Recent site activity

ನಾದಲೀಲೆ.

೧.ನೀ ಹೀಂಗ ನೋಡಬ್ಯಾಡ ನನ್ನ

ಪುತ್ರಶೋಕ ನಿರಂತರ ಎಂದು ಹೇಳುತ್ತಾರೆ. ಬೇಂದ್ರೆ ದಂಪತಿಗಳು ತಮಗೆ ಜನಿಸಿದ ೯ ಮಕ್ಕಳಲ್ಲಿ ೬ ಮಕ್ಕಳನ್ನು ಕಳೆದುಕೊಂಡ ದುರ್ದೈವಿಗಳು. ಮೇಲಿಂದ ಮೇಲೆ ಎರಗಿದ ಈ ಆಘಾತಗಳನ್ನು ಸಹಿಸಿದ ಬೇಂದ್ರೆಯವರು ತಮ್ಮ ಸಹೃದಯ ಓದುಗರಿಗೆ ಹೇಳುವದು ಹೀಗೆ:

“ಎನ್ನ ಪಾಡೆನೆಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ !
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ !”
………………………………………………………………………
“ ನೀ ಹೀಂಗ ನೋಡಬ್ಯಾಡ ನನ್ನ ” ಕವನದಲ್ಲಿಯೂ ಸಹ ಶಿಶುವಿನ ಮರಣದ ಸಂದರ್ಭ ವರ್ಣಿತವಾಗಿದೆ. ಅದನ್ನು ಕವಿ ಹೀಗೆ ಸೂಚಿಸಿದ್ದಾರೆ:
“ ಆಪತ್ಯಗಳನ್ನು ಕಳೆದುಕೊಂಡ ಸತಿಯೊಬ್ಬಳು ಆಸನ್ನಮರಣ ಶಿಶುವನ್ನು ನೋಡಲು ಬಂದ ಪತಿಯನ್ನು ಕುರಿತು ಅನಿರ್ವಚನೀಯ ದುಃಖದಿಂದ ಅರ್ಥಪೂರ್ಣವಾಗಿ ನೋಡಿದಾಗ, ಅವನ ಎದೆಯಲ್ಲಿ ಹುಟ್ಟಿದ ಹಾಡು ಇದು…”

ಬೇಂದ್ರೆಯವರು ಈ ಕಾಲ್ಪನಿಕ ಕವನವನ್ನು ಬರೆದ ಬಳಿಕ, ಅವರು ನಿಜಜೀವನದಲ್ಲಿಯೂ ಇಂತಹದೇ ಆಘಾತವನ್ನು ಎದುರಿಸಿದರು. ಅವರ ಒಂದೂವರೆ ತಿಂಗಳ ಹೆಣ್ಣುಕೂಸು ‘ಲಲಿತಾ’ ಮರಣವನ್ನಪ್ಪಿದಳು. ಆ ಸಂದರ್ಭದಲ್ಲಿ ಅವರು ಬರೆದ ಶೋಕಗೀತೆ ‘ಲಲಿತಾ’.
………………………………………………………………
“ ನೀ ಹೀಂಗ ನೋಡಬ್ಯಾಡ ನನ್ನ ” ಕವನದ ಪೂರ್ತಿಪಾಠ ಹೀಗಿದೆ :

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ? ||ಪಲ್ಲ||

ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರು ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ ?

ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ ಗಾಳಿಗೆ ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿsಯಾ ರೀತಿ
ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.

ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು
ಬಿಡಲೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ ?

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ !

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ ?
ಎವೆ ಬಡಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.
………………………………………………………………..

ಕಣ್ಣೆದುರಿನಲ್ಲಿಯೇ ಕೊನೆಯುಸಿರನ್ನು ಎಳೆಯುತ್ತಿರುವ ಕೂಸನ್ನು ತನ್ನ ತೊಡೆಯ ಮೇಲಿರಿಸಿಕೊಂಡಿರುವ ತಾಯಿ ತನ್ನ ಪತಿಯ ಕಡೆಗೆ ನೋಡುತ್ತಾಳೆ. ಆ ನೋಟದಲ್ಲಿ ಏನೆಲ್ಲ ಭಾವನೆಗಳು ಅಡಗಿವೆ? ಸಾಯುತ್ತಿರುವ ಕೂಸಿನ ಬಗೆಗಿನ ದುಃಖ, ತನ್ನ ಪತಿ ಏನಾದರೂ ಮಾಡಿ ಆ ದುರಂತವನ್ನು ತಪ್ಪಿಸಬಹುದೇನೊ ಎನ್ನುವ ಆಸೆ, ತನ್ನ ಹಾಗೂ ತನ್ನ ಪತಿಯ ಅಸಹಾಯಕತೆ ಹಾಗು ಅವನ ದುಃಖದ ಅರಿವು ಇವೆಲ್ಲ ಅವಳ ನೋಟದಲ್ಲಿವೆ.

ಕೂಸು ಜೀವ ಬಿಡುತ್ತಿರುವ ಈ ಗಳಿಗೆಯಲ್ಲಿ, ಅವಳ ಪತಿಯೂ ಅಸಹಾಯಕ. ಅವಳ ಶೋಕದ ಉಪಶಮನಕ್ಕಾಗಿ, ಅವಳ ಕೂಸನ್ನು ಬದುಕಿಸುವ ಭರವಸೆ ಕೊಡಲು ಗಂಡನಾದ ಆತ ಏನೂ ಮಾಡಲಾರ. ಅವಳ ನೋಟವನ್ನು ಎದುರಿಸಲಾರ. ಇದು ಪತಿಯಾದವನ ಸಂಕಟದ ಪರಾಕಾಷ್ಠೆ.
“ ನೀನು ಈ ರೀತಿಯಾಗಿ ನನ್ನನ್ನು ನೋಡಿದರೆ, ನಾನು ನಿನ್ನ ನೋಟವನ್ನು ಎದುರಿಸಲಾರೆ, ನಿನ್ನ ಕಣ್ಣಲ್ಲಿ ಕಣ್ಣಿಡಲಾರೆ, ನಿನಗೆ ಸಾಂತ್ವನ ಹೇಳಲಿಕ್ಕಾದರೂ ನಿನ್ನ ಮುಖ ಹೇಗೆ ನೋಡಲಿ ?” ಎನ್ನುವ ಭಾವನೆ ಕವನದ ಪಲ್ಲದಲ್ಲಿ ಮೂಡಿದೆ :

“ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ?”

