುಡಿಗೂ ಐದನೆಯ ಸಾಲೊಂದನ್ನು ಜೋಡಿಸಿದ್ದಾರೆ. ಐದನೆಯ ಸಾಲಿನಲ್ಲಿ ವಿಸ್ಮಯವನ್ನು ಸೂಚಿಸುವ Recurring Lineಅನ್ನು ಇಟ್ಟಿದ್ದಾರೆ.

ಹೀಗೆ ಮಾಡುವಾಗ ಕಾವ್ಯದ ಲಯವು ಕೈತಪ್ಪಿ ಹೋಗಬೇಕು. ಆದರೆ ಏಳು ನುಡಿಗಳ ಈ ಕವನದಲ್ಲಿ ಮೊದಲ ಸಾಲಿನಿಂದ ಕೊನೆಯ ಸಾಲಿನವರೆಗೂ ಕಾವ್ಯದಲಯವು ಸಮಪ್ರವಾಹದಲ್ಲಿ ಹರಿದಿದೆ.

“ಪಾತರಗಿತ್ತಿ ಪಕ್ಕ”ದಲ್ಲಿ ಪುಟ್ಟ ಸಾಲುಗಳ ಮೂಲಕ, ಎರಡೇ ಸಾಲುಗಳ ನುಡಿಯ ಮೂಲಕ, ದೀರ್ಘವಾಗಿರುವ ಇಡೀ ಕವನವನ್ನೇ ಚಿಕ್ಕ ಚಿಟ್ಟೆಯನ್ನಾಗಿ ಪರಿವರ್ತಿಸಿದ ಕವಿ, ಇಲ್ಲಿ ಚೌಪದಿಯ ಬಂಧವನ್ನು ಕಿತ್ತೊಗೆದು, ಕಾವ್ಯದಲಯವನ್ನು ಹಿಡಿತದಲ್ಲಿ ಇಟ್ಟುಕೊಂಡೇ ಕಾಲಪಕ್ಷಿಯ ವಿಶಾಲತೆಯನ್ನು ಓದುಗನ ಅನುಭವಕ್ಕೆ ತರುತ್ತಾರೆ.

ಇನ್ನು ಬೇಂದ್ರೆಯವರ ಕವನಗಳ ಇತರ ಲಕ್ಷಣಗಳು ಈ ಕವನದಲ್ಲೂ ಕಾಣುತ್ತವೆ.

ವಾಸ್ತವತೆಯನ್ನು ಚಮತ್ಕಾರಿಕವಾಗಿ ಬಳಸುವ ಅವರ ಪ್ರತಿಭೆಯನ್ನು ಇಲ್ಲೂ ಕಾಣಬಹುದು. ಉದಾಹರಣೆಗೆ ‘ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಎನ್ನುವಾಗಿನ ಕಾಲಮಾನದ ವಾಸ್ತವತೆಯನ್ನು ಗಮನಿಸಬಹುದು.

ಬೇಂದ್ರೆಯವರ ಕವನಗಳಲ್ಲಿ ಬರುವ ಪ್ರತೀಕಗಳು ಸಂಕೀರ್ಣವಾಗಿರುತ್ತವೆ. ಕಾಲಪಕ್ಷಿಯ ಪುಚ್ಚ ಹಾಗೂ ಗರಿಗಳ ಪ್ರತೀಕವನ್ನು ಉದಾಹರಣೆಯಾಗಿ ಗಮನಿಸಬಹುದು.

ಬೇಂದ್ರೆಯವರ ಕಲ್ಪನೆ ಅಗಾಧವಾದದ್ದು. ಕಾಲಪಕ್ಷಿಯ ವರ್ಣನೆ, ಅದರ ಆಹಾರ,ಅದರ ಕಾರ್ಯಸೂಚಿಯನ್ನು ಬೇಂದ್ರೆಯವರು ಹೆಣೆದ ಪರಿಯನ್ನು ಗಮನಿಸಿದರೆ, ಅವರ ಕಲ್ಪನಾಸಾಮರ್ಥ್ಯದ ಅರಿವಾಗುವದು. ಇಂತಹ ಅಪಾರ ಕಲ್ಪನೆಯನ್ನು systematic ಆಗಿ ಹೆಣೆಯುತ್ತ, ಕವನದ focus ಅನ್ನು ಕಾಯ್ದುಕೊಂಡು ಹೋಗುವದು ಪ್ರತಿಭಾವಂತ ಕವಿಗೇ ಸಾಧ್ಯ.

ಇಷ್ಟೆಲ್ಲ ಗುಣಗಳಿದ್ದ ಈ ಕವನದಲ್ಲಿ ದೋಷಗಳೂ ಇವೆ.

ಓದುಗನಲ್ಲಿ ಕಾಲಪಕ್ಷಿಯ ಬಗೆಗೆ ಬೆರಗು ಹುಟ್ಟುತ್ತದೆಯೇ ಹೊರತು, ಕಾಲಪಕ್ಷಿಯ ಪ್ರಧಾನಗುಣವಾದ powerಅನ್ನು ಆತ ಅನುಭವಿಸುವದಿಲ್ಲ. ಕಾಲಪಕ್ಷಿಯ powerಅನ್ನು ತಿಳಿಸಲು, ಬೇಂದ್ರೆ ಮೂರು-ನಾಲ್ಕು ನುಡಿಗಳನ್ನು ಬರೆದಿದ್ದಾರೆ. ಆದರೆ ಈ ಸಾಲುಗಳು ಕೇವಲ ವಾಚ್ಯವಾಗಿವೆ. ಕಾಲಪಕ್ಷಿಯ ಶಕ್ತಿ ಓದುಗನ ಅನುಭವಕ್ಕೆ ಬರುವದಿಲ್ಲ.

ಶಂಕರಾಚಾರ್ಯರು ತಮ್ಮ ಸ್ತೋತ್ರವೊಂದರಲ್ಲಿ ಕಾಲದ ಮಹಿಮೆಯನ್ನು ಹೀಗೆ ಬಣ್ಣಿಸಿದ್ದಾರೆ:

“ಕಾಲೋ ಜಗದ್ ಭಕ್ಷಕ:” (=Time swallows universes.)

ಈ ಒಂದು ಸಾಲಿನಲ್ಲಿ ಅನುಭವಕ್ಕೆ ಬರುವ ಕಾಲದ ಶಕ್ತಿಯು, ಬೇಂದ್ರೆಯವರ ೩೫ ಸಾಲುಗಳಲ್ಲಿ ಬರುವದಿಲ್ಲವೆನ್ನುವದು ಕವನದ ಕಳಾಹೀನತೆಯ ನಿದರ್ಶನವಾಗಿದೆ.

೪. ಕನಸಿನೊಳಗೊಂದು ಕಣಸು

"ಯಾರು ನಿಂದವರಲ್ಲಿ ತಾಯಿ" ಎಂದೆ

""ಯಾರು ಕೇಳುವರೆನಗೆ, ಯಾಕೆ ತಂದೆ?"

"ಬೇಸರದ ದನಿಯೇಕೆ ಹೆಸರ ಹೇಳಲ್ಲ"

"ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ"

"ನೀನಾರ ಮನೆಯಳೊ ಮುತ್ತೈದೆ ಹೇಳು"

"ನಾನಾರ ಮನೆಯವಳೊ ಬಯಲನ್ನೆ ಕೇಳು"

ಆಪ್ತರಿಲ್ಲವೆ ನಿನಗೆ ಇಷ್ಟರಲ್ಲೇ?"

ಗುಪ್ತರಾದರೊ ಏನೊ ಇಷ್ಟರಲ್ಲೇ"

"ಇರುವರೇ ಇದ್ದರೇ ಮಕ್ಕಳೆಂಬವರು?"

"ಇರುವರೆಂದರು ಕೂಡ ಯಾರು ನಂಬುವರು?"

"ಮನೆಯಿಲ್ಲವೇ ಇರಲು ಪರದೇಶಿಯೇನು?"

"ಮನೆಯೆ ಮುನಿದೆದ್ದಿರಲು ಯಾ ದೇಶವೇನು?"

"ನಿನ್ನ ಮಾತಿನಲಿಹುದು ಒಡಪಿನಂದ"

"ನನ್ನ ಹತ್ತಿರದೊಂದೆ ಉಳಿದಿಹುದು ಕಂದ"

"ರಾಜಮುಖಿ ನಿನ್ನಲ್ಲಿ ರಾಜಕಳೆಯಿಹುದು!"

"ಸಾಜವಾದರು ಪಕ್ಷವಿದಿ ವ್ದ್ಯವಹುದು!"

"ಯಾವುದಾದರು ನಾಡದೇವಿಯೇ ನೀನು?"

"ಭಾವುಕರ ಕಂಗಳಿಗೆ ದೇವಿಯೇ ನಾನು"

"ಈಗ ಬಂದಿಹುದೇಕೆ ಏನು ಬೆಸನ?"

"ಯೋಗವಿಲ್ಲದೆ ತಿಳಿಯದೆನ್ನ ವ್ಯಸನ"

"ಹಾದಿ ಯಾವುದು ಹೇಳು, ಯಾವ ಯೋಗ?"

"ಆದಿ ಅಂತವು ಇಲ್ಲದಂಥ ತ್ಯಾಗ"

"ಬೇಡ ಬಂದಿಹೆಯೇನು ಏನಾದರೊಂದು?"

"ಬೇಡಿದರೆ ಬೇಡಿದುದ ಕೊಡುವೆಯಾ ಇಂದು?"

"ಅಹುದು ಕೊಡುವೆನು ಎಂದು ನಾನೆನ್ನಬಹುದೇ?"

ಬಹುದು-ಗಿಹುದಿನ ಶಂಕಿ ವೀರನಹುದೇ?"

"ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ"

"ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ!"

"ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ"

ಬಲ್ಲವರು ದೈವವನು ಪರಿಕಿಸುವರೊಮ್ಮೆ!"

"ಚಂಡಿ ಚಾಮುಂಡಿ ಕೇಳ್ ಬೇಕಾದುದೇನು?"

"ಗಂಡುಸಾದರೆ ನಿನ್ನ ಬಲಿ ಕೊಡೂವೆಯೇನು?"

ಮನವು ನಡುಗಿತು ತನುವು ನವಿರಿಗೊಳಗಾಯ್ತು

ನೆನವು ನುಗ್ಗಿತು -- ಹೊರಗೆ ಕಂಡೆ -- ಬೆಳಗಾಯ್ತು

೫. ಪ್ರಕೃತಿಯ ಯುಗಾದಿ

ಹೆಚ್ಚಿನ ಓದಿಗೆ: http://sallaap.blogspot.com/2009/03/blog-post_30.html

ಯುಗಾದಿಯು ಋತುಚಕ್ರದ ಆದಿಬಿಂದು. ಇದು ವಸಂತ ಋತುವಿನ, ಚೈತ್ರಮಾಸದ ಪ್ರಾರಂಭವಾಗಿದೆ. ಮನುಜನು ತನ್ನ ಬುದ್ಧಿಶಕ್ತಿಯ ಆಧಾರದಿಂದ, ಪೃಥ್ವಿ ಹಾಗು ಚಂದ್ರರ ಚಲನೆಯನ್ನು ಗುಣಿಸಿ, ಯುಗಾದಿಯ ಆರಂಭವನ್ನು ಕ್ಷಣದವರೆಗೂ ನಿರ್ಧರಿಸುತ್ತಾನೆ.

ಮನುಜನ ಹೊರತಾದ ನಿಸರ್ಗಕ್ಕೆ ಮನುಜನಂತಹ ಬುದ್ಧಿಶಕ್ತಿಗಿಂತ ಬೇರೊಂದು ರೂಪದ ಬುದ್ಧಿಶಕ್ತಿ ಇದೆ. ಮನುಜನ ಬುದ್ಧಿಶಕ್ತಿಗೆ conscious intelligence ಎಂದು ಕರೆಯಬಹುದಾದರೆ, ನಿಸರ್ಗದ ಬುದ್ಧಿಶಕ್ತಿಗೆ unconscious intelligence ಎಂದು ಕರೆಯಬಹುದು.(?) ನಿಸರ್ಗದ unconscious intelligence ಎದುರಿಗೆ ಮನುಜನ conscious intelligence ನಗಣ್ಯ. ನಿಸರ್ಗವು ಯುಗಾದಿಯನ್ನು ಗುರುತಿಸುವ ಬಗೆಯೇ ಬೇರೆ. ಅದು ಮನುಜನ ಬುದ್ಧಿಗೆ ನಿಲುಕಲಾರದು.

ಅಂಬಿಕಾತನಯದತ್ತರು ತಮ್ಮ ‘ಯುಗಾದಿ’ ಕವನದಲ್ಲಿ ಸೃಷ್ಟಿಕ್ರಮವು ಪುನರಾವರ್ತಿಸುವ ಬಗೆಯನ್ನು ಬಣ್ಣಿಸುತ್ತಿದ್ದಾರೆ. ಯುಗಾದಿಯೊಡನೆ ನಿಸರ್ಗವು ಹೊಸ ರೂಪವನ್ನು ತಾಳುವ ರೀತಿಯನ್ನು ವರ್ಣಿಸುತ್ತಾರೆ. ಅವರು ಬಣ್ಣಿಸುವ ಯುಗಾದಿಯು ಪ್ರಕೃತಿಯ ಯುಗಾದಿ, ಇದು ಮನುಜರ ಯುಗಾದಿಯಲ್ಲ.

