ಕೃಷಿ ಮೇಳ (KRISHIMELA)
ಕೃಷಿ ವಿಶ್ವವಿದ್ಯಾಲಯ ಧಾರವಾಡವು ಪ್ರತಿ ವರ್ಷ ನಡೆಸಿಕೊಂಡು ಬಂದಿರುವ ಪ್ರಮುಖ ಚಟುವಟಿಕೆಗಳಲ್ಲಿ ಕೃಷಿ ಮೇಳವೂ ಒಂದು. ಲಕ್ಷಾಂತರ ರೈತರು, ವಿಜ್ಞಾನಿಗಳು, ಜನಸಾಮಾನ್ಯರೂ ಹಾಗೂ ವಿವಿಧ ರಾಜ್ಯಗಳಿಂದಲು ಆಗಮಿಸಿ ಈ ಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ಕೃಷಿ ವಿಶ್ವವಿದ್ಯಾಲಯದಲ್ಲಿ ರೈತರಿಗಾಗಿ ತನ್ನದೇ ಆದ ಹೊಸದಾದ ಛಾಪು ಮೂಡಿಸುತ್ತಿರುವ ಸ್ನೇಹತಂಡವೂ ವಿಶ್ವವಿದ್ಯಾಲಯದ ಪ್ರಮುಖ ಚಟುವಟಿಕೆಯಾದ ಕೃಷಿಮೇಳದಲ್ಲಿ ಪಾಲ್ಗೊಂಡು ರೈತಬಾಂಧವರಿಗೆ ಕಡಿಮೆ ಖರ್ಚಿನ ತಂತ್ರಜ್ಞಾನ ಕೊಟ್ಟು ಅಳಿಲು ಸೇವೆಯನ್ನು ಮಾಡುತ್ತಿದೆ.
ಆರಂಭದ ದಿನಗಳಲ್ಲಿ ಅನೇಕ ಏಳು-ಬೀಳುಗಳನ್ನು ಕಂಡ ಸ್ನೇಹ ತಂಡವು ತನ್ನ ದೃಢಸಂಕಲ್ಪ ಹಾಗೂ ಮುಖ್ಯ ಸಲಹೆಗಾರರಾಗಿದ್ದ ಹಾಗೂ ಇಂದಿನ ಕುಲಪತಿಗಳಾಗಿರುವ ಮತ್ತು ಮಾರ್ಗದರ್ಶಿಯಾಗಿರುವ ಡಾ.ಮಹಾದೇವ ಬಿ ಚಿಟ್ಟಿ ಅವರ ಸಹಾಯ ಹಸ್ತದಿಂದ ೨೦೦೪ ರ ಕೃಷಿ ಮೇಳದಲ್ಲಿ ಮೊದಲ ಬಾರಿಗೆ ಭಾಗವಹಿಸಿತು. ನಂತರ ಅವರ ಸತತ ಸಹಕಾರದಿಂದ ಪ್ರತಿವರ್ಷವೂ ಕೃಷಿ ಮೇಳದಲ್ಲಿ ಪಾಲ್ಗೊಳ್ಳುತ್ತಿದೆ.
ಸ್ನೇಹ ತಂಡವು ಕಡಿಮೆ ಖರ್ಚಿನ ತಾಂತ್ರಿಕತೆಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ರೈತರಿಗೆ ಅತ್ಯಲ್ಪ ದರದಲ್ಲಿ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಸತತ ೧೫ ವರ್ಷಗಳಿಂದ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಬಂದಿರುವ ಸ್ನೇಹ ತಂಡವು, ಕೃಷಿ ಮೇಳಕ್ಕಾಗಿ, ತಂಡದ ಹಿರಿಯ ಮತ್ತು ಕಿರಿಯ ಸದಸ್ಯರೆಲ್ಲರೂ ಸೇರಿ ಕಡಿಮೆ ಖರ್ಚಿನ ರೈತ
ಸ್ನೇಹಿ ತಾಂತ್ರಿಕತೆಗಳನ್ನು ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಮಾರ್ಗದರ್ಶನದೊಂದಿಗೆ ತಯಾರಿಸಿ ಅವುಗಳನ್ನು ಕೃಷಿಮೇಳದ ಮಳಿಗೆಗಳಲ್ಲಿ ಪ್ರದರ್ಶಿಸುತ್ತಾರೆ.
ಉದಾ : ಶೇಂಗಾ ಬಿಡಿಸುವ ಯಂತ್ರ, ಗೊಬ್ಬರ ಹಾಕುವ ಸುಲಭ ಸಾಧನ, ಕಡಿಮೆ ವೆಚ್ಚದ ಕಳೆ ಕತ್ತರಿಸುವ ಯಂತ್ರ, ಕಡಿಮೆ ಖರ್ಚಿನ ನೀರೆತ್ತುವ ಯಂತ್ರ, ಹಕ್ಕಿ ಬೆದರಿಸುವ ಯಂತ್ರ, ಸಮಗ್ರ ಕೃಷಿ ಪದ್ಧತಿ ಇತ್ಯಾದಿ. ಇಂತಹ ತಾಂತ್ರಿಕತೆಗಳು ತುಂಬಾ ಜನಪ್ರಿಯವಾಗಿವೆ.