ಗಂಡನ ಅಸಹಾಯಕತೆ ಏನೇ ಇದ್ದರೂ, ಹೆಂಡತಿಗೆ ಅವನೇ ಆಸರೆ ಅಲ್ಲವೆ? ಇವನು ತನ್ನ ನೋಟವನ್ನು ಹೊರಳಿಸಿದರೂ ಸಹ ಅವಳು ಮತ್ತೆ ಮತ್ತೆ ಇವನ ಕಡೆಗೆ ನೋಡುತ್ತಾಳೆ. ಅದಕ್ಕವನು ತನ್ನ ಅಸಹಾಯಕತೆಯನ್ನು ಅವಳೆದುರಿಗೆ ವ್ಯಕ್ತಪಡಿಸಲೇ ಬೇಕು, ಅವಳಿಗೆ ಸಮಾಧಾನ ಹೇಳಲೇ ಬೇಕು.
“ಈ ಸಂಸಾರದಲ್ಲಿ ಎಣಿಸಲಾರದಷ್ಟು ದುಃಖವಿದೆ. ಇದನ್ನು ಸಹಿಸುವದು ಅನಿವಾರ್ಯ. ಈ ಸಂಸಾರವೆನ್ನುವ ದುಃಖಸಾಗರದ ಆಚೆಯ ದಂಡೆ ಎಲ್ಲಿದೆಯೊ ತನಗೂ ತಿಳಿಯದು. ತಮ್ಮೆಲ್ಲಾ ಭಾರವನ್ನು ದೇವರ ಮೇಲೆ ಹೊರಿಸಿ ಬಿಡೋಣ. ಈ ಕೂಸು ಸಾಯುವದೇ ದೈವೇಚ್ಛೆಯಾಗಿದ್ದರೆ, ಅದನ್ನು ತಡೆಯುವದು ತನ್ನಿಂದ ಸಾಧ್ಯವೆ? ಸುಮ್ಮನೆ ಯಾಕೆ ನನ್ನ ಕಡೆಗೆ ಆಸೆಯಿಂದ, ಸಂಕಟದಿಂದ ನೋಡುತ್ತೀ?” ಎನ್ನುವ ಭಾವವು ಮೊದಲನೆಯ ನುಡಿಯಲ್ಲಿ ವ್ಯಕ್ತವಾಗಿದೆ.

“ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ ?”

ತಾನೇನೊ ಅವಳಿಗೆ ಸಾಂತ್ವನವನ್ನು ಹೇಳಿದೆ. ಆದರೆ ಶೋಕತಪ್ತಳಾದ ಅವಳನ್ನು ಇಂತಹ ಮಾತುಗಳಿಂದ ಸಂತೈಸಬಹುದೆ? ಅವಳ ಪರಿಸ್ಥಿತಿ ಹೇಗಿದೆ?
ಮನಸ್ಸು ವ್ಯಸ್ತವಾದಾಗ ದೇಹದ ಚೆಲುವೂ ಅಸ್ತವಾಗುತ್ತದೆ.
ಕೆಂಪು ಚುಂಚು ಇರುವ ಗಿಳಿ, ಕೆಂಪು ಹಣ್ಣನ್ನು ಅರ್ಧ ತಿಂದಾಗ ಕಾಣುವ ಕೆಂಬಣ್ಣದ ಓಕುಳಿಯಂತೆ ಇವಳ ತುಟಿಗಳು ಕೆಂಪಾಗಿ ಇರುತ್ತಿದ್ದವು. ತುಟಿಗಳನ್ನು ಕೆಂಪಾಗಿಸಲು ಅವಳಿಗೆ ತಾಂಬೂಲ ಬೇಕಾಗಿರಲಿಲ್ಲ.
ಇಂತಹ ತುಟಿಗಳು ಈಗ ಬಣ್ಣಗೆಟ್ಟಿವೆ. ಮುಖದ ಕಳೆಯೇ ಬದಲಾಗಿದೆ. ಇವಳಿಗೆ ಯಾವುದೊ ಗಾಳಿ (=evil spirit) ತಾಕಿರಬಹುದೆ? ಇವಳ ಮೋರೆಯ ಮೇಲೆ ಮಾರಿಯ (=ಭಯಾನಕ ದೇವಿಯ) ಕಳೆ ಕಾಣುತ್ತಿದೆ. ಸಾವಿನ ಕೈ ಇವಳ ಮುಖದ ಮೇಲೆ ಆಡಿತೊ ಎನ್ನುವಂತೆ ಮುಖ ರಾವು ಹೊಡೆದಿದೆ. ಅವಳ ಈ ಭಯಾನಕ ಚೆಹರೆಯನ್ನು ಕಂಡು ಗಂಡನಿಗೆ “ಮುಂದೇನು ಪರಿಸ್ಥಿತಿ ಕಾದಿದೆಯೊ?” ಎನ್ನುವ ಭಯ ಆವರಿಸುತ್ತದೆ. ಈ ಭಾವನೆಯು ಎರಡನೆಯ ನುಡಿಯಲ್ಲಿ ವ್ಯಕ್ತವಾಗಿದೆ :

“ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ ಗಾಳಿಗೆ ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿsಯಾ ರೀತಿ
ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.”

ಈ ಆಘಾತಕ್ಕಿಂತ ಮೊದಲಲ್ಲಿ ಅವರ ಸಂಸಾರವು ಸರಸಮಯವಾಗಿತ್ತು ಎನ್ನುವ ಸೂಚನೆಯನ್ನು ತಾಂಬೂಲ ಹಾಗೂ ಗಿಣಿ ಕಚ್ಚಿದ ಹಣ್ಣಿನ ಮೂಲಕ ಬೇಂದ್ರೆ ನೀಡುತ್ತಾರೆ. ಆದರೆ ಆ ಸರಸಮಯ ಸಂಸಾರದಲ್ಲಿ ಶಿಶುಮರಣದ ವಿಷದ ಹನಿ ಬಿದ್ದಿದೆ.
ಅವನಿಗೆ ಈಗ self-remorse ಆವರಿಸುತ್ತದೆ. ತನ್ನ ಹೆಂಡತಿಯ ಈ ಸ್ಥಿತಿಗೆ ತಾನೇ ಕಾರಣ. ತನ್ನ ಕೈ ಹಿಡಿದದ್ದರಿಂದಲೇ ಅವಳಿಗೆ ಇಂತಹ ಸ್ಥಿತಿ ಬಂದಿದೆ. ಮದುವೆಯಾಗುವಾಗ ಅವಳಿಗೆ ಏನೆಲ್ಲ ಆಕಾಂಕ್ಷೆಗಳಿದ್ದವೊ ಏನೊ? ಮದುವೆಯಲ್ಲಿ ಧಾರೆ ಎರೆದು ಕೊಡುವಾಗ ತಾನು ಹಿಡಿದ ಕೈ ತನಗೆ ತಂಪು ನೀಡುವದು ಎಂದವಳು ಭಾವಿಸಿದ್ದಳು. ಆದರೆ ಈ ಕೈ ಬೂದಿ ಮುಚ್ಚಿದ ಕೆಂಡವಾಗಿದೆ ! ಅದು ತಿಳಿದ ಮೇಲೂ ಅವನ ಕೈಯನ್ನು ಆಕೆ ಬಿಡುತ್ತಿಲ್ಲವಲ್ಲ !

“ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು
ಬಿಡಲೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ ?”

ಆತ ಆಕಾಶ ,ಇವಳು ಭೂಮಿ. ಭೂಮಿಯೇ ಎಲ್ಲ ಜೀವರಿಗೂ ನೆಲೆ ಕೊಡುವದು. ಆಕಾಶವೇ ಕಪ್ಪರಿಸಿದಾಗ, ಆತನೇ ಧೃತಿಗೆಟ್ಟಾಗ, ನೆಲವೇ ಕುಸಿದು ಹೋಗುತ್ತದೆ. ಆಕಾಶ ಕುಸಿಯಲಾರದು ಎನ್ನುವ ನೀತಿಯಲ್ಲಿ ನಂಬಿಕೆ ಇಟ್ಟ ಈ ಹುಚ್ಚು ಹೆಣ್ಣು ಆತನೇ ತನ್ನ ಬಾಳಿನ ಭರವಸೆ ಎಂದು ತಿಳಿದಿದ್ದಾಳೆಯೆ? ಅವಳಿಗೆ ಭರವಸೆ ಕೊಡಲಾದರೂ ಏನು ಉಳಿದಿದೆ ಅವಳಲ್ಲಿ ?