‘ಯುಗಾದಿ’ ಕವನದ ಪೂರ್ಣಪಾಠ ಹೀಗಿದೆ:

ಯುಗಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ.

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಲಲ್ಲಿ

ಭೃಂಗದ ಸಂಗೀತ ಕೇಲಿ

ಮತ್ತೆ ಕೇಳಬರುತಿದೆ.

ಬೇವಿನ ಕಹಿ ಬಾಳಿನಲ್ಲಿ

ಹೂವಿನ ನಸುಗಂಪು ಸೂಸಿ

ಜೀವಕಳೆಯ ತರುತಿದೆ.

ಕಮ್ಮನೆ ಬಾಣಕ್ಕೆ ಸೋತು

ಜುಮ್ಮನೆ ಮಾಮರವು ಹೂತು

ಕಾಮಗಾಗಿ ಕಾದಿದೆ.

ಸುಗ್ಗಿ ಸುಗ್ಗಿ ಸುಗ್ಗಿ ಎಂದು

ಹಿಗ್ಗಿ ಗಿಳಿಯ ಸಾಲು ಸಾಲು

ತೋರಣದೊಲು ಕೋದಿದೆ.

ವರುಷಕೊಂದು ಹೊಸತು ಜನ್ಮ

ಹರುಷಕೊಂದು ಹೊಸತು ನೆಲೆಯು

ಅಖಿಲ ಜೀವಜಾತಕೆ!

ಒಂದೆ ಒಂದು ಜನ್ಮದಲ್ಲಿ

ಒಂದೆ ಬಾಲ್ಯ ಒಂದೆ ಹರೆಯ

ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ

ಎದ್ದ ಸಲ ನವೀನ ಜನನ

ನಮಗೆ ಏಕೆ ಬಾರದೊ?

ಎಲೆ ಸನತ್ಕುಮಾರದೇವ!

ಸಲೆ ಸಾಹಸಿ ಚಿರಂಜೀವ!

ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ.

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ.

ನಮ್ಮನಷ್ಟೆ ಮರೆತಿದೆ!

. . . . . . . . . .. . . . . . .. . . . . . . . .. . . . . . . . . . . . . . .

ಸೂರ್ಯ,ಭೂಮಿ ಹಾಗು ಚಂದ್ರರ ಸೃಷ್ಟಿಯಾದ ನಂತರ ಅನೇಕ ಕೋಟಿ ಯುಗಗಳು ಕಳೆದು ಹೋಗಿವೆ. ಪ್ರತಿ ವರ್ಷದ ಆದಿಯಲ್ಲಿ ನಾವು ಯುಗಾದಿ ಎಂದು ಕರೆಯುವ ದಿನವು ಪುನರಾವರ್ತನೆಗೊಳ್ಳುತ್ತದೆ. ಪ್ರತಿ ಸಲವೂ ಈ ವರ್ಷಾರಂಭವು ನಿಸರ್ಗದಲ್ಲಿ ಹೊಸ ಹರ್ಷವನ್ನು ತರುತ್ತದೆ. ಅದನ್ನು ಬೇಂದ್ರೆ ಹೀಗೆ ಹೇಳುತ್ತಾರೆ:

ಯುಗಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ.

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ.

ವಸಂತ ಋತುವಿನ ಪ್ರಕೃತಿಯನ್ನು ಗಮನಿಸಿ:

ಸಸ್ಯಸಂಕುಲವೆಲ್ಲ ಬಣ್ಣ ಬಣ್ಣದ,ಬಗೆಬಗೆಯ ಸುವಾಸನೆಯ ಹೊಸ ಹೂವುಗಳಿಂದ ಶೋಭಿಸತೊಡಗುತ್ತದೆ. ಪ್ರಕೃತಿಯು ಹೊಸ ಉಲ್ಲಾಸದಿಂದ ತುಂಬುತ್ತದೆ. ನಿಸರ್ಗದಲ್ಲಿ ಹೊಸ ಸಂಭ್ರಮವಿದೆ. ಈ ನವೋಲ್ಲಾಸಕ್ಕೊಂದು ಕಾರಣವಿರಬೇಕಲ್ಲವೆ? ಈ ಕಾರಣವೆಂದರೆ ನಿಸರ್ಗದ ಮೂಲ ಬಯಕೆ ಅರ್ಥಾತ್ ಹೊಸ ಸಂತಾನದ ಉತ್ಪತ್ತಿ.

ಚಿಕ್ಕ ಕೂಸನ್ನು ನೋಡಿದಾಗ ಎಲ್ಲರಿಗೂ ಆ ಕೂಸಿನ ಮೇಲೆ ಪ್ರೀತಿ ಹುಟ್ಟುತ್ತದೆ. ಈ ಕೂಸೇ ‘ಹೊಸ ಹರುಷ’! ನಿಸರ್ಗದಲ್ಲಿಯ ಸಸ್ಯಸಂಕುಲವು ಹೊಸ ಹೂವನ್ನು ಬಿಡುವುದರೊಂದಿಗೆ ಸಂತಾನೋತ್ಪತ್ತಿಯನ್ನು ಪ್ರಾರಂಭಿಸುತ್ತವೆ. ಆದುದರಿಂದ ಇದು ಹೊಸ ಹರುಷ!

ಬೇಂದ್ರೆ ಈ ಮಾತನ್ನು ಮುಂದಿನ ನುಡಿಯಲ್ಲಿ ಹೀಗೆ ಹೇಳಿದ್ದಾರೆ:

ಹೊಂಗೆ ಹೂವ ತೊಂಗಲಲ್ಲಿ

ಭೃಂಗದ ಸಂಗೀತ ಕೇಲಿ

ಮತ್ತೆ ಕೇಳಬರುತಿದೆ.

ಬೇವಿನ ಕಹಿ ಬಾಳಿನಲ್ಲಿ

ಹೂವಿನ ನಸುಗಂಪು ಸೂಸಿ

ಜೀವಕಳೆಯ ತರುತಿದೆ.

ಪರಾಗಸ್ಪರ್ಷಕ್ಕಾಗಿ ಭೃಂಗಗಳನ್ನು ಆಹ್ವಾನಿಸಲು ಹೊಂಗೆ ಹೂವು ಗೊಂಚಲು ಗೊಂಚಲಾಗಿ ಹೂವುಗಳನ್ನು ಸುರಿಸುತ್ತದೆ. ದುಂಬಿಗಳ ಗುಂಗುಂಗಾನ ಈ ವರುಷವೂ ಪುನರಾವರ್ತಿಸುತ್ತಿದೆ. ಇಡೀ ವರುಷವೆಲ್ಲ ಕಹಿಯಾದ ಎಲೆ ಹಾಗೂ ಕಹಿಯಾದ ಕಾಯಿಗಳನ್ನೇ ಇಟ್ಟುಕೊಂಡ ಬೇವಿನ ಮರವು ಯುಗಾದಿಯಂದು ನಸುಕಂಪಿನ ಹೂವನ್ನು ಪಡೆದಿದೆ. ಹೀಗಾಗಿ ಅದಕ್ಕೂ ಸಹ ಒಂದು ಹೊಸ ಜೀವಕಳೆ ಬಂದಿದೆ!

ಈ ಸಂದರ್ಭದಲ್ಲಿ ಮತ್ತೊಂದು ಮಾತನ್ನು ಗಮನಿಸಬೇಕು. ಕವಿ ಎಂದು ಯಾರನ್ನು ಕರೆಯಬೇಕು? ಚೆಲುವನ್ನು ಕಾಣುವವನೇ ಕವಿ. ಆತ ಚರಾಚರ ಸೃಷ್ಟಿಯಲ್ಲಿಯ ಎಂಥಾ ಸಣ್ಣ ಕಣದಲ್ಲಿಯ ಚೆಲುವನ್ನೂ ಗಮನಿಸಿ ಸಂತೋಷಪಡುತ್ತಾನೆ. ಬೇಂದ್ರೆಯವರಿಗೆ ತಮ್ಮ ಹಿತ್ತಲಿನ, ತಮ್ಮ ಸುತ್ತಲಿನ ಹೊಂಗೆ, ಬೇವು, ಹುಣಸಿಯ ಮರ ಎಲ್ಲವೂ ಸಂತೋಷವನ್ನು ನೀಡುತ್ತವೆ. ಹುಣಸಿಯ ಮರವನ್ನು ನೆವ ಮಾಡಿ ಅವರು ಹೇಳಿದ ಕವನದ ಪ್ರಸಿದ್ಧ ಸಾಲುಗಳು ಹೀಗಿವೆ:

“ಕವಿಗೇನು ಬೇಕs?

ಹೂತ ಹುಣಸಿಮರ ಸಾಕs!”

ವಸಂತ ಋತುವಿನ ಆದಿಯಲ್ಲಿ ಗಿಡ, ಮರ, ಬಳ್ಳಿಗಳು ಹೂವುಗಳಿಂದ ಕಂಗೊಳಿಸುವ ಕಾರಣವನ್ನು ಕವಿ ಹೀಗೆ ಹೇಳುತ್ತಾರೆ:

ಕಮ್ಮನೆ ಬಾಣಕ್ಕೆ ಸೋತು

ಜುಮ್ಮನೆ ಮಾಮರವು ಹೂತು

ಕಾಮಗಾಗಿ ಕಾದಿದೆ.

ಈ ಮೇಲಿನ ಮೂರು ಸಾಲುಗಳು ಕವಿಯ ಅಸಾಮಾನ್ಯ ಕಲ್ಪನೆಯಯಿಂದಾಗಿ ಹೊರಹೊಮ್ಮಿವೆ.

ಕಾಮದೇವನ ಬಿಲ್ಲಿಗೆ ಕಬ್ಬಿನ ದಂಡ ಹಾಗು ದುಂಬಿಗಳ ಹೆದೆ ಇರುತ್ತದೆ. ಅವನು ಉಪಯೋಗಿಸುವದು ಐದು ತರಹದ ಹೂವಿನ ಬಾಣಗಳನ್ನು. ಇಂತಹ ಕಮ್ಮನೆಯ (=sweet) ಬಾಣಕ್ಕೆ ಸೋಲದ ಜೀವಿ ಉಂಟೆ?

ಇಲ್ಲಿ ಕಾಮದೇವನು ನಿಸರ್ಗವನ್ನು ಸೋಲಿಸಿಲ್ಲ ; ನಿಸರ್ಗವು ತಾನಾಗಿಯೆ ಕಾಮದೇವನಿಗೆ ಸೋತಿದೆ ; ಕಾಮದೇವನ ಬಾಣ ತಗುಲಿದೊಡನೆಯೆ, ಮಾವಿನ ಮರವು ಪುಳಕಗೊಂಡಿದೆ ; ಆ ಪುಳಕವು ಹೂವುಗಳಾಗಿ ಹೊರಹೊಮ್ಮಿದೆ.

ಈ ಕಲ್ಪನೆಗೆ ಅದ್ಭುತ ಕಲ್ಪನೆ ಎನ್ನಲೇ ಬೇಕು.

On the touch of Cupid’s arrow, the captive mango tree thrilled into flowers ಎನ್ನುವ ಸಾಲುಗಳನ್ನು ಜಗತ್ತಿನ ಯಾವ ಕವಿಯೂ ಹೇಳಿರಲಿಕ್ಕಿಲ್ಲ!

ಈ ರೀತಿಯಾಗಿ ಬೇಂದ್ರೆಯವರು ಬೇವು ಮಾವುಗಳೆಲ್ಲ (--ಅಹಾ! ಕಹಿ ಹಾಗೂ ಸಿಹಿಯಾದ ಮರಗಳ ಜೊತೆಯೆ!--) ಪುಷ್ಪವತಿಯರಾಗಿ ಕಾಮದೇವನಿಗಾಗಿ ಕಾಯುತ್ತಿರುವದನ್ನು ಹೇಳುತ್ತಾರೆ.

ಪುಷ್ಪವತಿಯಾದ ಸಸ್ಯಸಂಕುಲವು ಫಲವತಿಯಾಗಿ ಸಾರ್ಥಕ್ಯವನ್ನು ಪಡೆಯಬೇಕಾದರೆ ಪಕ್ಷಿಸಂಕುಲದ ನೆರವು ಬೇಕು. ಹಣ್ಣುಗಳ ಸುಗ್ಗಿಯ ಮುನ್ಸೂಚನೆಯನ್ನು ಪಡೆದ ಪಕ್ಷಿಸಂಕುಲವು ಗಿಡಮರಗಳಿಗೆ ಮುಗಿಬೀಳುತ್ತವೆ.

ಸುಗ್ಗಿ ಸುಗ್ಗಿ ಸುಗ್ಗಿ ಎಂದು

ಹಿಗ್ಗಿ ಗಿಳಿಯ ಸಾಲು ಸಾಲು

ತೋರಣದೊಲು ಕೋದಿದೆ.

