ಕೃ.ವಿ.ವಿ.ಧಾರವಾಡ
ಸ್ನೇಹತಂಡ
ವಿವರಣೆ:-“ಚೈತನ್ಯ ಉಳ್ಳವರಿಗೆ ಜೀವನದ ಭಯವಿಲ್ಲ" ಎಂಬ ಧ್ಯೋಯೋದ್ದೇಶದಿಂದ ಪಾರಂಭವಾದ ಸ್ನೇಹತಂಡವು ಸತತವಾಗಿ ೧೫ ವರ್ಷಗಳಿಂದ ರೈತರಿಗೆ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತ ಮುಂದುವರಿಯುತ್ತಿದೆ. ಈ ಸ್ನೇಹತಂಡವು ಸ್ವಯಂ ಪ್ರೇರಿತ ವಿದ್ಯಾರ್ಥಿಗಳಿಂದ ಕೂಡಿದ್ದು, ಕಡಿಮೆ ಖರ್ಚಿನ ತಂತ್ರಜ್ಞಾನವನ್ನು ರೈತರಿಗೆ ಮುಟ್ಟಿಸುವಲ್ಲಿ ಸಫಲವಾಗಿದೆ. ಪ್ರತಿ ವರ್ಷ ವಿಶ್ವವಿದ್ಯಾಲಯ ಆಯೋಜಿಸುವ ಕೃಷಿಮೇಳದಲ್ಲಿ ಸ್ನೇಹತಂಡವು ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ.
ಹಿನ್ನೆಲೆ:- ೨೦೦೪ ರಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಒಂದು ತಂಡವು ಶನಿ ತಂಡ ಎಂಬ ಹೆಸರಿನಲ್ಲಿ ಪ್ರಶಂಸನೀಯವಾಗಿ ಸೇವೆ ಸಲ್ಲಿಸಿತ್ತು. ಇದನ್ನು ಮುಂದುವರೆಸುವ ಸದುದ್ದೇಶವನಿಟ್ಟುಕೊಂಡು ಈ ತಂಡವು ಕೃಷಿ ವಿಶ್ವವಿದ್ಯಾಲಯದಿಂದ ಆಯೋಜಿಸಲ್ಪಡುವ, ಕೃಷಿ ಮೇಳದಲ್ಲಿ ಪಾಲ್ಗೊಳ್ಳುವುದರ ಮೂಲಕ ರೈತರ ಸೇವೆಯಡೆಗೆ ತನ್ನ ಮೊದಲ ಹೆಜ್ಜೆಯನ್ನಿಟ್ಟಿತು. ಈ ರೀತಿಯಾಗಿ ಬೆಳೆದು ಬಂದ ಈ ಸ್ನೇಹ ತಂಡವು ಪ್ರತಿ ವರ್ಷ ತನ್ನ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ.
ಆರಂಭದಲ್ಲಿ ಶನಿ ತಂಡದ ಸದಸ್ಯರಾದ ದಿ. ರಮೇಶ ಪವಾರ್ ಮತ್ತು ಶ್ರೀಯುತ ಉಲ್ಲಾಸ್ ಕುಮಾರ ಅವರು ಅಂದಿನ ಕೃಷಿ ಮಹಾವಿದ್ಯಾಲಯದ ಡೀನ್ ಆಗಿದ್ದ ಡಾ.ಮಹಾದೇವ ಬಿ.ಚೆಟ್ಟಿ ಯವರಲ್ಲಿ ಈ ಸ್ವಯಂ ಸೇವೆಯ ಇಚ್ಛೆಯನ್ನು ವ್ಯಕ್ತಪಡಿಸಿದರು. ಈ ಕೋರಿಕೆಗೆ ಸಮ್ಮತಿಸಿದ ಅವರು ಸ್ನೇಹತಂಡವನ್ನು ನೀರೆರೆದು ಪೋಷಿಸಿ ಬೆಳೆಸಿದರು. ಇಂದು ಈ ಸ್ನೇಹ ತಂಡವು ಹೆಮ್ಮರವಾಗಿ ಬೆಳೆಯುತ್ತಿದ್ದು... ಅನೇಕ ಚಟುವಟಿಕೆಗಳಲ್ಲಿ ಕಾರ್ಯೋನ್ಮುಕವಾಗಿದೆ.
ಇದು ತಂಡದ ಸದಸ್ಯರಲ್ಲಿ ಕೌಶಲ್ಯತೆ, ಕ್ರಿಯಾಶೀಲತೆ, ಸಮಯ ಪ್ರಜ್ಞೆ ಶಿಸ್ತು ಹಾಗೂ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುವುದರ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಮುಖ್ಯ ಪಾತ್ರವಹಿಸಿದೆ. ಕೃಷಿ ಮೇಳವಲ್ಲದೇ ಶಿಕ್ಷಣ ಮತ್ತು ಶಿಕ್ಷಣೇತರ ಚಟುವಟಿಕೆಗಳಾದ ಚಿತ್ರಕಲಾ ಪ್ರದರ್ಶನ, ಪ್ರಗತಿಪರ ರೈತರೊಂದಿಗೆ ಸಂವಹನೆ, ರಸಪ್ರಶ್ನೆ ಕಾರ್ಯಕ್ರಮ, ಚರ್ಚಾ ಸ್ಪರ್ಧೆ ಮತ್ತು ರೇಡಿಯೋ ಚರ್ಚೆಯನ್ನು ಆಯೋಜಿಸುತ್ತದೆ.