ಅವಳಲ್ಲಿರುವ ಬಾಳು ಬತ್ತಿ ಹೋಗಿದೆ. ಅವಳ ಕಣ್ಣುಗಳ ಹೊಳಪು ಮಾಸಿ ಹೋಗಿದೆ.
ಅವಳನ್ನು ನೋಡಿದರೆ ಅಲ್ಲಿ ಕಾಣುವದು ಒಂದು ನಿರ್ಜೀವ ದೇಹ.

“ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ !”

ಕನ್ನಡ ಕಾವ್ಯದಲ್ಲಿಯೇ ಅತ್ಯಂತ ಸಂವೇದನಾಪೂರ್ಣವಾದ ಎರಡು ಉಪಮೆಗಳನ್ನು ಈ ನುಡಿಯಲ್ಲಿ ನೋಡುತ್ತೇವೆ. ಕವಳಿ ಹಣ್ಣುಗಳನ್ನು ನೋಡಿದವರು (--ಈಗ ಕವಳಿ ಹಣ್ಣುಗಳೇ ಅಪರೂಪವಾಗಿವೆ--) ಅವು ಎಷ್ಟು ನೀಲಿಕಪ್ಪಾಗಿರುತ್ತವೆ ಎನ್ನುವದನ್ನು ಬಲ್ಲರು. ಕವಳಿಕಂಟಿಯ ದಪ್ಪವಾದ ಬಿಳಿ ಹಾಲು ಈ ಹಣ್ಣುಗಳಿಗೆ ಅಂಟಿಕೊಂಡಿರುತ್ತದೆ. ಚಳಿಗಾಲದಲ್ಲಿ ಈ ಕವಳಿ ಹಣ್ಣುಗಳ ಮೇಲೆ ಇಬ್ಬನಿ ಸಂಗ್ರಹವಾಗುವದರಿಂದ, ಹಣ್ಣುಗಳು ತೊಳೆದಂತಾಗಿರುತ್ತವೆ. ಇವಳ ಕಣ್ಣುಗಳ ಬಿಳಿಭಾಗ ಆ ಹಾಲಿನಂತೆ ; ಇವಳ ಕಣ್ಣ ಪಾಪೆಗಳು ಅಷ್ಟು ನೀಲಿಕಪ್ಪು ; ಕಣ್ಣುಗಳ ತೇಜ ಇಬ್ಬನಿಯ ಹೊಳಪಿನಂತೆ ಎಂದು ಆತನಿಗೆ ತೋರುತ್ತಿತ್ತು. ಆದರೆ ಈಗ ಆ ಕಣ್ಣುಗಳಲ್ಲಿಯ ಜೀವವೇ ಹೋಗಿ ಬಿಟ್ಟಿದೆ. ಈ ನಿಸ್ತೇಜ ಕಣ್ಣುಗಳು ಅವಳ ಕಣ್ಣುಗಳೆ ಎಂದು ಆತ ಕೇಳುತ್ತಾನೆ.
ಮೊದಲಲ್ಲಿ ಅವಳ ಮುಖವು ಹುಣ್ಣಿವೆಯ ಚಂದಿರನ ಹಾಗೆ ಪ್ರಕಾಶಮಾನವಾಗಿತ್ತು.
ಈಗ ನೋಡಿದರೆ ಅವನಿಗೆ ಅಲ್ಲಿ ಕಾಣುವದು ಪ್ರೇತಕಳೆ:
“ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ !”

ಓದುಗನಲ್ಲಿ ದಿಗ್ಭ್ರಮೆ ಹುಟ್ಟಿಸುವ ಉಪಮೆ ಇದು. ಹುಣ್ಣಿಮೆಯ ಚಂದ್ರ ಹಗಲಿನಲ್ಲಿ ಕಾಣುವದಿಲ್ಲ. ಕಂಡರೆ ಅದು ಅನೈಸರ್ಗಿಕ ; ಅದು ಚಂದ್ರನ ಹೆಣ. ಅವನ ಹೆಂಡತಿಯೂ ಸಹ ಮಾನಸಿಕವಾಗಿ ಹೆಣವೇ ಆಗಿದ್ದಾಳೆ. ಅವಳ ಮುಖವು ಈಗ ಹಗಲಿನಲ್ಲಿ ತೇಲಿದ ಚಂದ್ರನ ಹೆಣದಂತೆ ಕಾಣುತ್ತಿದೆ.

ಸಾವಿನ ಎದುರಿಗೆ ಇಬ್ಬರೂ ಅಸಹಾಯಕರು. ಇಬ್ಬರಿಗೂ ಇದರ ಅರಿವಾಗುತ್ತಿದೆ. ಒಬ್ಬರನ್ನೊಬ್ಬರು ಸಮಾಧಾನಿಸಲು ಏನೇನೊ ಪ್ರಯತ್ನಿಸುತ್ತಿದ್ದಾರೆ. ಅವಳು ತನ್ನ ದುಃಖವನ್ನು ಹತ್ತಿಕ್ಕಿ ಇವನಿಗೆ ಸಾಂತ್ವನ ನೀಡಲು ಬಯಸುತ್ತಾಳೆ. ಇವನನ್ನು ನೋಡಿ, ನಕ್ಕಂತೆ ಮಾಡಿ, ತನ್ನ ದುಃಖವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಅದು ಹುಚ್ಚು ಪ್ರಯತ್ನ , ಹುಚ್ಚರ ಪ್ರಯತ್ನ.
ಅವಳ ಒಳಗೆ ತುಂಬಿಕೊಂಡ ಶೋಕ ಹೊರಗೆ ಬರಬೇಕು.
ಶುಷ್ಕ ಸಾಂತ್ವನ ನೀಡಿದ ಆತ ಈಗ “ಸಮಾಧಾನದ ಈ ಸುಳ್ಳು ರೂಪ ಸಾಕು; ಅತ್ತು ಬಿಡು, ದುಃಖವನ್ನು ಹೊರಹಾಕು” ಎಂದು ಹೇಳುತ್ತಾನೆ :

“ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ ?
ಎವೆ ಬಡಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.”