ಮಾಮರವು ಇನ್ನೂ ಹಣ್ಣು ಬಿಟ್ಟಿಲ್ಲ. ಆದರೆ ಹಣ್ಣಿನ ಸುಗ್ಗಿ ಇನ್ನೇನು ಬಂದೇ ಬಿಟ್ಟಿತು ಎಂದು ಹಿಗ್ಗುತ್ತ ಗಿಳಿಗಳ ಸಾಲುಗಳು ಮಾಮರವನ್ನು ಆಶ್ರಯಿಸಿವೆ. ಗಿಳಿಗಳ ಈ ಸಾಲುಗಳು ಕವಿಗೆ ತೋರಣದಂತೆ ಕಾಣುತ್ತವೆ. ಆದರೆ ಇದು ಕಾಮದೇವನನ್ನು ಸ್ವಾಗತಿಸುವ ತೋರಣ.

ಈ ರೀತಿಯಾಗಿ ನಿಸರ್ಗವೆಲ್ಲ (--ಮನುಜನನ್ನು ಹೊರತುಪಡಿಸಿ--) ಹೊಸ ವರ್ಷದೊಡನೆ ಹೊಸ ಜನ್ಮ ತಾಳಿ ಸಂಭ್ರಮಿಸುತ್ತದೆ. ಹಳೆಯ ನೆಲೆಯನ್ನು ಕಳಚಿ ಹಾಕಿ, ಹರ್ಷದ ಹೊಸ ನೆಲೆಯನ್ನು ಪಡೆಯುತ್ತದೆ. ಪ್ರತಿ ವರುಷದಲ್ಲೂ ಪ್ರಕೃತಿಯು ಹೊಸ ಬಾಲ್ಯ ಹಾಗು ಹೊಸ ಯೌವನವನ್ನು ಪಡೆಯುತ್ತದೆ.

ಆದರೆ, ಮನುಜನ ಸ್ಥಿತಿ ಹೇಗಿದೆ?

ವರುಷಕೊಂದು ಹೊಸತು ಜನ್ಮ

ಹರುಷಕೊಂದು ಹೊಸತು ನೆಲೆಯು

ಅಖಿಲ ಜೀವಜಾತಕೆ!

ಒಂದೆ ಒಂದು ಜನ್ಮದಲ್ಲಿ

ಒಂದೆ ಬಾಲ್ಯ ಒಂದೆ ಹರೆಯ

ನಮಗದಷ್ಟೆ ಏತಕೆ?

ಮನುಜಕುಲಕ್ಕೆ ಮಾತ್ರ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಹಾಗೂ ಒಂದೇ ಯೌವನ! ನಮಗೂ ಸಹ ನಿದ್ದೆಯು ನಮ್ಮ ಹಳತನ್ನು ಕಳೆದೊಗೆದು, ಎಚ್ಚರವಾದೊಡನೆ ಹೊಸ ಜೀವನವನ್ನು ಕೊಡುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!

ನಿದ್ದೆಗೊಮ್ಮೆ ನಿತ್ಯ ಮರಣ

ಎದ್ದ ಸಲ ನವೀನ ಜನನ

ನಮಗೆ ಏಕೆ ಬಾರದೊ?

ಕವಿಯು ಕಾಮದೇವನನ್ನು (=ಸನತ್ಕುಮಾರನನ್ನು) ಪ್ರಶ್ನಿಸುತ್ತಾನೆ.

‘ಕಾಮದೇವಾ, ನೀನು ಚಿರಂಜೀವಿ, ನೀನು ಸಾಹಸಿ. ನಿನ್ನಂಥವನು ಮನುಜರಿಗೂ ಸಹ ಇಂತಹ ವೈಭೋಗ ಕೊಡಬೇಕಾಗಿತ್ತು. ಕೊಡದಿರುವ ಕಾರಣವೇನು? ನಿನಗೆ ಲೀಲೆ (=play) ಸೇರದೊ?’

ಎಲೆ ಸನತ್ಕುಮಾರದೇವ!

ಸಲೆ ಸಾಹಸಿ ಚಿರಂಜೀವ!

ನಿನಗೆ ಲೀಲೆ ಸೇರದೋ?

ಕವಿಯು ಪ್ರಕೃತಿಯ ಹಾಗು ಮನುಜರ ನಡುವಿನ ಈ ಕಂದರವನ್ನು ನೆನೆದು ವಿಷಾದಿಸುತ್ತಾನೆ:

ಯುಗಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ.

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ.

ನಮ್ಮನಷ್ಟೆ ಮರೆತಿದೆ!

೬. ರಾಗರತಿ

ಹೆಚ್ಚಿನ ಓದಿಗೆ: http://sallaap.blogspot.com/2011/05/blog-post_28.html

ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs

-ಆಗ- ಸಂಜೆಯಾಗಿತ್ತ;

ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs

ಹಾಳಿಗೆ ಮೇಲಕೆದ್ದಿತ್ತs

ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗೆ ಮೂಡಿತ್ತs

ಮ್ಯಾಲಕ ಬೆಳ್ಳಿನ ಕೂಡಿತ್ತ;

ಇರುಳ ಹೆರಳಿನಾ ಅರಳು ಮಲ್ಲಿಗೀ ಜಾಳಿಗೆ ಹಾಂಗೆತ್ತ

ಸೂಸ್ಯಾವ ಚಿಕ್ಕಿ ಅತ್ತಿತ್ತ.

ಬೊಗಸಿ ಕಣ್ಣಿನಾ ಬಯಸೆಯ ಹೆಣ್ಣು ನೀರಿಗೆ ಹೋಗಿತ್ತs

ತಿರುಗಿ ಮನೀಗೆ ಸಾಗಿತ್ತ;

ಕಾಮಿ ಬೆಕಿನ್ಹಾಂಗ ಭಾಂವಿ ಹಾದಿ ಕಾಲಾಗ ಸುಳಿತಿತ್ತs

ಎರಗಿ ಹಿಂದಕ್ಕುಳಿತಿತ್ತ.

ಮಳ್ಳುಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs

ಮತಮತ ಬೆಡಗಿಲೆ ಬಿಡತಿತ್ತ;

ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs

ತನ್ನ ಮೈಮರ ಮರತಿತ್ತ.

ಬೇಂದ್ರೆಯವರನ್ನು ಪ್ರಕೃತಿಕವಿ ಎಂದು ಕರೆಯಬಹುದೆ?

ಪ್ರಕೃತಿವೈಭವದ ಬಗೆಗೆ ಬೇಂದ್ರೆಯವರು ಅನೇಕ ಕವನಗಳನ್ನು ಬರೆದಿದ್ದಾರೆ. ನಿಸರ್ಗದ ವಿವಿಧ ಮುಖಗಳನ್ನು ಅವರಷ್ಟು ವಿಸ್ತಾರವಾಗಿ ಹಾಗು ಆಳವಾಗಿ ಸೆರೆ ಹಿಡಿದವರು ಮತ್ತೊಬ್ಬರಿಲ್ಲ. ಬೆಳಗು ಹಾಗು ಶ್ರಾವಣ ಇವು ಅವರ ಕಾವ್ಯದ ಪ್ರೀತಿಯ ವಿಷಯಗಳು.

ಬೆಳಗು’ ಅವರ ತುಂಬ ಪ್ರಸಿದ್ಧಿ ಪಡೆದ ಕವನ. ಈ ಕವನದಲ್ಲಿ ಅವರು ಉದಯಕಾಲದಲ್ಲಿ ಮೈಮರೆತ ಕವಿಯ ಭಾವಸಮಾಧಿಯನ್ನು ಚಿತ್ರಿಸಿದ್ದಾರೆ:

(“ಶಾಂತಿರಸವೆ ಪ್ರೀತಿಯಿಂದ ಮೈದೋರಿತಣ್ಣಾ,ಇದು ಬರಿ ಬೆಳಗಲ್ಲೊ ಅಣ್ಣಾ”).

`ಬೆಳಗು’ ಕವನದಲ್ಲಿ ಏಕಾಂತ ಭಾವನೆ ಇದ್ದರೆ, ಅವರ ‘ಸೂರ್ಯನ ಹೊಳಿ’ ಎನ್ನುವ ಕವನದಲ್ಲಿ ಇದಕ್ಕೆ ವ್ಯತಿರಿಕ್ತವಾದ ಒಡನಾಟದ, ಉಲ್ಲಾಸದ ಕರೆ ಇದೆ:

(“ಬಂದsದ ಸೂರ್ಯನs ಹೊಳೀ

ನಡೀ ಮೈತೊಳಿ, ನೀರಿನ್ಯಾಗಿಳಿ

ಬಾ ಗೆಣೆಯಾ, ಯಾಕ ಮೈಛಳೀ”)

ಅವರ ‘ಉಷಾಸೂಕ್ತ’ವು ಸೂರ್ಯೋದಯದ ಮೊದಲಲ್ಲಿ ಆಗಮಿಸುವ ಉಷೆಯನ್ನು ಸ್ತುತಿಸುತ್ತದೆ:

(“ಅಂದೆ ಕಂಡು ನಿನ್ನ ಛವಿ

ಹಾಡಿ ಕರೆದ ವೇದದ ಕವಿ

ಎಂದು ಬರುವನವ್ವ ರವಿ?

ಛಂದ ಕುಣಿದು ಬಾರೆ

ಮುಂದೆ ರವಿಯ ತಾರೆ.”)

ಉದಯಕಾಲದ ಅವರ ಮತ್ತೊಂದು ಕವನವು ಬೆಳಕನ್ನು ಬಲೆಯಂತೆ ಚಿತ್ರಿಸುವ ಅಪೂರ್ವ ಉಪಮೆಯನ್ನು ಹೊಂದಿದೆ.

(“ಏಳು ಚಿಣ್ಣ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ

ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ

ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ಝುಮ್ ಎಂದು ಬಿಟ್ಟ ಮಾರ

ಗುಡಿಗೋಪುರಕ್ಕು ಬಲೆ ಬೀಸಿ ಬಂದ,ಅಗೊ ಬೆಳಕು ಬೇಟೆಗಾರ.”)

‘ನಸುಕು ಬಂತು ನಸುಕು’ ಎನ್ನುವ ಕವನದಲ್ಲಿ ಬೇಂದ್ರೆಯವರು ರಾತ್ರಿ ಹಾಗು ಬೆಳಗಿನ ನಡುವೆ ಇರುವ ಸಂಬಂಧದ ಅಪೂರ್ವ ಕಲ್ಪನೆಯನ್ನು ತೋರಿಸಿದ್ದಾರೆ:

(“ಬೆಳಗು ಗಾಳಿ ತಾಕಿ ಚಳಿತು

ಇರುಳ ಮರವು ಒಡೆದು ತಳಿತು

ಅರುಣ ಗಂಧ ಹರುಹಿ ಒಳಿತು

ನಸುಕು ಬಂತು.”)

ಬೇಂದ್ರೆಯವರ ‘ವಸಂತಮುಖ’ ಕವನವಂತೂ ಸೂರ್ಯೋದಯದ ಮೂಲಕ ಪ್ರಕೃತಿಯ ಚೈತನ್ಯವನ್ನೇ ತೆರೆದು ತೋರಿಸುವ ದರ್ಶನವನ್ನು ಹೊಂದಿದೆ:

(“ಉದಿತ ದಿನ! ಮುದಿತ ವನ

ವಿಧವಿಧ ವಿಹಗಸ್ವನ

ಇದುವೆ ಜೀವ, ಇದು ಜೀವನ

ಪವನದಂತೆ ಪಾವನ.”)

ಇವೆಲ್ಲ ನಿಸರ್ಗವರ್ಣನೆಗಳಾದವು. ಆದರೆ ಪ್ರಕೃತಿ ಹಾಗು ಬೇಂದ್ರೆಯವರ ನಡುವೆ, ವರ್ಣನೆಗಳಿಗೆ ಮೀರಿದ ಸಂಬಂಧವೊಂದು ಜೀವಂತವಿದೆ. ಪ್ರಕೃತಿಯ ಭಾವಸಂಚಾರಕ್ಕೂ ಮಾನವ ಭಾವಸಂಚಾರಕ್ಕೂ ಅವರು ಮಾಡುವ ಸಮೀಕರಣವು ಅವರನ್ನು ನಿಜವಾದ ಅರ್ಥದಲ್ಲಿ ಪ್ರಕೃತಿಕವಿಯನ್ನಾಗಿ ಮಾಡಿದೆ. ಅವರ ಅನೇಕ ಕವನಗಳಲ್ಲಿ ಪ್ರಕೃತಿಯ ಮಾನುಷೀಕರಣವಿದೆ, ಹಲವೆಡೆಗಳಲ್ಲಿ ಪ್ರಕೃತಿಯ ದೈವೀಕರಣವೂ ಇದೆ. ಉದಾಹರಣೆಗೆ, ಅವರ ‘ಶ್ರಾವಣಾ’ ಎನ್ನುವ ಕವನದ ಈ ನುಡಿಯನ್ನು ನೋಡಿರಿ:

(“ಗುಡ್ಡ ಗುಡ್ಡ ಸ್ಥಾವರ ಲಿಂಗ

ಅವಕ ಅಭ್ಯಂಗ

ಎರಿತಾವನ್ನೊ ಹಾಂಗ

ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ”)

ಬೇಂದ್ರೆಯವರ ‘ನನ್ನವಳು’ ಕವನವು ದಾಂಪತ್ಯಪ್ರೇಮದ ಶ್ರೇಷ್ಠ ಅಭಿವ್ಯಕ್ತಿಯಾಗಿದೆ. ಈ ಕವನದಲ್ಲಿ ಪ್ರಕೃತಿಯ ಮೂರು ಮುಖಗಳನ್ನು (ಸಂಜೆ, ಇರುಳು ಹಾಗು ನಸುಕು) ಕವಿಯು ತನ್ನ ಕೆಳದಿಯೊಡನೆ ಸಮೀಕರಿಸಿ, ತನ್ನವಳು ತನಗೆ ಹೇಗೆ ಸದಾಕಾಲವೂ ಅನ್ಯೋನ್ಯಳಾಗಿದ್ದಾಳೆ ಎಂದು ಚಿತ್ರಿಸಿದ್ದಾನೆ.

