೧.ಉದಯಾನುಭವ. ಹತ್ತು ರಂಗಿನಪೂರ್ವ ಸಭೆ ಪೂರ್ವ ದಿಕ್ಕಿನಲಿ
ಸಭಿಕರೇ ಕಣ್ಣುಗಳು : ಭಾವ ಚಪ್ಪಾಳೆ. ನಸು ನೀಲಿ ಹಾಳೆಗಳ ಕೆಂಬರಹದಡಿಯಲ್ಲಿ ಬಂಗಾರ ಶಾಯಿಯಲಿ ಸಹಿಯ ಮಾಲೆ.
ಎಂಟಾದರೂ ದಿನವು ನಿದ್ದೆ ನಂಟನು ಬಿಡದೆ ನಾಟಿನಂತಲುಗದೆಯೆ ಇದ್ದೆ ಹೊದ್ದು. ಇಂದಕಸ್ಮಾತ್ತಾಗಿ ಬೆಳಗೆದ್ದು ನೋಡಿದರೆ ದೇವರ್ಏ, ಏನೆಂಥ ಕಣ್ಣ ಮುದ್ದು.
ನಾ ಹೊದ್ದು ಬಿದ್ದಿದ್ದ ಬೆಚ್ಚೆನೆಯ ಈ ರಗ್ಗು ಕಣ್ಣ ಮುಂದೆಳೆದಿರುವ ತೆರೆಯಂತಿದೆ. ತೆರೆಯ ಈ ಕಡೆ ಮನಸು. ತೆರೆಯ ಆ ಕಡೆ ಪುನ್ಯ-- ಭೇಟಿಯಾಗದೆ ಸೊರಗಿತೆಂದೆನಿಸಿದೆ.
ಭಾಗ್ಯವಿರಬೇಕಹಹ, ಉದಯದನುಭವ ಗಳಿಗೆ, ಎಲ್ಲರಿಗು ದೊರೆಕೊಳ್ಳದಿಂಥ ಸ್ವತ್ತು. ಎನೆಷ್ಟು ಉಅಪಮೆಯಗಳ ವೆಚ್ಚ ಮಾಡಿದರೆನು, ಮೂಕನುಗೆ ತಿಳಿಯುವುದೆ ನುಡಿಯ ಗತ್ತು?
೨.ಎಲ್ಲ ಮರೆತಿರುವಾಗ. ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನಿನಪೇ; ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ ರಾಡಿಗೊಳಿಸುವೆ ಏಕೆ, ಮಧುರ ನೆನಪೇ?
ಕಪ್ಪು ಕಣ್ಣೆನ ನೆಟ್ಟ ನೋಟದರೆಚಣವನ್ನೆ ತೊಟ್ಟು ಬಾಣದ ಹಾಗೆ ಬಾರದಿರು ನೆನಪೇ; ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೆ ಹಿರಿದು ಕೊಲ್ಲುಬಳಿಗೆ ಸಾರದಿರು ನೆನಪೇ. ಎಲ್ಲ ಮರೆತಿರುವಾಗ....
ಸತ್ತ ಭೂತವನೆತ್ತಿ ಹದ್ದಿನಂದದಿ ತಂದು ನನ್ನ ಮನದಂಗಳಕೆ ಹಾಕದಿರು ನೆನಪೇ; ಭವ್ಯ ಭವಿತವ್ಯಕ್ಕೆ ಮೊಗ ಮಡಿ ನಿಂತಿರುವೆ, ಬೆನ್ನಲ್ಲೆ ಇರಿಯದಿರು, ಓ! ಚೆನ್ನ ನೆನಪೇ, ಎಲ್ಲ ಮರೆತಿರುವಾಗ.....
೩.ಎಂಥೆಂಥ ಜೀವಗಳು. ಎಂಥೆಂಥ ಜೀವಗಳು ಬಾಳಿ ಬೆಳಗಿದವಿಲ್ಲಿ ಶ್ರೀಗಂಧ ಬೆಳೆವಂಥ ನಾಡಿನಲ್ಲಿ; ಹೊನ್ನಂಥ ಭಾವಗಳು ಆಳಿ ಮೊಳಗಿದವಿಲ್ಲಿ ಸಿರಿವಂತ ನೆಲದೊಡಲ ಹಾಡಿನಲ್ಲಿ.
ಮಣ್ಣ ಹುಡಿ, ಹಣ್ಣು ಮಿದಿ, ಹುಲ್ಲೆಸಳೊ, ಮಳೆ ಬಿಸಿಲೊ ಸಮನಾದ ಪ್ರೀತಿಯಲಿ ಹಾಡಿ ಹೊಗಳಿ ಕಣ್ನು ಕುಡಿ ಎಂದೆಣಿಸಿ ನಾಡು- ನುಡಿ ಗಣಿಸಿ ಎತ್ತಿ ಕುಣಿಸಿದರೊಲ್ಮೆ ಕೆಚ್ಚು ಕೆರಳಿ.
ಹುಟ್ಟಿದಾರಭ್ಯ ಹಿಡಿದೊಂದು ಹೆಗ್ಗುರಿಯ ಮುಟ್ಟಲದನೆಡೆಬಿಡದೆ ತುಯ್ದು ಜನರು; ಕ್ರೌರ್ಯಗಳ ಕುದುಗೋಲು ಕೊಚ್ಚುತಿದ್ದ್ರು ಕೊರಳ ಸತ್ಯಕಲ್ಲದೆ ಬಾಯಿ ಬಿಡದ ಘನರು.