ಕಣ್ಣೀರ-ಮಳೆ ಹೊಡೆಯಲು ಸಿದ್ಧವಾಗಿ ನಿಂತಿದೆ. ಈಗೋ ಇನ್ನೊಂದು ಕ್ಷಣಕ್ಕೊ ಅದು ಸುರಿಯಬೇಕು. ಅವನಿಗೆ ತನ್ನ ಶೋಕ ತಿಳಿಯದಿರಲು ಅವಳು ಅದನ್ನು ತಡೆ ಹಿಡಿದಿದ್ದಾಳೆ, ನಡುನಡುವೆ ಹುಚ್ಚುನಗೆ ನಗುತ್ತಾಳೆ. ಆದರೆ ಅದು ತಿಳಿಯದಿರಲು ಆತ ಹುಚ್ಚನೆ?
“ನಿನ್ನ ದುಃಖ ಹೊರ ಬರಲಿ, ಪ್ರವಾಹ ಬಂದಂತೆ ಬರಲಿ ; ರೆಪ್ಪೆ ಬಡಿದರೆ ಕಣ್ಣೀರು ಹೊರಗೆ ಬಂದೀತೆಂದು ರೆಪ್ಪೆ ಬಡಿಯದೆ ಇದ್ದೀಯಾ. ಆದರೆ ನಿನ್ನ ಈ ಬಿರಿಗಣ್ಣು ನನ್ನನ್ನು ಹೆದರಿಸುತ್ತದೆ. ನಿನ್ನ ಅಳುವನ್ನು ಹೊರಗೆ ಹಾಕು, ತುಟಿಕಚ್ಚಿ ಹಿಡಿದು ಅದನ್ನು ಒಳಗೇ ಇಟ್ಟುಕೊಳ್ಳಬೇಡ” ಎಂದು ಆತ ಹೇಳುತ್ತಾನೆ.
ತನ್ನ ಕೈಹಿಡಿದಾಕೆಗೆ ಆತ ಬೇರೇನು ಸಮಾಧಾನ ಹೇಳಬಲ್ಲ?
........................................

ವಾಲ್ಮೀಕಿಗಾದ ದುಃಖದಿಂದ “ರಾಮಾಯಣ” ಮಹಾಕಾವ್ಯ ಹುಟ್ಟಿತು. ಭರ್ತೃಹರಿಯು ತನ್ನ ಉತ್ತರ ರಾಮಾಯಣ ನಾಟಕದಲ್ಲಿ “ದುಃಖವನ್ನು ಸಹಿಸಲೆಂದೇ ರಾಮನಲ್ಲಿ ಚೈತನ್ಯವನ್ನು ತುಂಬಲಾಯಿತು” ಎಂದು ಹೇಳಿದ್ದಾನೆ. ಬೇಂದ್ರೆಯವರು ಸಹ ತಮ್ಮೆಲ್ಲ ದುಃಖಗಳಲ್ಲಿ ಬೆಂದು, ತಮ್ಮ ಪಾಡನ್ನು ಹಾಡಾಗಿಸಿ ನಮಗೆ ನೀಡಿದ್ದಾರೆ, “ಸಖೀಗೀತ”ದಲ್ಲಿ ಅವರು ಹೇಳುವಂತೆ:

“ ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿವೆ.”

ಹೆಚ್ಚಿನ ಓದಿಗೆ :http://sallaap.blogspot.com/2008/08/blog-post_20.html



೨.ಅನಂತ ಪ್ರಣಯ

ನಿಸರ್ಗಪ್ರೇಮವು ನವೋದಯ ಕಾವ್ಯದ ಪ್ರಧಾನ ಲಕ್ಷಣವಾಗಿದೆ. ನಿಸರ್ಗಗೀತೆಗಳನ್ನು ನೇರವಾಗಿ ಬರೆಯದಂತಹ ನವೋದಯ ಕವಿಗಳ ಕವನಗಳಲ್ಲಿ ಸಹ, ನಿಸರ್ಗವರ್ಣನೆ backdrop ಆಗಿ ಬಂದೇ ಬಂದಿದೆ. ಪ್ರಕೃತಿಯ ಚೆಲುವನ್ನು ವರ್ಣಿಸಿದ ನವೋದಯ ಕವಿಗಳಲ್ಲಿ ಬೇಂದ್ರೆ ಅಗ್ರಸ್ಥಾನವನ್ನು ಪಡೆದಿದ್ದಾರೆ. ಪ್ರಕೃತಿವರ್ಣನೆಯಲ್ಲಿ ಇವರಿಗೂ ಇತರ ಕವಿಗಳಿಗೂ ಇರುವ ವ್ಯತ್ಯಾಸವೆಂದರೆ, ಬೇಂದ್ರೆಯವರ ಕವನಗಳಲ್ಲಿ ಪ್ರಕೃತಿ ಕೇವಲ ಭೌತಿಕ ವಸ್ತುವಲ್ಲ, ಅದು ಚೈತನ್ಯದ ಒಂದು ರೂಪವಾಗಿದೆ.

ಬೇಂದ್ರೆಯವರ ಸುಪ್ರಸಿದ್ಧ ಕವನ “ಬೆಳಗು” ಇದಕ್ಕೊಂದು ಉತ್ತಮ ಉದಾಹರಣೆ. “ಶಾಂತಿರಸವೆ ಪ್ರೀತಿಯಿಂದ ಮೈದೋರಿತಣ್ಣ, ಇದು ಬರಿ ಬೆಳಗಲ್ಲೊ ಅಣ್ಣ” ಎಂದು ಹೇಳುವ ಮೂಲಕ ಬೇಂದ್ರೆಯವರು ಭೌತಿಕ ವಸ್ತುವಿನ ಹಿಂದೆ ಅಡಗಿರುವ ಅಭೌತಿಕ ಚೈತನ್ಯವನ್ನು ಓದುಗರಿಗೆ ತೋರಿಸುತ್ತಿದ್ದಾರೆ.

ಬೇಂದ್ರೆಯವರ ಮತ್ತೊಂದು ಕವನ “ಅನಂತ ಪ್ರಣಯ”ದಲ್ಲಿ, ಅವರು ಇದಕ್ಕೂ ಹತ್ತು ಹೆಜ್ಜೆ ಮುಂದೆ ಹೋಗಿದ್ದಾರೆ. ಇಲ್ಲಿ ಸೂರ್ಯ, ಚಂದ್ರ ಹಾಗು ಭೂಮಿ ಇವು ಚೈತನ್ಯದ ಭೌತಿಕ ರೂಪಗಳು. ಇಷ್ಟೇ ಅಲ್ಲ, ಈ ಚೈತನ್ಯದ ರೂಪಗಳಲ್ಲಿ ಪರಸ್ಪರ ಪ್ರೇಮಾಕರ್ಷಣೆ ಇದೆ. ಈ ಪ್ರೇಮಾಕರ್ಷಣೆಯು ಭಗವತ್ಪ್ರೇಮದ ಭಾಗವೇ ಆಗಿದೆ. ಭಗವಂತನ ಪ್ರೇಮವೇ ಸೃಷ್ಟಿರೂಪವಾಯಿತು ಎಂದು ಭಾರತೀಯ ದರ್ಶನಗಳಲ್ಲಿ ಹೇಳಲಾಗುತ್ತಿದೆ.