ಈ ರೀತಿಯಾಗಿ ಬೇಂದ್ರೆಯವರು ಪ್ರಕೃತಿಯೊಡನೆ ಸಾಮರಸ್ಯ ಸಾಧಿಸಿದ್ದರಿಂದ, ಅವರನ್ನು ಪ್ರಕೃತಿಕವಿ ಎಂದು ಕರೆಯುವದು ಸಮುಚಿತವಾಗಿದೆ.

.............................................................................................

ಬೇಂದ್ರೆಯವರ ಜನಪ್ರಿಯ ಕವನವಾದ ‘ರಾಗರತಿ’ಯಲ್ಲಿ, ಸಂಧ್ಯಾಕಾಲದ ಪ್ರಕೃತಿಶೃಂಗಾರವನ್ನು ಹೆಣ್ಣೊಬ್ಬಳ ಭಾವವಿಕಾರದೊಡನೆ ಸಮೀಕರಿಸಲಾಗಿದೆ. ಹೆಣ್ಣೊಬ್ಬಳ ಮನದಲ್ಲಿ ಮಲಗಿರುವ ಬಯಕೆಯು ಎಚ್ಚೆತ್ತು, ಹೆಡೆಯಾಡಿಸುತ್ತಿರುವ ವರ್ಣನೆಯು ‘ರಾಗರತಿ’ ಕವನದ ತಿರುಳಾಗಿದೆ. ಕವನದ ಮೊದಲ ಎರಡು ನುಡಿಗಳಲ್ಲಿ ಸಂಧ್ಯಾಕಾಲದ ಪ್ರಕೃತಿವರ್ಣನೆ ಇದ್ದರೆ, ಕೊನೆಯ ಎರಡು ನುಡಿಗಳಲ್ಲಿ ಹೆಣ್ಣೊಬ್ಬಳ ಅಂತರಂಗದ ಚಿತ್ರಣವಿದೆ.

ಕವನ ಹೀಗಿದೆ:

ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs

——ಆಗ—ಸಂಜೆಯಾಗಿತ್ತ;

ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs

ಗಾಳಿಗೆ ಮೇಲಕ್ಕೆದ್ದಿತ್ತs.

ಬಿದಿಗಿ ಚಂದ್ರನಾ ಚೊಗಚೀ—ನಗಿ—ಹೂ ಮೆಲ್ಲಗ ಮೂಡಿತ್ತs

ಮ್ಯಾಲಕ ಬೆಳ್ಳಿನ ಕೂಡಿತ್ತ;

ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗಿತ್ತ

ಸೂಸ್ಯಾವ ಚಿಕ್ಕಿ ಅತ್ತಿತ್ತ.

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತs

ತಿರುಗಿ ಮನೀಗೆ ಸಾಗಿತ್ತ;

ಕಾಮಿ ಬೆಕ್ಕಿನ್ಹಾಂಗ ಭಾಂವೀ ಹಾದಿ ಕಾಲಾಗ ಸುಳಿತಿತ್ತs

ಎರಗಿ ಹಿಂದಕ್ಕುಳಿತಿತ್ತ.

ಮಳ್ಳಗಾಳಿ—ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs

ಮತಮತ ಬೆರಗಿಲೆ ಬಿಡತಿತ್ತ;

ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs

ತನ್ನ ಮೈಮರ ಮರೆತಿತ್ತ.

…………………………………………………………………..

ಕವನದ ಮೊದಲ ನುಡಿ ಹೀಗಿದೆ:

ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs

——ಆಗ—ಸಂಜೆಯಾಗಿತ್ತ;

ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs

ಗಾಳಿಗೆ ಮೇಲಕ್ಕೆದ್ದಿತ್ತs.

ಮುಳುಗುತ್ತಿರುವ ಸೂರ್ಯನ ಕಿರಣಗಳಿಂದಾಗಿ ಮುಗಿಲೆಲ್ಲ ಗಾಢವಾದ ಕೆಂಪುವರ್ಣವನ್ನು ತಳೆದಿದೆ. ಇದನ್ನು ಬೇಂದ್ರೆಯವರು ‘ರಾಗರತಿ’ ಎಂದು ಬಣ್ಣಿಸುತ್ತಾರೆ. ರಾಗರತಿ ಎಂದರೆ ತೀವ್ರವಾದ ಕಾಮನೆಯೂ ಹೌದು.

‘ಮುಗಿಲ ಮಾರಿಗೆ’ ಎಂದು ಹೇಳುವ ಮೂಲಕ ಈ ಕೆಂಪು ವರ್ಣವು ಬಾನಲ್ಲಿ ಹರಡಿದ ಭೌತಿಕ ವರ್ಣವಷ್ಟೇ ಅಲ್ಲ, ಪ್ರಕೃತಿ ಎನ್ನುವ ಹೆಣ್ಣಿನ ಮನದ ಬಯಕೆಯ ಬಣ್ಣವೆನ್ನುವದನ್ನು ಬೇಂದ್ರೆಯವರು ಸೂಚ್ಯವಾಗಿ ಹೇಳುತ್ತಾರೆ. ಈ ರೀತಿಯಾಗಿ ಪ್ರಕೃತಿಯ ಮಾನುಷೀಕರಣವು ಇಲ್ಲಿದೆ.

ಬೇಂದ್ರೆಯವರು ‘ರಾಗರತಿಯ ನಂಜ ಏರಿತ್ತ’ ಎಂದು ಏಕೆ ಹೇಳುತ್ತಿದ್ದಾರೆ? ನಂಜು ಎಂದರೆ ವಿಷ ಅಲ್ಲವೆ? ಬಹುಶಃ ಅದರ ಕಾರಣ ಹೀಗಿರಬಹುದು:

ಪ್ರಕೃತಿಯ ಸಂಧ್ಯಾಕಾಲದ ಕಾಮನೆಯನ್ನು ಬೇಂದ್ರೆಯವರು ಉದಾರವಾಗಿ ಅಥವಾ ತಟಸ್ಥವಾಗಿ ನೋಡುವದಿಲ್ಲ. ಈ ಪ್ರಕೃತಿಸ್ತ್ರೀಯ ಮುಖಕ್ಕೆ ಹರಡಿದ ರತಿರಾಗವನ್ನು ‘ನಂಜು’ ಎಂದು ಕರೆಯುವ ಮೂಲಕ, ಅವರು ತಮ್ಮ ಆಕ್ಷೇಪಣೆಯನ್ನು ಸ್ಪಷ್ಟಪಡಿಸುತ್ತಾರೆ. ಕಾಮನೆಯು ಪ್ರಕೃತಿಧರ್ಮವೇನೋ ಹೌದು, ಆದರೆ ಅದು ಸಕಾಲಿಕವಿರಬೇಕು ಹಾಗು ಸಪಾತ್ರವಾಗಿರಬೇಕು. ಅಕಾಲಿಕವಾದಾಗ ಅಥವಾ ಅಪಾತ್ರವಾದಾಗ ಅದು ನಂಜು ಅಂದರೆ ವಿಷದಂತೆ ಏರುತ್ತದೆ. ಅದರ ಪರಿಣಾಮವೂ ವಿಷದಂತೆಯೇ ಆಗಬಹುದು!

ಇಂತಹ ಅಕಾಲಿಕ ಅಥವಾ ಅಪಾತ್ರ ಕಾಮನೆಗೆ ಕಾರಣವೇನಿರಬಹುದು? ಮುಂದಿನ ಸಾಲುಗಳಲ್ಲಿ ಅದು ಸ್ಪಷ್ಟವಾಗುತ್ತದೆ:

ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs

ಗಾಳಿಗೆ ಮೇಲಕ್ಕೆದ್ದಿತ್ತs.

ಮಂಜಿನ ಮುಸುಕು ಎಂದರೆ ತಿಳಿವನ್ನು ಹದಗೆಡಿಸುವಂತಹ ಭಾವವಿಕಾರ. ಈ ವಿಕಾರವು ನೆಲದ ಅಂಚಿನಲ್ಲಿ ಅಂದರೆ ಮನಸ್ಸಿನ ತಳಭಾಗದಲ್ಲಿ ಮುದುಡಿಕೊಂಡು ಮಲಗಿತ್ತು. ಆದರೆ ಇದನ್ನು ಅಲುಗಾಡಿಸುವಂತಹ ‘ಗಾಳಿ’ ಬೀಸಿದ್ದರಿಂದ, ಮಂಜಿನ ಮುಸುಕು, ಮನಸ್ಸಿನ ಮುಂಭಾಗಕ್ಕೂ ಸಹ ಸರಿದು ಬಂದಿತು. ಪ್ರಕೃತಿಯಲ್ಲಿ ಹೇಗೋ, ನಾಯಕಿಯ ಅಂತರಂಗದಲ್ಲಿಯೂ ಸಹ ಈ ಗಾಳಿಯು ಭಾವವಿಕಾರವನ್ನು ನಂಜಿನಂತೆ ಹಬ್ಬಿಸಿದೆ.

ಗಾಳಿ ಎನ್ನುವದಕ್ಕೆ ವಿವಿಧ ಅರ್ಥಗಳನ್ನು ಹೇಳಬಹುದು.

ಈ ವರೆಗೆ ತಿಳಿದಿರದ ಹೊಸ ವಿಚಾರವೂ ಗಾಳಿಯೇ, ಅರಿವಿಗೆ ಬಾರದ ಭಾವವೂ ಗಾಳಿಯೇ. ದೆವ್ವಕ್ಕೂ ಸಹ ಗಾಳಿ ಎನ್ನುತ್ತಾರೆ. ಒಟ್ಟಿನಲ್ಲಿ, ಇಲ್ಲಿಯವರೆಗೆ, ನಿರಾಳವಾಗಿದ್ದ ಮನಸ್ಸು ಈಗ ಕಂಪಿಸಿದೆ. (ಈ ಕವನದ ಕೊನೆಯ ನುಡಿಯಲ್ಲಿ ಈ ಗಾಳಿಯ ಕುರುಹನ್ನು ನೀಡಲಾಗಿದೆ!)

ಮೊದಲನೆಯ ಸಾಲಿನಲ್ಲಿ ಮುಗಿಲು ಕೆಂಬಣ್ಣ ತಾಳಿರುವದನ್ನು ಹೇಳುವಾಗ, ಬೇಂದ್ರೆಯವರು ಕಾಲವನ್ನು ಸೂಚಿಸಿಲ್ಲ. ಇದು ಮುಂಜಾವಿನ ಸಮಯವಾದರೆ, ಮನದಲ್ಲಿ ಭಾವವಿಕಾರವಾಗುವದು ಅಸಂಭವ. ಈ ಸಂದಿಗ್ಧತೆಯನ್ನು ತಪ್ಪಿಸಲೆಂದೇ, ಬೇಂದ್ರೆಯವರು ಎರಡನೆಯ ಸಾಲಿನಲ್ಲಿ, ‘ಆಗ ಸಂಜೆಯಾಗಿತ್ತs’ ಎಂದು explicit ಆಗಿ ಹೇಳಿಬಿಡುತ್ತಾರೆ.

ರತಿರಾಗಕ್ಕೆ ನಂಜು ಎನ್ನುವ ವಿಶೇಷಣವನ್ನು ಬಳಸಲು ಬೇಂದ್ರೆಯವರಿಗೆ ಮತ್ತೊಂದು ಕಾರಣವೂ ಇದೆ.

ನಂಜಿನ ಬಣ್ಣವು ಕಡುಕಪ್ಪಾಗಿದ್ದು, ಮಂಜಿನೊಡನೆ ಬೆರೆತಾಗ, ಅದು ಬೂದಿ ಬಣ್ಣದವರೆಗಿನ ವರ್ಣಶ್ರೇಣಿಯನ್ನು ನಿರ್ಮಿಸುತ್ತದೆ. ಅದೇ ರೀತಿಯಲ್ಲಿ ಬೇಂದ್ರೆಯವರು, ‘ರಾಗರತಿ’ ಕವನದಲ್ಲಿಯೂ ಸಹ ನಂಜಿನಂತಹ ಕಡುಗೆಂಪುಬಣ್ಣವು, ಮಂಜಿನಿಂದಾಗಿ ಬೂದುಗೆಂಪಾಗಿ ಮಾರ್ಪಟ್ಟಿದೆ ಎಂದು ಹೇಳುತ್ತಿರಬಹುದು.