೪.ನಿನ್ನ ಹಿರಿಮೆ. ನಿನ್ನ ಅನುರಾಗವೇ ಬೇಗಿರುವುದೆನ್ನೆದೆಯ ಇರುಳು ಬಾನಿನ ತುಂಬ ಬಿಂಬವಾಗಿ; ನಿನ್ನ ಸಹವಾಸವೇ ಸತತವೂ ಕಾದಿಹುದು ಬಾಳ ದಾರಿಯ ತೋರುಗಂಬವಾಗಿ.
ನಿಟ್ಟುಸಿರ ಬೆಂಕಿಯಲಿ ಅನುದಿನವು ಬೆಂದರೊ ಸವಿ ನುಡಿಯ ನರುಗಂಪು ತೇಲಿರುವುದು; ಕಂಬನಿಯ ಉಪ್ಪಿನಲಿ ಕೈ ತೊಳೆದು ನೊಂದರೂ ನಸು ನಗೆಯ ಸವಿಯನ್ನೆ ಸೂಸಿರುವುದು.
ಯಾವ ಪುಣ್ಯವೊ ಕಾಣೆ, ನಿನ್ನ ಒಲವಿನ ತೊರೆಗೆ ನನ್ನ ಮನಸಿನ ನೆರೆಯ ಹರಿಸಿರುವುದು; ಯಾವ ರುಣವೋ ಏನೊ ನಿನ್ನ ನೆಮ್ಮದಿ ಕರೆಗೆ ನನ್ನ ಬಾಳಿನ ಹೊರೆಯ ಸರಿಸಿರುವುದು.
೫.ಬೇಸರಾಗಿದೆ ಮಾತು. ಬೇಸರಾಗಿದೆ ಮಾತು, ಭಾರವಾಗಿದೆ ಮೌನ; ನೋವು ಕರಗಿದೆ ಕಣ್ಣಲ್ಲಿ; ಅಡಿಗೆ ಚುಚ್ಚಿದ ಮುಳ್ಳು ಒಳಗದೆ ಮುರಿಯದಂತೆ ಭಾವ ಕುಟುಕಿದೆ ಮನದಲಿ.
ಮುರಿದ ಪ್ರೀತಿಯ ಮರೆಯೆ ಬಾಳಿನೊಳ ಹೊಕ್ಕಿರಲು ಸಾವ ಭಯ ತಾನೆರಗಿತೊ. ಮಯೆಗೆ ಆಸೆರೆ ಪಡೆಯೆ ಹಾವ ಹೆಡೆಯಲಿ ನಿಂತ ಹಕ್ಕಿಯಂದದಿ ಚೀರಿತೊ.
ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ ಕನಸುವಂತೆಯೆ ಮೊಳಕೆಗೆ; ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ ಹೊಸತು ಬದುಕಿನ ಬಳಕೆಗೆ.
ಯಾವ ಕಾಡಿನ ಮರೆಯ ಮರದ ಕೊಂಬೆಯನರಸಿ ಜೀವ ರೆಕ್ಕೆಯ ಬಿಚ್ಚಿತೊ; ಯಾವ ಗವಿಗತ್ತಲಿನ ಮೌನ ಭಾರವ ಕನಸಿ ಇದ್ದ ಹಕ್ಕೆಯ ಬಿಟ್ಟಿತೊ.
೬.ದೀಪಾರತಿ. ನೀನುರಿಸಿದ ಹೊಂಬೆಳಕಿನ ಕಿಡಿ ಅರಳಿದೆ ಇಲ್ಲಿ, ಕುಡಿ ಚಾಚಿದೆ ಇಲ್ಲಿ.
ನೀ ಸುರಿಸಿದ ರಸ ತೈಲದ ಗುಡಿ ಹಾರಿದೆ ಇಲ್ಲಿ; ಗುಡಿ ಮೀರಿದೆ ಇಲ್ಲಿ.
ನೀ ಬಿತ್ತಿದ ದಯೆ ಹಬ್ಬಿದೆ ಮನು ಸಂತತಿಯಲ್ಲಿ, ಜನ ಸಮ್ಮತಿಯಲ್ಲಿ;
ನೀನೆತ್ತಿದ ತನು ಸಾಗಿದೆ ಭಾವೋನ್ನತಿಯಲ್ಲಿ, ನವ ಸದ್ಗತಿಯಲ್ಲಿ.
ನಿನ್ನದೆ ನೆಲೆ, ನಿನ್ನದೆ ಮನೆ; ನಿನ್ನೆದೆಯೊ ಉದಾರ; ನಾನೂಳಿಗಕಿರುವಲ್ಪನು- ನೀ ವಾರಸುದಾರ. ಬೆಳೆಬೆಳೆಯಲಿ ನಿನ್ನದೆ ಘನ ಮಹಿಮಾಂಕುರ ಒಳಗೆ; ಬೆಳಬೆಳಗಲಿ ಬಿರುದಾವಳಿ, ನಾಮಾಂಕಿತ ಹಲಗೆ.
|