“ಮೇಘದೂತ”ದ ಕನ್ನಡಾನುವಾದದ ಪೀಠಿಕೆಯಲ್ಲಿ, ಬೇಂದ್ರೆಯವರು ಭಾರತೀಯ ದರ್ಶನದಲ್ಲಿ ಸೃಷ್ಟಿ ರೂಪುಗೊಂಡ ಬಗೆಯನ್ನು ವರ್ಣಿಸುತ್ತ ಹೀಗೆ ಬರೆದಿದ್ದಾರೆ:

“ ಬ್ರಹ್ಮ ಹೃದಯದಲಿ ಜನಿಸಿದಿಚ್ಛೆ ಕೊನೆಗಾಣಲೆಂದು ಬಾಳಿ
ಕಂಡ ಕಡೆಗು ಶತರೂಪೆಯಲ್ಲಿ ಮಧು-ರೂಪ-ರೂಪತಾಳಿ
ಜಗದ ತಂದೆ-ತಾಯಿಯರ ಕಂದ ಅವತರಿಸೆ ಜೀವನಾಗಿ
ಬಂತು ಪೂರ್ವದಲಿ ದೇವ-ಕಾಮವೇ ಕಾಮ-ದೇವನಾಗಿ ”

ಈ ರೀತಿಯಾಗಿ ದೇವಕಾಮವೇ ಕಾಮದೇವನಾಗಿ ರೂಪ ತಾಳಿ, ಸೃಷ್ಟಿಲೀಲೆಯಲ್ಲಿ ತೊಡಗಿದ್ದಾನೆ. ಈ ವಿಶ್ವದ ಎಲ್ಲ ಚರಾಚರ ವಸ್ತುಗಳು ಪ್ರೇಮಾಕರ್ಷಣೆಯಲ್ಲಿ ಬಂಧಿತವಾಗಿವೆ.
…………………………………………………………………
“ಅನಂತ ಪ್ರಣಯ”ವು ವಿಶ್ವವ್ಯಾಪ್ತಿಯುಳ್ಳ ತ್ರಿಕೋಣಪ್ರೇಮದ ಕತೆ. ಸೂರ್ಯ ಹಾಗು ಚಂದ್ರರು ಮಿತ್ರರು. ಚಂದ್ರನಿಗೆ ಭೂಮಿಯಲ್ಲಿ ಆಕರ್ಷಣೆ. ಆದರೆ ಭೂಮಿ ಹಾಗು ಸೂರ್ಯ ಪರಸ್ಪರ ಪ್ರಣಯಿಗಳು. ಇದೊಂದು ಕೊನೆಯಿಲ್ಲದ ಪ್ರಣಯಕತೆ. ಅಂತೆಯೇ ಈ ಕವನಕ್ಕೆ “ಅನಂತ ಪ್ರಣಯ” ಎನ್ನುವ ಶೀರ್ಷಿಕೆ ಕೊಡಲಾಗಿದೆ.

ಕವನದ ಪೂರ್ತಿಪಾಠ ಹೀಗಿದೆ:

ಉತ್ತರಧ್ರುವದಿಂ ದಕ್ಷಿಣಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ.
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು.
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು.

ಅಕ್ಷಿನಿಮೀಲನ ಮಾಡದ ನಕ್ಷ-
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರನಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.
………………………………………………………………………
ಮೊದಲ ನುಡಿ:
“ಉತ್ತರಧ್ರುವದಿಂ ದಕ್ಷಿಣಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ.
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.”

ಕವನದ ಮೊದಲ ನುಡಿಯ ಮೊದಲೆರಡು ಸಾಲುಗಳಲ್ಲಿಯೇ, ಬೇಂದ್ರೆಯವರು ಭೂಮಿಯಲ್ಲಿ ತುಂಬಿರುವ ಪ್ರಣಯಭಾವದ ಗುರುತುಗಳನ್ನು ಸೂಚಿಸಿದ್ದಾರೆ.

ಭೂಮಿಯ ಉತ್ತರ ಧ್ರುವ ಹಾಗು ದಕ್ಷಿಣ ಧ್ರುವಗಳಲ್ಲಿ polar magnets ಇವೆ ಎನ್ನುವದು ಒಂದು ವೈಜ್ಞಾನಿಕ ಸತ್ಯ. ವಿರುದ್ಧ ಬಗೆಯ ಚುಂಬಕಗಳು (=magnets) ಪರಸ್ಪರ ಆಕರ್ಷಿಸುತ್ತವೆ ಎನ್ನುವದೂ ಸಹ ವೈಜ್ಞಾನಿಕ ಸತ್ಯವೇ. ಆದರೆ ಈ ವಾಸ್ತವತೆ ಬೇಂದ್ರೆಯವರ ಅನುಪಮ ಕಲ್ಪನೆಯಲ್ಲಿ ತಾಳುವ ಸುಂದರ ರೂಪವೇ ಬೇರೆ:
Magnetic force ಎನ್ನುವ ಭೌತಿಕ ಆಕರ್ಷಣೆ ಈ ಕವನದಲ್ಲಿ ಪ್ರಣಯಭಾವವಾಗಿದೆ.

ಭೂಮಿಯಲ್ಲಿರುವ ಪ್ರಣಯಭಾವವು ಜಾಗೃತವಾಗಿದ್ದಂತೆಯೇ, ಇನ್ನೆರಡು ಚೈತನ್ಯರೂಪಿಗಳಾದ ಸೂರ್ಯ ಹಾಗು ಚಂದ್ರರಲ್ಲಿಯೂ ಸಹ ಗೆಳೆತನದ ಒಲುಮೆ ಇದೆ.
“ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.”

ಈ ಗೆಳೆಯರಲ್ಲಿ ಒಬ್ಬನು, ಅಂದರೆ ಚಂದ್ರನು ಭೂಮಿಯಲ್ಲಿ ಪ್ರಣಯಾಸಕ್ತನಾಗಿದ್ದಾನೆ. ಭೂಮಿಗಾಗಿ ಅವನು ಹಲಬುವದನ್ನು ಬೇಂದ್ರೆಯವರು ಎರಡನೆಯ ನುಡಿಯಲ್ಲಿ ಈ ರೀತಿಯಾಗಿ ಬಣ್ಣಿಸುತ್ತಾರೆ:

“ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.”

ಚಂದ್ರನೇನೋ ಭೂಯಾಮಿನಿಯನ್ನು ಪ್ರಣಯಕ್ರೀಡೆಗೆ ಕರೆಯುತ್ತಿದ್ದಾನೆ. ಆದರೆ ಈ ಭೂಯಾಮಿನಿ ಅವನ ಯಾಚನೆಯನ್ನು ಒಪ್ಪಿಲ್ಲ. ಹೀಗಾಗಿ ಚಂದ್ರನು (=ತಿಂಗಳು), ಪ್ರತಿತಿಂಗಳೂ ಕ್ಷೀಣಿಸುತ್ತಿದ್ದಾನೆ; ಅವಳು ತನ್ನ ಬೇಟಕ್ಕೆ ಒಪ್ಪಿಕೊಳ್ಳಬಹುದೆನ್ನುವ ಆಸೆಯಲ್ಲಿ ಮತ್ತೆ ಮತ್ತೆ ಮೈತುಂಬಿಕೊಳ್ಳುತ್ತಾನೆ. ಪೂರ್ಣಿಮೆಯಂದು ತನ್ನ ಪ್ರೇಮದ ಬೆಳದಿಂಗಳನ್ನು ಹೊರಸೂಸಿ ಭೂಮಿಯ ಮೇಲೆ ತುಳುಕಿಸುತ್ತಾನೆ. ಈ ಯಾಚನೆ ಹಾಗು ಯಾತನೆಯ ಸವಿಯನ್ನು ಚಂದ್ರನು ತನ್ನೊಳಗೇ ಸವಿಯುತ್ತಿದ್ದಾನೆ.
ವಿಪ್ರಲಂಭ ಶೃಂಗಾರಕ್ಕೆ ಈ ನುಡಿಯು ಒಂದು ಅತ್ಯುತ್ತಮ ಉದಾಹರಣೆ ಎನ್ನಬಹುದು.