ದೈಹಿಕ ಆಕರ್ಷಣೆ ಹಾಗು ಕಾಮನೆ ಇವು ಗಂಡು,ಹೆಣ್ಣಿನ ನಡುವಿನ ಸಂಬಂಧದ ಮೊದಲ ಮೆಟ್ಟಿಲಾದರೂ ಸಹ, ರತಿರಾಗವನ್ನು ಮೀರಿದ ಪ್ರೇಮ ಮುಂದಿನ ಮೆಟ್ಟಲಾಗಿದೆ. ಅದು ಶುಕ್ಲಪಕ್ಷದ ಬಿದಿಗೆಯ ಚಂದ್ರನಂತೆ ನಿರ್ಮಲವಾಗಿ ವರ್ಧಿಸುತ್ತಿದೆ. ಈ ಭಾವವು ಎರಡನೆಯ ನುಡಿಯಲ್ಲಿ ವ್ಯಕ್ತವಾಗಿದೆ:

ಬಿದಿಗಿ ಚಂದ್ರನಾ ಚೊಗಚೀ—ನಗಿ—ಹೂ ಮೆಲ್ಲಗ ಮೂಡಿತ್ತs

ಮ್ಯಾಲಕ ಬೆಳ್ಳಿನ ಕೂಡಿತ್ತ;

ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗಿತ್ತ

ಸೂಸ್ಯಾವ ಚಿಕ್ಕಿ ಅತ್ತಿತ್ತ.

ಸೂರ್ಯಾಸ್ತದ ನಂತರ ಈಗ ಚಂದ್ರೋದಯವಾಗುತ್ತಿದೆ. ಬಿದಿಗೆಯ ಚಂದ್ರ ಮೂಡುತ್ತಿದ್ದಾನೆ. ಸೂರ್ಯನ ಜೊತೆಜೊತೆಗೇ ಚಲಿಸುವ ಬೆಳ್ಳಿಚಿಕ್ಕಿಯನ್ನು(=ಶುಕ್ರ ಗ್ರಹವನ್ನು) ಚಂದ್ರ ಕೂಡುತ್ತಿದ್ದಾನೆ ಎಂದರೆ ಸೂರ್ಯ, ಚಂದ್ರರಿಬ್ಬರೂ ಪಶ್ಚಿಮ ದಿಕ್ಕಿನಲ್ಲಿಯೇ ಇದ್ದಾರೆ. ಆದುದರಿಂದ ಇದು ಅಮವಾಸ್ಯೆಯ ನಂತರದ ಶುಕ್ಲಪಕ್ಷದ ಬಿದಿಗೆ.

ಈ ಅವಧಿಯಲ್ಲಿ ಚಂದ್ರ ಇನ್ನೂ ಕ್ಷೀಣವಾಗಿಯೇ ಇರುತ್ತಾನೆ. ಆತನ ಬೆಳದಿಂಗಳು ಮಂದವಾಗಿರುತ್ತದೆ. ಹಾಗಾಗಿ ಆಗಸದಲ್ಲಿ ಅಲ್ಲಲ್ಲಿ ಚಿಕ್ಕೆಗಳು ಸೂಸಿವೆ. ಬೇಂದ್ರೆಯವರ ಕಣ್ಣಿಗೆ ಈ ಚಿಕ್ಕೆಗಳು ಇರುಳೆಂಬ ನಾರಿ ತನ್ನ ಹೆರಳಿನಲ್ಲಿ ಧರಿಸಿದ ಅರಳು ಮಲ್ಲಿಗೆ ಹೂವುಗಳ ಜಾಳಿಗೆಯಂತೆ ಕಾಣುತ್ತವೆ. ಅತ್ಯಂತ ಸುಂದರವಾದ ಪ್ರಕೃತಿಚಿತ್ರಣವಿದು. ಪ್ರಕೃತಿಶೃಂಗಾರದ ಈ ಚಿತ್ರಣವು ಕವನದಲ್ಲಿಯ ಅಭಿಸಾರ ಭಾವನೆಗೆ ಬಲ ನೀಡುತ್ತದೆ.

[ ಟಿಪ್ಪಣಿ: ಚೊಗಚಿ ಹೂವು=Cassia occidentalis ]

ಮೊದಲನೆಯ ನುಡಿಯಲ್ಲಿ ಬೇಂದ್ರೆಯವರು ಪ್ರಕೃತಿಯಲ್ಲಿ ಮೂಡಿದ ಭಾವವಿಕಾರವನ್ನು ವರ್ಣಿಸಿದರೆ, ಎರಡನೆಯ ನುಡಿಯಲ್ಲಿ ಅಭಿಸಾರ-ಆಸಕ್ತ ನಿಸರ್ಗದ ಶೃಂಗಾರಭರಿತ ಚಿತ್ರವನ್ನು ಹಾಗು ಶುಕ್ಲಪಕ್ಷದ ಬಿದಿಗೆಯ ಚಂದ್ರನಂತೆ ವರ್ಧಿಸುತ್ತಿರುವ ನಿರ್ಮಲಪ್ರೇಮವನ್ನು ವರ್ಣಿಸಿದ್ದಾರೆ.

ಇದು ಪ್ರಕೃತಿವರ್ಣನೆಯಾಯಿತು. ಈ ಸನ್ನಿವೇಶದಲ್ಲಿ, ನಾಯಕಿಯ ಮನಃಸ್ಥಿತಿಯು ಹೇಗಿದೆ ಎನ್ನುವದರ ಚಿತ್ರಣವು ಮುಂದಿನ ಎರಡು ನುಡಿಗಳಲ್ಲಿದೆ.

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತs

ತಿರುಗಿ ಮನೀಗೆ ಸಾಗಿತ್ತ;

ಕಾಮಿ ಬೆಕ್ಕಿನ್ಹಾಂಗ ಭಾಂವೀ ಹಾದಿ ಕಾಲಾಗ ಸುಳಿತಿತ್ತs

ಎರಗಿ ಹಿಂದಕ್ಕುಳಿತಿತ್ತ.

ಬೇಂದ್ರೆಯವರು ಈ ಕವನವನ್ನು ಬರೆದ ಕಾಲದಲ್ಲಿ, ನೀರಿಗಾಗಿ ಕೆರೆ ಅಥವಾ ಬಾವಿಗಳನ್ನೇ ಆಶ್ರಯಿಸಬೇಕಾಗಿತ್ತು. ಹೆಣ್ಣುಮಕ್ಕಳು ಮುಂಜಾನೆ ಹಾಗು ಸಂಜೆಗೆ ನೀರು ತರಲು ಹೋಗುತ್ತಿದ್ದರು. ಅಂತಹ ಹೆಣ್ಣುಮಗಳೊಬ್ಬಳು ಸಂಜೆಯ ಸಮಯದಲ್ಲಿ ಬಾವಿಯಿಂದ ನೀರು ಸೇದಿಕೊಂಡು ತನ್ನ ಮನೆಗೆ ಹಿಂತಿರುಗುತ್ತಿದ್ದಾಳೆ.

ಈ ಹೆಣ್ಣು ಮಗಳು ಎಂಥವಳು?

‘ಬಟ್ಟಲುಗಣ್ಣು’ ಎನ್ನುವದು ಚೆಲುವಿನ ಲಕ್ಷಣವಾಗಿದೆ. ಇವಳು ಕೇವಲ ಬಟ್ಟಲುಗಣ್ಣುಗಳ ಹೆಣ್ಣಲ್ಲ, ‘ಬೊಗಸೆಗಣ್ಣವಳು’! ಕಣ್ಣುಗಳೇ ಬೊಗಸೆಯಾದವಳು! ಬೊಗಸೆಯು ‘ಕೊಡು-ಕೊಳ್ಳು’ವಿಕೆಯನ್ನು ಸೂಚಿಸುತ್ತದೆ. ಮನದ ಬಯಕೆಯ ಈ ಕೊಡು-ಕೊಳ್ಳುವಿಕೆಯು ಇಲ್ಲಿ ಕಣ್ಣುಗಳ ಮೂಲಕವೇ ಆಗುತ್ತಿದೆ. ಆದರೆ ಕೇವಲ ನೇತ್ರವ್ಯವಹಾರವು ಬಯಕೆಯನ್ನು ಹಿಂಗಿಸಬಲ್ಲದೆ? ಆದುದರಿಂದ ನೀರು ತುಂಬಿಕೊಂಡ ಬಳಿಕ ಅವಳು ತನ್ನ ಮನೆಗೆ ಮರಳುತ್ತಿದ್ದರೂ ಸಹ, ಅವಳ ಮನಸ್ಸು ಹಿಂದೆ ಬಿಟ್ಟ ಬಾವಿಯ ಕಡೆಯಲ್ಲಿಯೇ ಇದೆ. ಬಾವಿಯ ಹಾದಿ ಅವಳನ್ನು ಮತ್ತೆ ಕರೆಯುತ್ತಿದೆ. ‘ಕಾಮಿ ಬೆಕ್ಕಿನ್ಹಾಂಗ ಭಾಂವೀ ಹಾದಿ ಕಾಲಾಗ ಸುಳಿತಿತ್ತs’ ಎನ್ನುವ ಮೂಲಕ ಬೇಂದ್ರೆ ಇದನ್ನು ಸ್ಪಷ್ಟಗೊಳಿಸುತ್ತಾರೆ. ಸಾಕಿದ ಬೆಕ್ಕು ನಿಮ್ಮ ಜೊತೆಗೇ ಸಾಗುತ್ತದೆ, ನಿಮ್ಮ ಕಾಲಿಗೆ ತೊಡರುತ್ತದೆ. ಇವಳು ಮರಳುತ್ತಿರುವ ಹಾದಿಯು, ಇವಳನ್ನು ಮರಳಿ ಕರೆಯುತ್ತಿದೆ. (ಅಂಥಾದ್ದು ಅಲ್ಲೇನಿದೆ?) ಮನೆಗೆ ಮರಳುವಾಗ, ನಾಯಕಿಯು ತನ್ನೆಲ್ಲ ಬಯಕೆಗಳನ್ನು ಬಾವಿಯ ಬಳಿಯಲ್ಲಿಯೇ ಬಿಟ್ಟು ಬರಬೇಕಲ್ಲವೆ? ಆದುದರಿಂದಲೇ ಆ ಹಾದಿಯು ಅವಳನ್ನು ಬಿಡುತ್ತಿಲ್ಲ. ಅರ್ಥಾತ್ ಅವಳೇ ಆ ಹಾದಿಯನ್ನು ಬಿಡಲು ಒಲ್ಲಳು!

ಒಂದು ಕಾಲದಲ್ಲಿ ‘ಕಾಮಿ’ ಎನ್ನುವದು ಸಾಕು ಬೆಕ್ಕುಗಳ ಪ್ರೀತಿಯ ಹೆಸರಾಗಿತ್ತು. ಈ ಕಾಮಿನಿಯು ತನ್ನ ಮನದಲ್ಲಿಯೆ ಸಾಕಿ, ಪೋಷಿಸುತ್ತಿರುವ ಕಾಮಭಾವನೆಯೂ ಸಹ, ಕಾಮಿ ಬೆಕ್ಕಿನಂತೆ ಅವಳನ್ನು ಕಾಡುತ್ತ, ಅವಳ ಜೊತೆಗೇ ಬರುತ್ತ, ಮತ್ತೆ ಮತ್ತೆ ಹಿನ್ನೋಟ ಬೀರುತ್ತ ಸಾಗಿದೆ. ಬೆಕ್ಕು ಮೈಯನ್ನು ಅಡರಿದರೆ ಕಾಮಭಾವನೆಯು ಮನಸ್ಸನ್ನು ಆಡರುತ್ತದೆ. ಆದುದರಿಂದ ಕಾಮಭಾವನೆಗೆ ಬೆಕ್ಕಿನ ಪ್ರತೀಕವನ್ನು ಬಳಸಿದ್ದು ಇಲ್ಲಿ ಅತ್ಯಂತ ಸಮರ್ಪಕವಾಗಿದೆ.

ಕೊನೆಯ ನುಡಿಯಲ್ಲಿ ಈ ನಾಯಕಿಯ ಮನೋವಿಕಾರದ ಭ್ರಮಾಲೋಕದ ವರ್ಣನೆ ಇದೆ:

ಮಳ್ಳಗಾಳಿ—ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs

ಮತಮತ ಬೆರಗಿಲೆ ಬಿಡತಿತ್ತ;

ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs

ತನ್ನ ಮೈಮರ ಮರೆತಿತ್ತ.

