ಚಿತ್ರಕೂಟ.
೧.ನೀನೊಲಿದ ಗಳಿಗೆ.
ಹೊಕ್ಕುಳಲ್ಲಿ ಹೂಗುಟ್ಟಿ
ಬಾಯಿಗೆ ಬರದವನೆ,
ಮಕ್ಕಳ ಕಣ್ಣುಗಳಲ್ಲಿ
ಬಾಗಿಲು ತೆರೆದವನೆ.
ಬುದ್ದಿ ಸೋತು ಬಿಕ್ಕುವಾಗ.
ಹಮ್ಮು ಹಠಾತ್ತನೆ ಕರಗಿ
ಬದುಕು ಕಾದು ಉಕ್ಕುವಾಗ
ಜಲನಭಗಳ ತೆಕ್ಕೆಯಲ್ಲಿ
ದೂರ ಹೊಳೆವ ಚಿಕ್ಕೆಯಲ್ಲಿ
ನಕ್ಕು ಸುಳಿಯುವೆ.
ಆಗ ಕೂಗಿದರೆ ನಾನು
ನನ್ನ ದನಿ
ತೂಗುವ ಜೇನು, ಸಂಜೆಗೆ
ಮಾಗುವ ಬಾನು, ಹುಣ್ಣಿಮೆ
ತಾಜಮಹಲಿನ ಕಮಾನು
ಕ್ಷಣದಲ್ಲಿ ಹೊಳೆದವನು
ದಿನವಿಡೀ ಕಾಯಿಸುವೆ
ಮುಗಿಲ ಬಟ್ಟಲಿನಲ್ಲಿ ಜಲವ ತುಂಬಿಟ್ಟು
ಗಾಳಿಗೈಯಲ್ಲಿ ಅದನ್ನು
ಘಟ್ಟನೆ ಒಡೆಯುವೆ.
ಕಟ್ಟುವ ಕೆಡೆಯುವ
ಈ ಕಣ್ಣು ಮುಚ್ಚಾಲೆ
ಇನ್ನು ಸಾಕು
ನೀನೊಲಿದ ಗಳಿಗೆ
ಅನಂತತೆಗೆ ಬೆಳೆಯುವುದು ಬೇಕು.
೨.ದೀಪಗಳ ದಾರಿಯಲಿ.
ದೀಪಗಳ ದಾರಿಯಲಿ ನಡುನಡುವೆ ನೆರಳು,
ನೆರಳಿನಲಿ ಸರಿವಾಗ ಯೂವುದೋ ಬೆರಳು
ಬೆನ್ನಿನಲಿ ಹರಿದಂತೆ ಭಯಚಕಿತ ಜೀವ
ತಣ್ಣನೆಯ ಒಡಲಲ್ಲಿ ಬೆದರಿರುವ ಭಾವ.
ಆಸೆ ಕನಸುಗಳೆಲ್ಲ ತೀರಿದುವು ಕುಸಿದು,
ಭಾಷೆಗೂ ಸಿರಿದಂಥ ಭಯದ ಮಳೆ ಬೆಳೆದು,
ಕಪ್ಪು ಮೋರೆಯ ಬೇಡ ಕರಿದಾರ ಹಿಡಿದು
ಪಕ್ಕದಲಿ ಹೋದನೇ ಪ್ರಾಣಕ್ಕೆ ಮುನಿಸು?
ನಾಲಗೆಗೆ ಇರುಳ ಹನಿ ತಾಕಿತೋ ಹೇಗೆ?
ಕೊರಳ ಬಳಿ ಬಳ್ಳಿ ಸರಿದಾಡಿತೋ ಹೇಗೆ?
ನಟ್ಟಿರುಳಿನಲಿ ಯಾರೊ ಹಿಂದೆಯೇ ಬಂದು
ಥಟ್ಟನೇ ಹೆಗಲನ್ನು ಜಗ್ಗಿದರೊ ಹೇಗೆ?
ಅಯ್ಯೋ ದೇವರೆ ಎಂದು ಚೀರುವಂತಾಗಿ
ನಡುಕಗಳು ನಾಲಿಗೆಗೆ ಮೂಡದಂತಾಗಿ
ಬಿಚ್ಚುತಿರೆ ದೂರದಲಿ ಮತ್ತೆ ದೀಪಗಳು,
ಬೆಚ್ಚನೆಯ ಬೆಳಕಿನಲಿ ಮತ್ತೆ ಕನಸುಗಳು.
