ಶಿಕ್ಷಕರ ದಿನಾಚರಣೆ (TEACHERS DAY)
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂಬ ಹಿರಿಯರ ಮಾತಿನಂತೆ, ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಒಬ್ಬ ಗುರು ಬೇಕೆ ಬೇಕು. ಜಗತ್ತಿನಲ್ಲಿ ಅಮ್ಮನ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲವರು ಶಿಕ್ಷಕರು ಮಾತ್ರ. ವಿದ್ಯೆ, ಜ್ಞಾನ ಮಾಹಿತಿ ಪಡೆಯುವುದು ಈಗ ಸುಲಭವಾದರೂ, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿ ಹೇಳಲು ಒಬ್ಬ ಗುರುವಿನ ಅವಶ್ಯಕತೆ ಇದ್ದೆ ಇರುತ್ತದೆ. ಸರಳತೆ, ತಾಳ್ಮೆ, ನಮ್ರತೆಯ ಪ್ರತಿರೂಪವಾಗಿ ಎಲ್ಲ ಶಿಕ್ಷಕರನ್ನು ನಾವು ಕಾಣುತ್ತೇವೆ. ಶಿಕ್ಷಕರೇ ನಿಜವಾದ ಅನುಕರಣೀಯ ವ್ಯಕ್ತಿಗಳು, ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿ ಸಲಹೆ ಮಾರ್ಗವನ್ನು ತೋರುವವರು ಅವರೇ. ಈ ನಿಟ್ಟಿನಲ್ಲಿ ಸ್ನೇಹ ತಂಡವು ಶಿಕ್ಷಕರ ದಿನಾಚರಣೆಯ ದಿನದಂದು ಸ್ನೇಹ ತಂಡದ ಸದಸ್ಯರೆಲ್ಲರೂ ಸೇರಿ ಕಾಲೇಜಿನ ಎಲ್ಲಾ ಶಿಕ್ಷಕರಿಗೆ ಹೂಗುಚ್ಛ ಕೊಟ್ಟು ಶುಭಕೋರುತ್ತಾರೆ. ಪ್ರತಿ ವರ್ಷವು ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಜೊತೆಗೆ ಉತ್ಸಾಹದಿಂದ ತಾವೇ ತಮ್ಮ ಕೈಯಾರ ಭಕ್ತಿಯಿಂದ ತಯಾರಿಸಿದ ಶುಭಾಶಯ ಪತ್ರ ಹಾಗೂ ಸವಿನೆನಪಿನ ಕಾಣಿಕೆಯನ್ನು ಕೊಟ್ಟು ಗೌರವಿಸುತ್ತಾರೆ.
ಶಿಕ್ಷಕರು ಹಾಗೂ ಸ್ನೇಹ ತಂಡದ ಸದಸ್ಯರ ಸಂಬಂಧ ಹಿಂದಿನಿಂದಲೂ ಅನ್ಯೋನ್ಯವಾಗಿ ಬೆಳೆದುಕೊಂಡು ಬಂದಿದೆ. ಶಿಕ್ಷಕ ವೃಂದವು ಸ್ನೇಹ ತಂಡದ ಆಧಾರಸ್ತಂಭವೆಂದರೆ ತಪ್ಪಾಗಲಾರದು. ತಂಡದ ಪ್ರತಿಯೊಂದು ಕಾರ್ಯ ಚಟುವಟಿಕೆಗಳಲ್ಲಿ ಶಿಕ್ಷಕರು ಮಾರ್ಗದರ್ಶಿಗಳಾಗಿದ್ದಾರೆ.