ಈ ಕಾಮಿನಿಯ ಮನಸ್ಸಿನಲ್ಲಿ ಅವಳ ಗೆಣೆಕಾರನ ಆಕರ್ಷಣೆ ತುಂಬಿಕೊಂಡಿದೆ. ಅವಳ ಸೆರಗು ಗಾಳಿಗೆ ಸೆಳೆದಂತಾದಾಗ, ಅವಳಿಗೆ ಅದು ತನ್ನ ಗೆಣೆಯನ ಚೇಷ್ಟೆ ಎನ್ನುವ ಭ್ರಮೆ ಥಟ್ಟನೆ ಹುಟ್ಟುತ್ತದೆ. ಅದು ಅವಳ ಒಳಬಯಕೆಯೂ ಆಗಿದೆ. ಆದರೆ ಮತ್ತೆ ಅವಳಿಗೆ ಭ್ರಮನಿರಸನವಾಗುತ್ತೆದೆ. ಇದೆಕ್ಕೆಲ್ಲ ಕಾರಣವಾದ ಈ ಅಮಾಯಕ ಗಾಳಿಗೆ ನಾಯಕಿಯ ಬಗೆಗೆ ಪ್ರಣಯಭಾವನೆಯೇನೂ ಇಲ್ಲವಲ್ಲ! ಆದುದರಿಂದ ಅದು ಕೇವಲ ‘ಮಳ್ಳಗಾಳಿ’. ಆದರೆ ನಾಯಕಿಯು ತನ್ನ ಗೆಣೆಯನೇ ಸುಳಿವು ಕೊಡದೇ ‘ಕಳ್ಳಾಟ’ ಆಡುತ್ತಿದ್ದಾನೆ ಎಂದು ಭಾವಿಸುತ್ತಿದ್ದಾಳೆ. ಅವಳ ಈ ಹುಚ್ಚು ಅವಸ್ಥೆಯನ್ನು ಹತ್ತಿರದಿಂದ ಗಮನಿಸುತ್ತಿರುವ ಗಾಳಿಯೂ ಸಹ ಬೆರಗುಗೊಳ್ಳುತ್ತದೆ. (ಬೇಂದ್ರೆಯವರು ಗಾಳಿಯನ್ನು ಮಾನುಷೀಕರಣಗೊಳಿಸುವ ಪರಿಯನ್ನು ಗಮನಿಸಬೇಕು.) ಇನ್ನು ಅವಳ ಗೆಣೆಕಾರ ಅಲ್ಲಿ ಇಲ್ಲದಿದ್ದರೂ ಸಹ ಅವನ ಮನಸ್ಸು ಅಲ್ಲಿಯೇ ಸುತ್ತುತ್ತಿದೆ, ಅವಳ ಬೆನ್ನ ಹಿಂದೆಯೇ ಗಿಳಿಯಂತೆ ಹಾರಾಡುತ್ತ ಬರುತ್ತಿದೆ. (ಮೊದಲನೆಯ ನುಡಿಯಲ್ಲಿ ಬರುವ ‘ಗಾಳಿ’ ಯಾವುದು ಎನ್ನುವದು ಇಲ್ಲಿ ಬಯಲಾಗುತ್ತದೆ!)

ಕೊನೆಯ ನುಡಿಗೆ ಮತ್ತೊಂದು ಸಂಭಾವ್ಯತೆಯೂ ಇದೆ.

ನೀರು ತುಂಬಿಕೊಂಡ ಹೆಣ್ಣು ಮುಂದೆ ಮುಂದೆ ಸಾಗಿದ್ದರೆ, ಸರಸ ವರ್ತನೆಯ ಈ ರಸಿಕ ಗೆಣೆಕಾರ ಅವಳ ಬೆನ್ನ ಹಿಂದೆ, ಅವಳ ನೆರಳಿನಂತೆ ಒಂದೇ ಮನಸ್ಸಿನಿಂದ ಅವಳನ್ನು ಹಿಂಬಾಲಿಸಿದ್ದಾನೆ, ತನ್ನನ್ನೇ ಮರೆತಿದ್ದಾನೆ. ಸಾಕುಗಿಳಿಯು ಸಾಕಿದವರ ಸುತ್ತಲೂ ಹಾರುವಂತೆ, ಇವನ ಮನವು ಅವಳ ಸುತ್ತಲೂ ಸುತ್ತುತ್ತಿದೆ ಹಾಗು ಅವಳ ಧ್ಯಾನದಲ್ಲಿ ತನ್ನನ್ನೇ ಮರೆತಿದೆ!

ಬೇಂದ್ರೆಯವರು ತಮ್ಮ ಕವನದ ನಾಯಕಿಯ ಭಾವವಿಕಾರವನ್ನು ಬಣ್ಣಿಸುವದರಲ್ಲಿ ಹಾಗು ಈ ಭಾವವಿಕಾರವನ್ನು ಪ್ರಕೃತಿಯ ರಂಗಿನೊಡನೆ ಸಮೀಕರಿಸುವದರಲ್ಲಿ ಆಸ್ಥೆ ಹೊಂದಿರುವರೇ ಹೊರತು, ವಾಸ್ತವದ ಅಭಿಸಾರದಲ್ಲಿ ಅಲ್ಲ. ಆದುದರಿಂದ ಎರಡನೆಯ ಸಂಭಾವ್ಯತೆ ಸಾಧುವಾಗಿರಲಾರದು. ಏನೇ ಇರಲಿ, ಕಣ್ಣುಮುಚ್ಚಾಲೆಯಾಟದಂತಿರುವ ಈ ಅಭಿಸಾರವು ಅಕಾಲಿಕ ಪ್ರೀತಿಯಂತೂ ಹೌದು, ಜೊತೆಗೇ ಅಪಾತ್ರ ಪ್ರೀತಿಯೂ ಆಗಿರಬಹುದು; ನೀತಿಬಾಹ್ಯ ಪ್ರೀತಿಯೂ ಆಗಿರಬಹುದು. ಮುಖ್ಯವಾಗಿ ಇವರ ಪ್ರೀತಿಯಲ್ಲಿ ಕಾಮಭಾವ ತುಂಬಿದೆ. ಆದುದರಿಂದ ಬೇಂದ್ರೆಯವರು ‘ರಾಗರತಿಯಲ್ಲಿ ನಂಜು ಏರಿತ್ತು’ ಎಂದು ಹೇಳುತ್ತಾರೆ. ಪ್ರೇಮಭಾವನೆಯ ಬೆಳದಿಂಗಳು ಇವರಲ್ಲಿ ಇನ್ನೂ ಮೂಡಿಲ್ಲ.

೭. ಬೆಳಗು

ಮೂಡಲ ಮನೆಯಾ ಮುತ್ತಿನ ನೀರಿನ

ಎರಕsವ ಹೊಯ್ದಾ

ನುಣ್ಣ್-ನ್ನೆರಕsವ ಹೊಯ್ದಾ

ಬಾಗಿಲ ತೆರೆದೂ ಬೆಳಕು ಹರಿದೂ

ಜಗವೆಲ್ಲಾ ತೊಯ್ದಾ

ಹೋಯ್ತೋ-ಜಗವೆಲ್ಲಾತೊಯ್ದಾ

ರತ್ನದರಸದಾ ಕಾರಂಜೀಯೂ

ಪುಟಪುಟನೇ ಪುಟಿದು

ತಾನೇ-ಪುಟಪುಟನೇ ಪುಟಿದು

ಮಘಮಘಿಸುವಾ ಮುಗಿದ ಮೊಗ್ಗೀ

ಪಟಪಟನೇ ಒಡೆದು

ತಾನೇ-ಪಟಪಟನೇ ಒಡೆದು

ಎಲೆಗಳ ಮೇಲೇ ಹೂಗಳ ಒಳಗೇ

ಅಮೃತsದ ಬಿಂದು

ಕಂದವು-ಅಮೃತsದ ಬಿಂದು

ಯಾರಿರಿಸಿದವರು ಮುಗಿಲsಮೇಲಿಂ-

ದಿಲ್ಲಿಗೇ ತಂದು

ಈಗ -ಇಲ್ಲಿಗೇ ತಂದು

ತಂಗಾಳೀಯ ಕೈಯೊಳಗಿರಿಸೀ

ಎಸಳೀನಾ ಚವರೀ

ಹೂವಿನ-ಎಸಳೀನಾ ಚವರಿ

ಹಾರಿಸಿ ಬಿಟ್ಟರು ತುಂಬಿಯ ದಂಡು

ಮೈಯೆಲ್ಲಾ ಸವರಿ

ಗಂಧಾ-ಮೈಯೆಲ್ಲಾ ಸವರಿ

ಗಿಡಗಂಟೆಯಾ ಕೊರಳೊಳಗಿಂದ

ಹಕ್ಕಿಗಲಾ ಹಾಡು

ಹೊರಟಿತು-ಹಕ್ಕಿಗಳಾ ಹಾಡು

ಗಂಧರ್ವರಾ ಸೀಮೆಯಾಯಿತು

ಕಾಡಿನಾ ನಾಡು

ಕ್ಷಣದೊಳು-ಕಾಡಿನಾ ನಾಡು.

ಕಂಡಿತು ಕಣ್ಣು ಸವಿದಿತು ನಾಲಗೆ

ಪಡೆದೀತೀ ದೇಹ

ಸ್ಪರ್ಶಾ-ಪಡೆದೀತೀ ದೇಹ

ಕೇಳಿತು ಕಿವಿಯು ಮೂಸಿತು ಮೂಗು

ತನ್ಮಯವೀ ಗೇಹಾ

ದೇವರ-ದೀ ಮನಸಿನ ಗೇಹಾ

ಅರಿಯದು ಅಳವು ತಿಳಿಯದು ಮನವು

ಕಾಣsದೋ ಬಣ್ಣ

ಕಣ್ಣಿದೆ-ಕಾಣsದೋ ಬಣ್ಣ

ಶಾಂತಿರಸವೇ ಪ್ರೀತಿಯಿಂದಾ

ಮೈದೋರಿತಣ್ಣ

ಇದು ಬರಿ-ಬೆಳಗಲ್ಲೋ ಅಣ್ಣಾ

೮. ಚಳಿಯಾಕೆ

ಹೆಚ್ಚಿನ ಓದಿಗೆ:http://sallaap.blogspot.com/2011/06/blog-post.html

ಸೀಗೆ ಹುಣ್ಣಿವೆ ಮುಂದೆ

ಸೋಗಿನ ಚಂದ್ರಮ

ಸಾಗಿ ಬರುವೊಲು ಬರುವ ಚಳಿಯಾಕೆ.

ಹೊನ್ನ ಸೇವಂತಿಗೆಯ

ಹೆರಳು ಬಂಗಾರದ

ಬೆಳ್ಳಿ ಸೇವಂತಿಗೆಯ ಬಳಿಯಾಕೆ.

ಮುಗಿಲಲ್ಲಾಡುವ

ಬಾವಿಲಿ ಮಲ್ಲಿಗೆ

ಕಿವಿಗೊಪ್ಪು ಓಲೆಕೊಪ್ಪು ಚಳತುಂಬ

ಹೊಳೆಹೊಂಡದುಸಿರನ್ನೆ

ನಯವಾಗಿ ನೆಯ್ದಂಥ

ಮಂಜಿನ ಮೇಲ್ಸೆರಗು ಮೈತುಂಬ.

ಹೊಂಗಡಲು ಹೊಯ್ದಾಡಿ-

ದೊಲು ನೆಲ್ಲು ತಲೆದೂಗೆ,

ಅದರಲ್ಲಿ ಬಾ ಸುಮ್ಮನೀಸಾಡಿ.

ತೆನೆಹಾಲು ದಕ್ಕಲಿ

ಕಕ್ಕಿಸಬೇಡದನು

ನಿನ್ನ ನಂಜಿನ ಸೆರಗ ಬೀಸಾಡಿ.

ಕಣ್ಣಿಗೆ ಕಾಣದೆ

ಮೈಮುಟ್ಟಿ ತುಟಿಮುಟ್ಟಿ

ಮಿಸುಕದೆ ಮುಸುಕಿಗೆ ಹೋಗುವಾಕೆ.

ಅಡಿಗೊಮ್ಮೆ ನಡುನಡುಗಿ

ಇರುಳ ಬೆಳದಿಂಗಳಕೆ

ಬಿಳಿಮೋಡ ನಗುವಂತೆ ನಗುವಾಕೆ.

ಉಸುರುಸಿರಿಗೆ ಮರುಕ

ಹೆಜ್ಜೆಹೆಜ್ಜೆಗೆ ಬೆಡಗು

ಮೆಲ್ಲಗೆ ಮುಂಗಯ್ಯ ಹಿಡಿವಾಕೆ.

ಯಾವ ಜಾತಿಯ ಹೆಣ್ಣೊ

ಹಾವ ಭಾವವೆ ಬೇರೆ

ಅಪ್ಪಿದ ಅಪ್ಪಿಗೆ ಬಿಡದಾಕೆ.

………………………………………………………...........................................

ಈ ಕವನದ ಹಿನ್ನೆಲೆ ಹೀಗಿದೆ:

ಭಾದ್ರಪದ ಮಾಸದ ಕೊನೆಗೆ ವರ್ಷಾ ಋತು ಮುಗಿದು, ಶರತ್ ಋತುವಿನ ಮೊದಲ ಮಾಸವಾದ ಆಶ್ವೀನ ಮಾಸ ಪ್ರಾರಂಭವಾಗುತ್ತದೆ. ಮಳೆಗಾಲದ ಕಾರ್ಮೋಡಗಳು ಕರಗಿ ಹೋಗಿರುತ್ತವೆ. ಅಲ್ಲೊಂದು ಇಲ್ಲೊಂದು ಬಿಳಿಯ ಮೋಡಗಳ ತುಣುಕುಗಳು ಕಾಣುತ್ತಿರುತ್ತವೆ. ಹಗಲು ಕಡಿಮೆಯಾಗುತ್ತ, ರಾತ್ರಿಯು ದೀರ್ಘವಾಗುತ್ತಿರುತ್ತದೆ. ಮುಂಗಾರು ಪೈರಿನಲ್ಲಿ ತೆನೆಗಳು ಮೂಡಿರುತ್ತವೆ. ಕೆರೆ, ಬಾವಿಗಳು ತುಂಬಿಕೊಂಡಿರುತ್ತವೆ.