೩.ನಡುನೀರಿನಲ್ಲಿ.
ದೀಪ ಹಚ್ಚಿ
ಹೃದಯ ಬಿಚ್ಚಿ
ದೈವದ ಪಾದಕ್ಕೆ ಹಣೆ ಹಣೆ ಚಚ್ಚಿ ಬೇಡಿದೆವು ಅಂದು:
ಇವಗೊದಗಲಿ ಹಿರಿತನ
ಮೇಲೇಳಲಿ ಮನೆತನ
ಮೈ ತುಂಬಲಿ ಕ್ಷೀಣಿಸಿದ ಮನೆಭಾಗ್ಯ ಎಂದು.
* * * * *
ನೀ ಬಂದೆ
ನಮ್ಮ ನಡುವೆ ನಿಂದೆ
ಏನೇನೋ ನಿರೀಕ್ಷೆ ತಂದೆ.
ನೀ ನಿಂತ ನೆಲ ಬೆಳೆ ಚಿಮ್ಮುವ ಹೊಲವಾಗಿ
ನೀ ಸೋಕಿದ ಮರಕ್ಕೆ ಮೈತುಂಬ ಫಲವಾಗಿ
ಬತ್ತಿದ ಜಲಗಳೆಲ್ಲ ಮತ್ತೆ ಕಾಣಿಸಿಕೊಂಡು
ಬಣ್ಣದ ಚಿತ್ತಾರವಾದೀತು ಬೋಳು ಬದುಕು ಎಂದು
ತುದಿಗಾಲಿನಲಿ ನಿಂತು ಎರಡು ಬದಿಗೆ
ಕಾದೆವು ದಿನಾ ಅಂಥ ಸಿರಿಗಳಿಗೆಗೆ.
* * * * *
ಹರಿದ ಕಾಗದದಂಥ ಬಿಳಿ ಮುಗಿಲು ಚೂರು
ಎಲ್ಲೊ ಐದಾರು ಬಾನಿನಲ್ಲಿ
ಯಾವಾಗ ಆದುವೋ ಕರಿಯ ಕಂಬಳಿ ಚೂರು
ನೂರು ಸಾವಿರ ಈಗ ಮಾಯದಲ್ಲಿ.
ಎಲ್ಲ ಒಂದಕ್ಕೊಂದು ಸೇರಿಕೊಂಡು
ದಟ್ಟವಾಗಿ, ನೀರ ಬೆಟ್ಟವಾಗಿ
ಸಾಗಿಬಂದವು ಮಾರಿಗಾಲಲ್ಲಿ ಜೋರಲ್ಲಿ
ಕಾಳವರ್ಷಿಣಿ ಕೂಗು ಹಾಕಿಕೊಂಡು.
ಬೆನ್ನ ಚಪ್ಪರಸಿ ಛೂ ಬಿಟ್ಟಿತೆಲ್ಲಿಂದಲೋ
ಮೇಲೆದ್ದು ಬಂದ ಮನೆಮುರುಕ ಗಾಳಿ
ಬಂತು ಬಂತೋ ಬಂತು ನಗುವ ನೆಲೆದೆದೆಗೆ
ಪ್ರಳಯ ಕಾಲದ ಮೊದಲ ಕಂತು ಎನುವಂತೆ
ಜಲದ ದಾಳಿ!
* * * * *
ಹಿಂದೆ ಇಷ್ಟಾದರೂ ಹರಿಸಿದ್ದ ನೆಲವೆ ಇದು?
ಕಾಲಿಟ್ಟ ಕಡೆಯೆಲ್ಲ ಕೆಸರು,
ಹರಿದ ಛಾವಣಿ ಮುರಿದುಬಿದ್ದ ಗಿಡಗಂಟಿ
ಒಡೆದ ಸೂರು.
ಬೀದಿ ಮನೆ ಅಂಗಡಿ ಚರಂಡಿ ಡ್ರೈನೇಜುಗಳ
ಒಂದುಗೂಡಿಸಿ ನಿಂತ ಹೊಲಸು ನೀರು.