ಆದರೆ ಇತ್ತ ಭೂಮಿ ಹಾಗು ಸೂರ್ಯರ ಪ್ರಣಯ ಅಬಾಧಿತವಾಗಿ ಸಾಗಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು.
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು.

ಭೂಮಿಯ ಚಲನೆಯಿಂದಾಗಿ ಋತುಗಳು ಬದಲಾಗುತ್ತಿವೆ. ಪ್ರತಿ ವಸಂತಕ್ಕೂ ಭೂಮಿಯ ಮೇಲೆ ಹೂಗಳು ಮತ್ತೆ ಮತ್ತೆ ಅರಳುತ್ತವೆ. ಇದು ಎಷ್ಟು ಕೋಟಿ ವರ್ಷದಿಂದ ನಡೆದಿದೆಯೊ ಬಲ್ಲವರಾರು? ಬೇಂದ್ರೆಯವರ ಕವಿ ಕಣ್ಣಿಗೆ ಇದು ಕಾಣುವ ಬಗೆ ಬೇರೆ. ಸೂರ್ಯನ ಕಿರಣಸ್ಪರ್ಷದಿಂದ ಪುಲಕಿತಳಾದ ಭೂಮಿ ಮರಳಿ ಮರಳಿ ಕುಸುಮಿಸುತ್ತಾಳೆ; ಕೋಟಿ ಕೋಟಿ ಸಲ ಅವಳು ಹೊಸತನ ಪಡೆಯುತ್ತಾಳೆ ಎಂದು ಬೇಂದ್ರೆ ಹೇಳುತ್ತಾರೆ.
ಭೂಮಿಯ ಪ್ರಣಯವೇನೋ ನವಯೌವನದಿಂದಲೇ ತುಂಬಿದೆ. ಸೂರ್ಯನೂ ಸಹ ಅಷ್ಟೇ ಪ್ರೇಮದಿಂದ ತುಂಬಿಕೊಂಡಿದ್ದಾನೆ. ಮಿತ್ರನ (=ಸೂರ್ಯನ) ಮೈತ್ರಿಯ (=ಒಲವಿನ) ಒಸಗೆ(=ಸಂದೇಶ) ಮಸಗದಿದೆ(=ಕಳೆಗುಂದಿಲ್ಲ); ಬದಲಾಗಿ ಅದು ಹೆಚ್ಚಾಗುತ್ತಲೆ ಇದೆ. (=ಮಸೆಯಿಸಿತು.)

ಆಕಾಶದೇವತೆಗಳ ಈ ಪ್ರಣಯಕ್ಕೆ ಬೇಂದ್ರೆಯವರು ಆಕಾಶದಲ್ಲಿರುವ ನಕ್ಷತ್ರಪುಂಜಗಳನ್ನೇ ಸಾಕ್ಷಿಯಾಗಿ ಮಾಡುತ್ತಾರೆ. ಕಣ್ಣು ತೆರೆದುಕೊಂಡೇ ಇರುವ (=ಅಕ್ಷಿನಿಮೀಲನ ಮಾಡದ) ನಕ್ಷತ್ರಗಳಿವು.
ದೇವತೆಗಳು ಅಕ್ಷಿನಿಮೀಲನ ಮಾಡುವದಿಲ್ಲವೆನ್ನುವದನ್ನು ನೆನಪಿಸಿಕೊಂಡರೆ, ಈ ನಕ್ಷತ್ರಗಳೂ ಸಹ ದೇವತಾಸಮೂಹವೇ ಎನ್ನುವ ಕಲ್ಪನೆ ಬರುವದು. ಆದರೆ ಈ ತಾರಾಸಮೂಹವು ಗಗನದಲ್ಲಿ ಶೋಭಿಸುತ್ತಿರುವ ಹಾರದಂತೆ ಕಾಣುತ್ತದೆ ಎಂದು ಬೇಂದ್ರೆಯವರು ಕಲ್ಪಿಸುತ್ತಾರೆ.

ಅಕ್ಷಿನಿಮೀಲನ ಮಾಡದ ನಕ್ಷ-
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರನಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.

ಇತ್ತ ಚಂದ್ರನ ಗತಿ ಏನು? ಆತ ತನ್ನ ಹಂಬಲವನ್ನು ಜೀವಂತವಾಗಿ ಇಟ್ಟುಕೊಂಡ ಭಗ್ನಪ್ರಣಯಿ.
ಅಂತೆಯೇ,
“ಬಿದಿಗೆಯ ಬಿಂಬಾಧರನಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ”!

ಭೂಮಿ ಹಾಗು ಸೂರ್ಯರ ಕೂಟ ನಿರಂತರವಾಗಿದೆ. ಭೂಮಿಗಾಗಿ ಚಂದ್ರನ ಬೇಟ ನಿರಂತರವಾಗಿದೆ.
ಇದು ನಿರಂತರವಾದ ಅನಂತ ಪ್ರಣಯ.
ಬೇಂದ್ರೆಯವರ ಕಲ್ಪನಾಪ್ರತಿಭೆಯು ಸಮಗ್ರ ವಿಶ್ವವನ್ನೇ ಆವರಿಸಿಕೊಳ್ಳಬಲ್ಲದು ಎನ್ನುವದಕ್ಕೆ ಈ ಕವಿತೆ ಸಾಕ್ಷಿಯಾಗಿದೆ.

(ಈ ಗೀತೆಯನ್ನು ದಿವಂಗತ ಪುಟ್ಟಣ್ಣ ಕಣಗಾಲ ಅವರು ತಮ್ಮ “ಶರಪಂಜರ” ಚಲನಚಿತ್ರದಲ್ಲಿ ಬಳಸಿಕೊಂಡಿದ್ದಾರೆ.)
ಹೆಚ್ಚಿನ ಓದಿಗೆ :http://sallaap.blogspot.com/2008/08/blog-post.html


೩.ಪ್ರಕೃತಿಯ ಯುಗಾದಿ

ಯುಗಾದಿಯು ಋತುಚಕ್ರದ ಆದಿಬಿಂದು. ಇದು ವಸಂತ ಋತುವಿನ, ಚೈತ್ರಮಾಸದ ಪ್ರಾರಂಭವಾಗಿದೆ. ಮನುಜನು ತನ್ನ ಬುದ್ಧಿಶಕ್ತಿಯ ಆಧಾರದಿಂದ, ಪೃಥ್ವಿ ಹಾಗು ಚಂದ್ರರ ಚಲನೆಯನ್ನು ಗುಣಿಸಿ, ಯುಗಾದಿಯ ಆರಂಭವನ್ನು ಕ್ಷಣದವರೆಗೂ ನಿರ್ಧರಿಸುತ್ತಾನೆ.