ಇದು ಎಲ್ಲರಿಗೂ ಉಲ್ಲಾಸದ ಕಾಲ. ಆದುದರಿಂದ ಈ ಮಾಸದ ಮೊದಲ ದಿನದಿಂದಲೇ ಹಬ್ಬಗಳು ಪ್ರಾರಂಭವಾಗುತ್ತವೆ. ಅಷ್ಟಮಿ ತಿಥಿಯಂದು ದುರ್ಗಾಪೂಜೆ, ಮಹಾನವಮಿಯಂದು ಬನ್ನೀಪೂಜೆ, ವಿಜಯದಶಮಿಯಂದು ಬನ್ನಿ-ಬಂಗಾರದ ವಿನಿಮಯ!

ಸೀಗೆ ಹುಣ್ಣಿವೆಯ ದಿವಸ ‘ಚರಗ’ ಚೆಲ್ಲುತ್ತಾರೆ; ಅಂದು ರಾತ್ರಿ ‘ಕೋಜಾಗರಿ’, ಅಂದರೆ ಬೆಳದಿಂಗಳ ಊಟ! ಬೇಂದ್ರೆಯವರ ಕಾಲದ ಹಳ್ಳಿಗಳಲ್ಲಿ ಹಾಗು ಅನೇಕ ಊರುಗಳಲ್ಲಿ ವಿದ್ಯುತ್ ದೀಪ ಇರುತ್ತಿರಲಿಲ್ಲ. ಕುಟುಂಬದ ಸದಸ್ಯರೆಲ್ಲ ರಾತ್ರಿಯ ಊಟವನ್ನು ಮುಗಿಸಿದ ನಂತರ, ಪ್ರಶಾಂತ ವಾತಾವರಣದಲ್ಲಿ ಮನೆಯ ಅಂಗಳದಲ್ಲಿ ಹರಟೆ ಹೊಡೆಯುತ್ತ ಕೂತುಕೊಂಡಿರುತ್ತಿದ್ದರು. ಹುಣ್ಣಿವೆಯ ಬೆಳದಿಂಗಳ ಸೊಬಗನ್ನು ಸವಿಯುತ್ತ , ಚಳಿಯಲ್ಲಿ ನಡುಗುತ್ತ, ಪ್ರಕೃತಿಯಲ್ಲಿ ಸಮರಸರಾಗಿ ಹೋಗುವ ಪರಿ ಇದು. ಇಂತಹ ಸೊಬಗನ್ನು ಬೇಂದ್ರೆಯವರು ಬಣ್ಣಿಸುವದು ಹೀಗೆ:

ಸೀಗೆ ಹುಣ್ಣಿವೆ ಮುಂದೆ

ಸೋಗಿನ ಚಂದ್ರಮ

ಸಾಗಿ ಬರುವೊಲು ಬರುವ ಚಳಿಯಾಕೆ.

ಹೊನ್ನ ಸೇವಂತಿಗೆಯ

ಹೆರಳು ಬಂಗಾರದ

ಬೆಳ್ಳಿ ಸೇವಂತಿಗೆಯ ಬಳಿಯಾಕೆ.

ಬೇಂದ್ರೆಯವರ ಕವನ ‘ಸೋಗಿನ ಚಂದ್ರಮ’ನಿಂದ ಪ್ರಾರಂಭವಾಗುತ್ತದೆ. ಏಕೆಂದರೆ ಇಡೀ ವಾತಾವರಣವೇ ಸೋಗಿನಿಂದ ತುಂಬಿದೆ. ಹರಟೆ ಹೊಡೆಯುವ ದೊಡ್ಡವರ ಸೋಗು ಒಂದು ರೀತಿಯದಾದರೆ, ಕಳ್ಳಾಟದ ಹುಡುಗರ ಸೋಗು ಒಂದು ರೀತಿಯದು. ಇದಕ್ಕೆಲ್ಲ ಪ್ರೇರಣೆ ನೀಡುವ ಚಂದ್ರನಂತೂ ಸೋಗಿನ ಪ್ರಮುಖ ಆಟಗಾರನಾಗಿದ್ದಾನೆ.

ಆಶ್ವೀನ ಮಾಸದಲ್ಲಿ ಬಿಳಿಯ ಮೋಡಗಳ ತುಣುಕುಗಳು ಅಲ್ಲಲ್ಲಿ ಸಾಗುತ್ತಿರುತ್ತವೆ. ಇವುಗಳ ನಡುವಿನ ಅಂತರದಲ್ಲಿ, ಸೀಗೆ ಹುಣ್ಣಿವೆಯ ಪೂರ್ಣಚಂದ್ರನು ಒಮ್ಮೆ ಪ್ರಕಾಶಿಸುವದು, ಒಮ್ಮೆ ಕಣ್ಮರೆಯಾಗುವದು ನಡೆದಿರುತ್ತದೆ. ಇದೇ ಚಂದ್ರನ ಕಣ್ಣುಮುಚ್ಚಾಲೆಯಾಟ ಅಂದರೆ ಸೋಗಿನಾಟ! ಬೇಂದ್ರೆಯವರ ಚಳಿಯಾಕೆಯೂ ಸಹ ಚಂದ್ರಮನ ಸೋಗಿನಾಟಕ್ಕೆ ತಕ್ಕ ಕಳ್ಳಹೆಜ್ಜೆ ಇಡುತ್ತ ಮೆಲ್ಲಮೆಲ್ಲನೆ ಎಲ್ಲವನ್ನೂ ಆವರಿಸುತ್ತಿದ್ದಾಳೆ. ಚಂದ್ರನನ್ನು ಹಾಗು ಚಳಿಯನ್ನು ಒಟ್ಟಾರೆಯಾಗಿ ನಿರೂಪಿಸುವ ವರಕವಿಯ ಕುಶಲತೆಯನ್ನು ಇಲ್ಲಿ ಕಾಣಬಹುದು. ಚಂದ್ರ, ಚಳಿಯಾಕೆ, ಪ್ರಕೃತಿ ಹಾಗು ಮಾನವರು ಇಲ್ಲಿ ಒಂದಾಗಿ ಬೆರತಿದ್ದಾರೆ.

ಪ್ರಕೃತಿಯ ಚೆಲುವನ್ನು ಆಸ್ವಾದಿಸುತ್ತ ಕುಳಿತ ಬೇಂದ್ರೆಯವರು, ಆ ಚೆಲುವನ್ನೆಲ್ಲ ತಮ್ಮ ಚಳಿಯಾಕೆಗೆ ತೊಡಿಸದೆ ಇರಲು ಸಾಧ್ಯವೆ? ವರಕವಿಯ ಕಣ್ಣಿಗೆ ಚಂದ್ರ ಹಾಗು ತಾರೆಗಳು ತಮ್ಮ ಚಳಿಯಾಕೆಯ ಆಭೂಷಣಗಳಾಗಿ ಕಾಣುತ್ತವೆ. ಅಂತಲೇ ಇವಳು ‘ಹೊನ್ನ ಸೇವಂತಿಗೆ’ ಹಾಗು ‘ಹೆರಳು ಬಂಗಾರ’ ಎನ್ನುವ ಒಡವೆಗಳನ್ನು ಧರಿಸಿದ್ದಾಳೆ. ಹೆಣ್ಣುಮಕ್ಕಳು ಹೊನ್ನ ಸೇವಂತಿಗೆಯನ್ನು ತುರುಬಿನಲ್ಲಿ ಧರಿಸುತ್ತಾರೆ ಹಾಗು ಹೆರಳು ಬಂಗಾರವನ್ನು ಜಡೆಯಲ್ಲಿ ಸಿಕ್ಕಿಸಿಕೊಳ್ಳುತ್ತಾರೆ. ಈ ಚಳಿಯಾಕೆಗೆ ನಸುಹಳದಿ ಬಣ್ಣದ ದುಂಡು ಚಂದ್ರನೇ ಹೊನ್ನಸೇವಂತಿಗೆ ಹಾಗು ಅಲ್ಲಲ್ಲಿ ಮಿನುಗುತ್ತಿರುವ ಚಿಕ್ಕೆಗಳೇ ಹೆರಳುಬಂಗಾರ. ಕೆಲವೊಮ್ಮೆ ಚಂದ್ರನ ಸುತ್ತಲೂ ಕಟ್ಟಬಹುದಾದ ‘ಕೆರೆ’ಯೇ ಇವಳ ಬೆಳ್ಳಿಸೇವಂತಿಗೆಯ ಕೈಬಳೆ!

ಇಷ್ಟಾದರೆ ಸಾಕೆ?

ಬೇಂದ್ರೆಯವರು ಚಳಿಯಾಕೆಯ ಕರ್ಣಾಭರಣಗಳ ಹಾಗು ಉಡುಗೆಯ ವರ್ಣನೆಯನ್ನು ಎರಡನೆಯ ನುಡಿಯಲ್ಲಿಯೂ ಮುಂದುವರೆಸುತ್ತಾರೆ. ಈ ರೀತಿಯಾಗಿ ಚಳಿಯ ಮಾನುಷೀಕರಣ ಮಾಡುತ್ತ, ಚಂದ್ರತಾರೆಗಳನ್ನು ಆಭರಣಗಳನ್ನಾಗಿ ಮಾಡುವದರಿಂದ, ಇವೆರಡನ್ನೂ ಒಟ್ಟಾಗಿ ವರ್ಣಿಸುವದು ಸುಲಭವಾಗುತ್ತದೆ. ಇದೊಂದು ಸಾಹಿತ್ಯಕೌಶಲ್ಯ.

ಮುಗಿಲಲ್ಲಾಡುವ

ಬಾವಿಲಿ ಮಲ್ಲಿಗೆ

ಕಿವಿಗೊಪ್ಪು ಓಲೆಕೊಪ್ಪು ಚಳತುಂಬ

ಹೊಳೆಹೊಂಡದುಸಿರನ್ನೆ

ನಯವಾಗಿ ನೆಯ್ದಂಥ

ಮಂಜಿನ ಮೇಲ್ಸೆರಗು ಮೈತುಂಬ.

ಬಿಳಿಯ ತುಂಡುಮೋಡಗಳು ಕೆಳಗೆ ಚಲಿಸುತ್ತಿದ್ದರೆ, ಚಂದ್ರ ಹಾಗು ಚಿಕ್ಕೆಗಳು ಆ ಮೋಡಗಳ ಮೇಲ್ಭಾಗದಲ್ಲಿ ಕಾಣಿಸುತ್ತವೆ. ಇದರಿಂದಾಗಿ ಆಕಾಶವು ತಲೆಕೆಳಗಾದ ‘ಬಾವಿ’ಯಂತೆ ಕಾಣುವದು! ಮೋಡಗಳ ಚಲನೆಯಿಂದಾಗಿ, ಈ ಬಾವಿ ಅಲ್ಲಾಡಿದಂತೆ ತೋರುವದು. ಈ ಅಲ್ಲಾಡುತ್ತಿರುವ ಬಾವಿಯಲ್ಲಿಯ ಮಲ್ಲಿಗೆ ಹೂವುಗಳನ್ನು ಅಂದರೆ ಚಿಕ್ಕಿಗಳನ್ನು ಧರಿಸಿದ್ದಾಳೆ ನಮ್ಮ ಚಳಿಯಾಕೆ! ಈ ಆಕಾಶಮಲ್ಲಿಗೆಗಳೆಲ್ಲ ಅವಳಿಗೆ ಓಲೆಕೊಪ್ಪು ಹಾಗು ಚಳತುಂಬ ಎನ್ನುವ ಕರ್ಣಭೂಷಣಗಳಾಗಿವೆ. ಇನ್ನು ಅವಳು ಮೈತುಂಬ ಹೊದ್ದುಕೊಂಡಂತಹ ಮೇಲ್ಸೆರಗು ಎಂತಹದು?

ತುಂಬಿತುಳುಕುತ್ತಿರುವ ಹೊಳೆ ಹಾಗು ಹೊಂಡಗಳ ನೀರು ಬಾಷ್ಪೀಭವನವಾಗುವದನ್ನು ಬೇಂದ್ರೆಯವರು ಹೊಳೆ,ಹೊಂಡಗಳ ‘ಉಸಿರು’ ಎಂದು ಬಣ್ಣಿಸುತ್ತಾರೆ. ಈ ‘ಉಸಿರ’ನ್ನೇ ನಯವಾಗಿ ನೇಯ್ದಾಗ ಅದು ಮಂಜಾಗುತ್ತದೆ. ಅದೇ ಚಳಿಯಾಕೆಯು ಹೊದ್ದುಕೊಂಡ ತೆಳ್ಳನೆಯ ಮೇಲ್ಸೆರಗು. ವಾಸ್ತವತೆಯನ್ನೇ ಚಮತ್ಕಾರದ ಕಲ್ಪನೆಯನ್ನಾಗಿ ಮಾರ್ಪಡಿಸುವ ಬೇಂದ್ರೆಪ್ರತಿಭೆಯ ಉದಾಹರಣೆ ಇದು!

