ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನೆ ಸಂಸ್ಥೆ (ಕೆ.ಎಸ್.ಆರ್.ಎಲ್.ಪಿ.ಎಸ್) ಔಪಚಾರಿಕವಾಗಿ ರಾಜ್ಯದಲ್ಲಿ ದಿನಾಂಕ: 02-12-2011 ರಲ್ಲಿ ಪ್ರಾರಂಭಗೊಂಡಿದ್ದು, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಮುಖ ಕಾರ್ಯಕ್ರಮವಾದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಮ್) ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಟಾನ ಮಾಡುವ ಗುರಿಯನ್ನು ಹೊಂದಿದೆ.
ಈ ಸಂಸ್ಥೆಯು 1960 ರ ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯಿದೆಯಡಿ ನೊಂದಾಯಿಸಲ್ಪಟ್ಟ ಸರ್ಕಾರಿ ಸ್ವಾಯತ್ತ ಸಂಸ್ಥೆಯಾಗಿದೆ. ಪ್ರಸ್ತುತ ಸದರಿ ಸಂಸ್ಥೆಯು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉಧ್ಯಮಶೀಲತೆ ಮಾತ್ತು ಜೀವನೋಪಾಯ ಇಲಾಖೆಯ ವ್ಯಾಪ್ತಿಯಡಿ ಕಾರ್ಯನಿರ್ವಹಿಸುತ್ತಿದೆ.
ಈ ಸಂಸ್ಥೆಯು ಕಳೆದ ಒಂದು ದಶಕದಿಂದ ರಾಜ್ಯದಲ್ಲಿ ಗ್ರಾಮೀಣ ಬಡ ಮತ್ತು ದುರ್ಬಲ ವರ್ಗದ ಮಹಿಳೆಯರಿಗೆ ಸ್ವಸಹಾಯ ಗುಂಪುಗಳು, ವಾರ್ಡ್, ಗ್ರಾಮ ಮತ್ತು ತಾಲ್ಲೂಕು ಪಂಚಾಯಿತಿ ಮಟ್ಟದ ಒಕ್ಕೂಟಗಳು, ವಿವಿಧ ಉತ್ಪಾದಕರ ಗುಂಪುಗಳಂತಹ ಸಮುದಾಯ ಆಧಾರಿತ ಸಂಸ್ಥೆಗಳನ್ನು ರಚಿಸಿಸುವ ಮೂಲಕ ಗಮನಾರ್ಹ ಸಾಧನೆಗಳನ್ನು ಮಾಡಿದೆ. ಈವರೆಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್. ಎಮ್) ಕಾರ್ಯಕ್ರಮದಡಿ ೨೮ ಲಕ್ಷಕ್ಕೂ ಅಧಿಕ ಗ್ರಾಮೀಣ ಮಹಿಳೆಯರನ್ನು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ವ್ಯಾಪ್ತಿಗೆ ಒಳಪಡಿಸಿ ಅವರುಗಳ ಸಮಗ್ರ ಏಳಿಗೆಗೆ ಶ್ರಮಿಸುತ್ತಿದೆ.
ಈ ವರೆಗೆ ರಾಜ್ಯದಲ್ಲಿ 50000 ಕ್ಕೂ ಅಧಿಕ ಬಡ ಮಹಿಳೆಯರು ಕಿರು ಮತ್ತು ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಿ, ಈ ಮೂಲಕ ವಿವಿಧ ರೀತಿಯ ಉತ್ಪನ್ನಗಳು ಮತ್ತು ಸೇವಾ ರಂಗದಲ್ಲಿ ತೊಡಗಿಸಿಕೊಳ್ಳುವಂತೆ ಹಾಗೂ ಕೃಷಿ ಆಧಾರಿತ ಗ್ರಾಮೀಣ ಬಡ ಮಹಿಳೆಯರಿಗಾಗಿ ವಿವಿಧ ರೀತಿಯ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದು, ಅವರುಗಳ ಅಭಿವೃದ್ಧಿಗಾಗಿ ಉತ್ಪಾದಕರ ಗುಂಪುಗಳನ್ನು ರಚಿಸಲಾಗಿದೆ.