ಪ್ರಗತಿಪರ ರೈತರ ಭೇಟಿ (PROGRESSIVE FARMER FIELD VISIT)
ಕೃಷಿ ಅಭಿವೃದ್ಧಿಯಲ್ಲಿ ರೈತರು ಮತ್ತು ಕೃಷಿ ವಿಶ್ವವಿದ್ಯಾಲಯಗಳ ನಡುವಿನ ಸಂಬಂಧ ಅತಿ ಮುಖ್ಯವಾಗಿದೆ. ಈ ನಿಕಟ ಸಂಬಂಧವು ಕೃಷಿ ಏಳಿಗೆಗೆ ಪೂರಕವಾಗಿದ್ದು ಇದನ್ನೂ ವೃದ್ಧಿಸುವಲ್ಲಿ ಸ್ನೇಹತಂಡವು ಹಲವಾರು ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಹಮ್ಮಿಕೊಳ್ಳುತ್ತಾ ಬಿಡುವಿನ ಸಮಯದಲ್ಲಿ ಹಾಗೂ ರಜೆಯ ದಿನಗಳಲ್ಲಿ ಹಳ್ಳಿಗಳಿಗೆ ತೆರಳುವ ಸ್ನೇಹ ತಂಡದ ಸದಸ್ಯರು ಪ್ರಗತಿಪರ ರೈತರು ಹಾಗೂ ಇತರ ಸಣ್ಣ ಹಿಡುವಳಿದಾರರ ತೋಟ ಗದ್ದೆಗಳಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಅದರೊಂದಿಗೆ ರೈತರು ತಾವೇ ಸ್ವಂತ ಕಂಡುಕೊಂಡ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮತ್ತು ವಿಶ್ವವಿದ್ಯಾಲಯದ ನೂತನ ತಾಂತ್ರಿಕತೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಾರೆ. ತಾವು ಕಲೆ ಹಾಕಿದ ಕೃಷಿ ತಂತ್ರಜ್ಞಾನಗಳನ್ನು ಇನ್ನಷ್ಟು ಉನ್ನತೀಕರಿಸಿ ಕೃಷಿ ಮೇಳದಲ್ಲಿ ನೈಜ ಪ್ರಾತ್ಯಕ್ಷಿಕೆ ಮಾಡುವುದು ಸ್ನೇಹ ತಂಡದ ಸಂಪ್ರದಾಯ.
ಸ್ನೇಹ ತಂಡದ ಪ್ರಾರಂಭದಿಂದಲೂ ರೈತರ ಹಾಗೂ ತಂಡದ ಸಂಪರ್ಕ ಅನ್ಯೋನ್ಯವಾಗಿದ್ದು ರೈತರ ಜ್ಞಾನ ದಾಸೋಹಕ್ಕೆ ಸ್ನೇಹ ತಂಡವು ತನ್ನ ಕೈಲಾದ ಮಟ್ಟಿನ ಅಳಿಲು ಸೇವೆ ಮಾಡುತ್ತಾ ಬಂದಿದೆ. ಧಾರವಾಡ, ಬೆಳಗಾವಿ, ಕೊಪ್ಪಳ, ಗದಗ ಸೇರಿದಂತೆ ಇನ್ನು ಹಲವಾರು ಜಿಲ್ಲೆಗಳ ರೈತರೊಂದಿಗೆ ನೇರ ಸಂಪರ್ಕ ಹೊಂದಿರುವ ಸ್ನೇಹತಂಡದ ಸದಸ್ಯರು ರೈತರಿಗೆ ನೆರವಾಗುವ ಮೂಲಕ ಇತರರಿಗಿಂತ ಭಿನ್ನವಾಗಿ ನಿಲ್ಲುತ್ತಾರೆಂದರೆ ಅತಿಶಯೋಕ್ತಿ ಎನಿಸದು.