ಮನುಜನ ಹೊರತಾದ ನಿಸರ್ಗಕ್ಕೆ ಮನುಜನಂತಹ ಬುದ್ಧಿಶಕ್ತಿಗಿಂತ ಬೇರೊಂದು ರೂಪದ ಬುದ್ಧಿಶಕ್ತಿ ಇದೆ. ಮನುಜನ ಬುದ್ಧಿಶಕ್ತಿಗೆ conscious intelligence ಎಂದು ಕರೆಯಬಹುದಾದರೆ, ನಿಸರ್ಗದ ಬುದ್ಧಿಶಕ್ತಿಗೆ unconscious intelligence ಎಂದು ಕರೆಯಬಹುದು.(?) ನಿಸರ್ಗದ unconscious intelligence ಎದುರಿಗೆ ಮನುಜನ conscious intelligence ನಗಣ್ಯ. ನಿಸರ್ಗವು ಯುಗಾದಿಯನ್ನು ಗುರುತಿಸುವ ಬಗೆಯೇ ಬೇರೆ. ಅದು ಮನುಜನ ಬುದ್ಧಿಗೆ ನಿಲುಕಲಾರದು.

ಅಂಬಿಕಾತನಯದತ್ತರು ತಮ್ಮ ‘ಯುಗಾದಿ’ ಕವನದಲ್ಲಿ ಸೃಷ್ಟಿಕ್ರಮವು ಪುನರಾವರ್ತಿಸುವ ಬಗೆಯನ್ನು ಬಣ್ಣಿಸುತ್ತಿದ್ದಾರೆ. ಯುಗಾದಿಯೊಡನೆ ನಿಸರ್ಗವು ಹೊಸ ರೂಪವನ್ನು ತಾಳುವ ರೀತಿಯನ್ನು ವರ್ಣಿಸುತ್ತಾರೆ. ಅವರು ಬಣ್ಣಿಸುವ ಯುಗಾದಿಯು ಪ್ರಕೃತಿಯ ಯುಗಾದಿ, ಇದು ಮನುಜರ ಯುಗಾದಿಯಲ್ಲ.

‘ಯುಗಾದಿ’ ಕವನದ ಪೂರ್ಣಪಾಠ ಹೀಗಿದೆ:

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ನಮ್ಮನಷ್ಟೆ ಮರೆತಿದೆ!
. . . . . . . . . .. . . . . . .. . . . . . . . .. . . . . . . . . . . . . . .
ಸೂರ್ಯ,ಭೂಮಿ ಹಾಗು ಚಂದ್ರರ ಸೃಷ್ಟಿಯಾದ ನಂತರ ಅನೇಕ ಕೋಟಿ ಯುಗಗಳು ಕಳೆದು ಹೋಗಿವೆ. ಪ್ರತಿ ವರ್ಷದ ಆದಿಯಲ್ಲಿ ನಾವು ಯುಗಾದಿ ಎಂದು ಕರೆಯುವ ದಿನವು ಪುನರಾವರ್ತನೆಗೊಳ್ಳುತ್ತದೆ. ಪ್ರತಿ ಸಲವೂ ಈ ವರ್ಷಾರಂಭವು ನಿಸರ್ಗದಲ್ಲಿ ಹೊಸ ಹರ್ಷವನ್ನು ತರುತ್ತದೆ. ಅದನ್ನು ಬೇಂದ್ರೆ ಹೀಗೆ ಹೇಳುತ್ತಾರೆ:

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ವಸಂತ ಋತುವಿನ ಪ್ರಕೃತಿಯನ್ನು ಗಮನಿಸಿ:
ಸಸ್ಯಸಂಕುಲವೆಲ್ಲ ಬಣ್ಣ ಬಣ್ಣದ,ಬಗೆಬಗೆಯ ಸುವಾಸನೆಯ ಹೊಸ ಹೂವುಗಳಿಂದ ಶೋಭಿಸತೊಡಗುತ್ತದೆ. ಪ್ರಕೃತಿಯು ಹೊಸ ಉಲ್ಲಾಸದಿಂದ ತುಂಬುತ್ತದೆ. ನಿಸರ್ಗದಲ್ಲಿ ಹೊಸ ಸಂಭ್ರಮವಿದೆ. ಈ ನವೋಲ್ಲಾಸಕ್ಕೊಂದು ಕಾರಣವಿರಬೇಕಲ್ಲವೆ? ಈ ಕಾರಣವೆಂದರೆ ನಿಸರ್ಗದ ಮೂಲ ಬಯಕೆ ಅರ್ಥಾತ್ ಹೊಸ ಸಂತಾನದ ಉತ್ಪತ್ತಿ.

ಚಿಕ್ಕ ಕೂಸನ್ನು ನೋಡಿದಾಗ ಎಲ್ಲರಿಗೂ ಆ ಕೂಸಿನ ಮೇಲೆ ಪ್ರೀತಿ ಹುಟ್ಟುತ್ತದೆ. ಈ ಕೂಸೇ ‘ಹೊಸ ಹರುಷ’! ನಿಸರ್ಗದಲ್ಲಿಯ ಸಸ್ಯಸಂಕುಲವು ಹೊಸ ಹೂವನ್ನು ಬಿಡುವುದರೊಂದಿಗೆ ಸಂತಾನೋತ್ಪತ್ತಿಯನ್ನು ಪ್ರಾರಂಭಿಸುತ್ತವೆ. ಆದುದರಿಂದ ಇದು ಹೊಸ ಹರುಷ!
ಬೇಂದ್ರೆ ಈ ಮಾತನ್ನು ಮುಂದಿನ ನುಡಿಯಲ್ಲಿ ಹೀಗೆ ಹೇಳಿದ್ದಾರೆ:

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ಪರಾಗಸ್ಪರ್ಷಕ್ಕಾಗಿ ಭೃಂಗಗಳನ್ನು ಆಹ್ವಾನಿಸಲು ಹೊಂಗೆ ಹೂವು ಗೊಂಚಲು ಗೊಂಚಲಾಗಿ ಹೂವುಗಳನ್ನು ಸುರಿಸುತ್ತದೆ. ದುಂಬಿಗಳ ಗುಂಗುಂಗಾನ ಈ ವರುಷವೂ ಪುನರಾವರ್ತಿಸುತ್ತಿದೆ. ಇಡೀ ವರುಷವೆಲ್ಲ ಕಹಿಯಾದ ಎಲೆ ಹಾಗೂ ಕಹಿಯಾದ ಕಾಯಿಗಳನ್ನೇ ಇಟ್ಟುಕೊಂಡ ಬೇವಿನ ಮರವು ಯುಗಾದಿಯಂದು ನಸುಕಂಪಿನ ಹೂವನ್ನು ಪಡೆದಿದೆ. ಹೀಗಾಗಿ ಅದಕ್ಕೂ ಸಹ ಒಂದು ಹೊಸ ಜೀವಕಳೆ ಬಂದಿದೆ!