ಇಲ್ಲಿ ಮತ್ತೊಂದು ಚಮತ್ಕಾರವನ್ನು ಗಮನಿಸಬೇಕು. ಚಳಿಯಾಕೆ ತೊಟ್ಟ ಆಭರಣಗಳು ಆಕಾಶದಲ್ಲಿದ್ದರೆ, ಅವಳು ಉಟ್ಟ ಉಡುಪು ಭೂಮಿಯ ಕೊಡುಗೆ. ಈ ರೀತಿಯಾಗಿ ಅವಳು ಭೂಮಿ ಹಾಗು ಆಕಾಶಗಳನ್ನು ವ್ಯಾಪಿಸಿದ್ದಾಳೆ.

ಮೂರನೆಯ ನುಡಿ ಹೀಗಿದೆ:

ಹೊಂಗಡಲು ಹೊಯ್ದಾಡಿ-

ದೊಲು ನೆಲ್ಲು ತಲೆದೂಗೆ,

ಅದರಲ್ಲಿ ಬಾ ಸುಮ್ಮನೀಸಾಡಿ.

ತೆನೆಹಾಲು ದಕ್ಕಲಿ

ಕಕ್ಕಿಸಬೇಡದನು

ನಿನ್ನ ನಂಜಿನ ಸೆರಗ ಬೀಸಾಡಿ.

ಇಂತಹ ಮಂಜಿನ ಉಡುಗೆಯನ್ನು ಉಟ್ಟ ಚಳಿಯಾಕೆ ಬಿರುಸಾಗಿ ಬಂದರೆ, ಭೂಮಿಯ ಮೇಲಿನ ಬದುಕು ಏನಾಗಬೇಡ?

ಭತ್ತದ ಪೈರು ಬೆಳೆದು ನಿಂತಿರುವ ಕಾಲವಿದು. ಸಾಲುಸಾಲಾಗಿ ಹಬ್ಬಿರುವ ಇದರ ತೆನೆಗಳು, ಬೆಳದಿಂಗಳಿನಲ್ಲಿ ಬಂಗಾರದ ಕಡಲಿನ ತೆರೆಗಳಂತೆ ಶೋಭಿಸುತ್ತವೆ. ಕಡಲ ತೆರೆಗಳು ಹೊಯ್ದಾಡಿದಂತೆ ಇವು ಗಾಳಿಗೆ ತಲೆದೂಗುತ್ತಲಿವೆ! ಭತ್ತದ ಈ ಕಡಲಿನಲ್ಲಿ ಚಳಿಯಾಕೆ ತನ್ನ ನಂಜಿನ ಸೆರಗಾದ ಮಂಜನ್ನು ಬೀಸಾಡಿದರೆ, ತೆನೆಹಾಲೆಲ್ಲ ಕಕ್ಕಿ ಹೋದೀತು. ಆದುದರಿಂದ, ‘ಈ ಹೊಂಗಡಲಿನಲ್ಲಿ ಸಾವಕಾಶವಾಗಿ ಈಜಿದಂತೆ ಬಾ’, ಎಂದು ಬೇಂದ್ರೆಯವರು ಚಳಿಯಾಕೆಯನ್ನು ಪ್ರಾರ್ಥಿಸುತ್ತಾರೆ.

(ಸೀಗೆ ಹುಣ್ಣಿವೆಯ ಹಗಲಿನಲ್ಲಿ ರೈತರೆಲ್ಲ ತಮ್ಮ ಹೊಲಗಳಲ್ಲಿ ‘ಚರಗ ಚೆಲ್ಲಿ’ ಬರುವದರ ಕಾರಣವೂ ಇದೇ ಆಗಿದೆ. ನಿಸರ್ಗದ ಚೈತನ್ಯಗಳು ಬೆಳೆದು ನಿಂತ ಪೈರನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿ, ‘ಭೂತಬಲಿ’ಯನ್ನು ನೀಡುವದರ ಸಂಕೇತವಿದು.)

ನಾಲ್ಕನೆಯ ನುಡಿ:

ಕಣ್ಣಿಗೆ ಕಾಣದೆ

ಮೈಮುಟ್ಟಿ ತುಟಿಮುಟ್ಟಿ

ಮಿಸುಕದೆ ಮುಸುಕಿಗೆ ಹೋಗುವಾಕೆ.

ಅಡಿಗೊಮ್ಮೆ ನಡುನಡುಗಿ

ಇರುಳ ಬೆಳದಿಂಗಳಕೆ

ಬಿಳಿಮೋಡ ನಗುವಂತೆ ನಗುವಾಕೆ.

ಈ ಚಳಿಯಾಕೆ ಬಲು ಚಾಲಾಕಿ ಹೆಣ್ಣು! ನಿಮ್ಮ ಕಣ್ಣಿಗೆ ಬೀಳದೆಯೆ, ನಿಮ್ಮ ಮೈ ಮುಟ್ಟುತ್ತಾಳೆ. ಆಗ ನಿಮ್ಮ ಮೈ ರೋಮಾಂಚನಗೊಳ್ಳುತ್ತದೆ. ನಿಮ್ಮ ತುಟಿಗೆ ಅವಳು ಸೋಂಕಿದರೆ, ನಿಮ್ಮ ಬಾಯಿ ‘ಅಹಹ’ ಎಂದು ನಡುಗುವದು! ತಾನು ಸ್ವಲ್ಪವೂ ಮಿಸುಕದೆ, ನಿಮಗೆ ತಿಳಿಯಲಾರದಂತೆ ನೀವು ಹೊತ್ತುಕೊಂಡ ಹೊದ್ದಿಕೆಯಲ್ಲಿ ಈ ಅದೃಶ್ಯವನಿತೆ ಸೇರಿಕೊಳ್ಳುತ್ತಾಳೆ! ನೀವು ಚಳಿಯಾಯಿತೆಂದು ನಡುಗುತ್ತ, ಕಾಲು ಮಡಚಿಕೊಂಡು ಮುದ್ದೆಯಾಗುತ್ತೀರಿ. ಆಗ ಈ ಚಳಿಯಾಕೆ ನಗುತ್ತಾಳೆ. ಅವಳ ನಗುವು ಎಷ್ಟು ಚೆಲುವಾಗಿದೆ ಎನ್ನುತ್ತೀರಾ? ಹುಣ್ಣಿವೆಯ ರಾತ್ರಿಯ ಬೆಳದಿಂಗಳನ್ನು ಹೀರಿಕೊಂಡು, ಅದನ್ನೇ ಎಲ್ಲೆಡೆ ಪ್ರತಿಫಲಿಸುವ ಬಿಳಿಮೋಡದ ನಗುವಿನಂತೆ ಈ ಚಳಿಯಾಕೆ ನಿಶ್ಶಬ್ದವಾಗಿ ನಗುತ್ತಾಳೆ. ಬೇಂದ್ರೆಯವರು ಎಂತಹ ರಮ್ಯ ಪ್ರಣಯಿನಿಯನ್ನು ಸೃಷ್ಟಿಸಿದ್ದಾರಲ್ಲವೆ!

ಐದನೆಯ ನುಡಿ:

ಉಸುರುಸಿರಿಗೆ ಮರುಕ

ಹೆಜ್ಜೆಹೆಜ್ಜೆಗೆ ಬೆಡಗು

ಮೆಲ್ಲಗೆ ಮುಂಗಯ್ಯ ಹಿಡಿವಾಕೆ.

ಯಾವ ಜಾತಿಯ ಹೆಣ್ಣೊ

ಹಾವ ಭಾವವೆ ಬೇರೆ

ಅಪ್ಪಿದ ಅಪ್ಪಿಗೆ ಬಿಡದಾಕೆ.

ಚಳಿಯಿಂದ ನಡುಗುತ್ತಿರುವ ನೀವು ಕ್ಷಿಪ್ರವಾಗಿ ಉಸಿರಾಡಿಸುವಾಗ, ಚಳಿಯಾಕೆ ನಿಮ್ಮ ಮೇಲೆ ಮರುಕ ತೋರಿ ಒಂದು ಕ್ಷಣ ಹಿಂದೆಗೆಯುತ್ತಾಳೆ. ಮರು ಉಸಿರಿನಲ್ಲಿ ಮತ್ತೆ ನಿಮ್ಮ ಬಳಿ ಸಾರಿರುತ್ತಾಳೆ. ಈ ರೀತಿಯಾಗಿ ಹಿಂದೆ ಮುಂದೆ ಹೆಜ್ಜೆ ಇಡುತ್ತ ತನ್ನ ಬೆಡಗನ್ನು ತೋರಿಸುತ್ತಲೇ, ನಿಮಗೆ ಅರಿವಾಗದಂತಲೇ, ನಿಮ್ಮ ಮುಂಗೈಯನ್ನು ಹಿಡಿದುಕೊಳ್ಳುತ್ತಾಳೆ. ಇನ್ನು ಇವಳಿಂದ ಬಿಡುಗಡೆಯನ್ನು ಪಡೆಯುವದು ಸಾಧ್ಯವಿಲ್ಲ! ಬೇಂದ್ರೆಯವರು ಈ ಸತ್ಯವನ್ನು ಈಗ ಒಪ್ಪಿಕೊಂಡು ಬಿಟ್ಟರು. ಆದುದರಿಂದ ಇವಳು ತೋರಿಸಿದ ಹಾವಭಾವಗಳಿಂದ ಚಕಿತರಾದ ಅವರು ಇವಳು ಯಾವ ಜಾತಿಯ ಹೆಣ್ಣೊ ಎಂದು ಉದ್ಗಾರ ತೆಗೆಯುತ್ತಾರೆ. ಪ್ರಣಯಕಾಮಿನಿಯರಲ್ಲಿ ‘ಪದ್ಮಿನಿ,ಚಿತ್ತಿನಿ,ಹಸ್ತಿನಿ’ ಮೊದಲಾದ ಜಾತಿಗಳಿವೆ ಎಂದು ನಮ್ಮ ಶಾಸ್ತ್ರಕಾರರು ಹೇಳಿದ್ದಾರೆ. ತನ್ನನ್ನು ಬಿಡದಂತೆ ಬಿಗಿದಪ್ಪಿಕೊಂಡ ಈ ಚಳಿಯಾಕೆ ಯಾವ ಪ್ರಕಾರಕ್ಕೆ ಸೇರಿದವಳು ಎನ್ನುವದು ಬೇಂದ್ರೆಯವರನ್ನು ಅಚ್ಚರಿಗೀಡು ಮಾಡಿದೆ!

...................................................................................

‘ಚಳಿಯಾಕೆ’ ಕವನದಲ್ಲಿ ಬೇಂದ್ರೆಯವರು ಅನೇಕ ಉಪಮೆಗಳನ್ನು ಬಳಸಿಕೊಂಡಿದ್ದಾರೆ. ಉಪಮಾನಗಳಿಗೂ ವಿಶೇಷಣಗಳನ್ನು ಜೋಡಿಸಿದ್ದು ಇಲ್ಲಿಯ ವೈಶಿಷ್ಟ್ಯ. ಹೀಗಾಗಿ ಇಲ್ಲಿಯ ಚಂದ್ರ ‘ಸೋಗಿನ ಚಂದ್ರಮ’. ಇಲ್ಲಿಯ ಮುಗಿಲು ‘ಅಲ್ಲಾಡುವ’ ಬಾವಿ. ಭತ್ತದ ತೆನೆಗಳ ಹೊಯ್ದಾಟವು ಇಲ್ಲಿ ಹೊನ್ನ ಕಡಲಿನ ತೆರೆಗಳಂತೆ ತೋರುತ್ತವೆ. ಚಳಿಯಾಕೆಯ ನಗುವೂ ಸಹ ಬೆಳದಿಂಗಳನ್ನು ಹೀರಿಕೊಂಡ ಬಿಳಿಮೋಡದ ನಗುವಿನಂತೆ ಕಾಣುತ್ತದೆ. ಪ್ರಕೃತಿಯಲ್ಲಿಯ ವಾಸ್ತವ ವಸ್ತುಗಳನ್ನು (ಚಂದ್ರ, ಚಿಕ್ಕೆಗಳು, ಹೊಳೆ ಹೊಂಡ ಇ.) ಅನುಭವಕ್ಕೆ ಮಾತ್ರ ಸಿಗುವ ವಸ್ತುವಾದ ಚಳಿಯ ಜೊತೆಗೆ ಜೋಡಿಸುತ್ತ ಬೇಂದ್ರೆಯವರು ಒಂದು ಮಾಯಾಸೃಷ್ಟಿಯ ನಿರ್ಮಾಣವನ್ನೇ ಮಾಡಿದ್ದಾರೆ. ಪ್ರಕೃತಿಯಲ್ಲಿ ಸಮರಸವಾಗುವ ಸುಖವನ್ನು ಈ ಕವನದ ಮೂಲಕ ತೋರಿಸಿದ್ದಾರೆ.

ಆಂಗ್ಲ ಕವಿ ಶೆಲ್ಲಿಯ ಕವನವೊಂದರಲ್ಲಿ ಬೆಳದಿಂಗಳಿನಲ್ಲಿ ಹಾಡು ಕೇಳುತ್ತಿರುವ ಸುಖವೊಂದನ್ನು ಇದೇ ರೀತಿಯಾಗಿ ವರ್ಣಿಸಲಾಗಿದೆ. ಆ ಕವನದ ಕೊನೆಯ ನುಡಿ ಹೀಗಿದೆ:

Sing again, with your dear voice revealing

A tone

Of some world far from ours

Where music and moonlight and feeling

Are one.