ಈ ಸಂದರ್ಭದಲ್ಲಿ ಮತ್ತೊಂದು ಮಾತನ್ನು ಗಮನಿಸಬೇಕು. ಕವಿ ಎಂದು ಯಾರನ್ನು ಕರೆಯಬೇಕು? ಚೆಲುವನ್ನು ಕಾಣುವವನೇ ಕವಿ. ಆತ ಚರಾಚರ ಸೃಷ್ಟಿಯಲ್ಲಿಯ ಎಂಥಾ ಸಣ್ಣ ಕಣದಲ್ಲಿಯ ಚೆಲುವನ್ನೂ ಗಮನಿಸಿ ಸಂತೋಷಪಡುತ್ತಾನೆ. ಬೇಂದ್ರೆಯವರಿಗೆ ತಮ್ಮ ಹಿತ್ತಲಿನ, ತಮ್ಮ ಸುತ್ತಲಿನ ಹೊಂಗೆ, ಬೇವು, ಹುಣಸಿಯ ಮರ ಎಲ್ಲವೂ ಸಂತೋಷವನ್ನು ನೀಡುತ್ತವೆ. ಹುಣಸಿಯ ಮರವನ್ನು ನೆವ ಮಾಡಿ ಅವರು ಹೇಳಿದ ಕವನದ ಪ್ರಸಿದ್ಧ ಸಾಲುಗಳು ಹೀಗಿವೆ:
“ಕವಿಗೇನು ಬೇಕs?
ಹೂತ ಹುಣಸಿಮರ ಸಾಕs!”

ವಸಂತ ಋತುವಿನ ಆದಿಯಲ್ಲಿ ಗಿಡ, ಮರ, ಬಳ್ಳಿಗಳು ಹೂವುಗಳಿಂದ ಕಂಗೊಳಿಸುವ ಕಾರಣವನ್ನು ಕವಿ ಹೀಗೆ ಹೇಳುತ್ತಾರೆ:
ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.

ಈ ಮೇಲಿನ ಮೂರು ಸಾಲುಗಳು ಕವಿಯ ಅಸಾಮಾನ್ಯ ಕಲ್ಪನೆಯಯಿಂದಾಗಿ ಹೊರಹೊಮ್ಮಿವೆ.
ಕಾಮದೇವನ ಬಿಲ್ಲಿಗೆ ಕಬ್ಬಿನ ದಂಡ ಹಾಗು ದುಂಬಿಗಳ ಹೆದೆ ಇರುತ್ತದೆ. ಅವನು ಉಪಯೋಗಿಸುವದು ಐದು ತರಹದ ಹೂವಿನ ಬಾಣಗಳನ್ನು. ಇಂತಹ ಕಮ್ಮನೆಯ (=sweet) ಬಾಣಕ್ಕೆ ಸೋಲದ ಜೀವಿ ಉಂಟೆ?
ಇಲ್ಲಿ ಕಾಮದೇವನು ನಿಸರ್ಗವನ್ನು ಸೋಲಿಸಿಲ್ಲ ; ನಿಸರ್ಗವು ತಾನಾಗಿಯೆ ಕಾಮದೇವನಿಗೆ ಸೋತಿದೆ ; ಕಾಮದೇವನ ಬಾಣ ತಗುಲಿದೊಡನೆಯೆ, ಮಾವಿನ ಮರವು ಪುಳಕಗೊಂಡಿದೆ ; ಆ ಪುಳಕವು ಹೂವುಗಳಾಗಿ ಹೊರಹೊಮ್ಮಿದೆ.
ಈ ಕಲ್ಪನೆಗೆ ಅದ್ಭುತ ಕಲ್ಪನೆ ಎನ್ನಲೇ ಬೇಕು.
On the touch of Cupid’s arrow, the captive mango tree thrilled into flowers ಎನ್ನುವ ಸಾಲುಗಳನ್ನು ಜಗತ್ತಿನ ಯಾವ ಕವಿಯೂ ಹೇಳಿರಲಿಕ್ಕಿಲ್ಲ!

ಈ ರೀತಿಯಾಗಿ ಬೇಂದ್ರೆಯವರು ಬೇವು ಮಾವುಗಳೆಲ್ಲ (--ಅಹಾ! ಕಹಿ ಹಾಗೂ ಸಿಹಿಯಾದ ಮರಗಳ ಜೊತೆಯೆ!--) ಪುಷ್ಪವತಿಯರಾಗಿ ಕಾಮದೇವನಿಗಾಗಿ ಕಾಯುತ್ತಿರುವದನ್ನು ಹೇಳುತ್ತಾರೆ.
ಪುಷ್ಪವತಿಯಾದ ಸಸ್ಯಸಂಕುಲವು ಫಲವತಿಯಾಗಿ ಸಾರ್ಥಕ್ಯವನ್ನು ಪಡೆಯಬೇಕಾದರೆ ಪಕ್ಷಿಸಂಕುಲದ ನೆರವು ಬೇಕು. ಹಣ್ಣುಗಳ ಸುಗ್ಗಿಯ ಮುನ್ಸೂಚನೆಯನ್ನು ಪಡೆದ ಪಕ್ಷಿಸಂಕುಲವು ಗಿಡಮರಗಳಿಗೆ ಮುಗಿಬೀಳುತ್ತವೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.
ಮಾಮರವು ಇನ್ನೂ ಹಣ್ಣು ಬಿಟ್ಟಿಲ್ಲ. ಆದರೆ ಹಣ್ಣಿನ ಸುಗ್ಗಿ ಇನ್ನೇನು ಬಂದೇ ಬಿಟ್ಟಿತು ಎಂದು ಹಿಗ್ಗುತ್ತ ಗಿಳಿಗಳ ಸಾಲುಗಳು ಮಾಮರವನ್ನು ಆಶ್ರಯಿಸಿವೆ. ಗಿಳಿಗಳ ಈ ಸಾಲುಗಳು ಕವಿಗೆ ತೋರಣದಂತೆ ಕಾಣುತ್ತವೆ. ಆದರೆ ಇದು ಕಾಮದೇವನನ್ನು ಸ್ವಾಗತಿಸುವ ತೋರಣ.

ಈ ರೀತಿಯಾಗಿ ನಿಸರ್ಗವೆಲ್ಲ (--ಮನುಜನನ್ನು ಹೊರತುಪಡಿಸಿ--) ಹೊಸ ವರ್ಷದೊಡನೆ ಹೊಸ ಜನ್ಮ ತಾಳಿ ಸಂಭ್ರಮಿಸುತ್ತದೆ. ಹಳೆಯ ನೆಲೆಯನ್ನು ಕಳಚಿ ಹಾಕಿ, ಹರ್ಷದ ಹೊಸ ನೆಲೆಯನ್ನು ಪಡೆಯುತ್ತದೆ. ಪ್ರತಿ ವರುಷದಲ್ಲೂ ಪ್ರಕೃತಿಯು ಹೊಸ ಬಾಲ್ಯ ಹಾಗು ಹೊಸ ಯೌವನವನ್ನು ಪಡೆಯುತ್ತದೆ.
ಆದರೆ, ಮನುಜನ ಸ್ಥಿತಿ ಹೇಗಿದೆ?

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ಮನುಜಕುಲಕ್ಕೆ ಮಾತ್ರ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಹಾಗೂ ಒಂದೇ ಯೌವನ! ನಮಗೂ ಸಹ ನಿದ್ದೆಯು ನಮ್ಮ ಹಳತನ್ನು ಕಳೆದೊಗೆದು, ಎಚ್ಚರವಾದೊಡನೆ ಹೊಸ ಜೀವನವನ್ನು ಕೊಡುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!
ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?

ಕವಿಯು ಕಾಮದೇವನನ್ನು (=ಸನತ್ಕುಮಾರನನ್ನು) ಪ್ರಶ್ನಿಸುತ್ತಾನೆ.
‘ಕಾಮದೇವಾ, ನೀನು ಚಿರಂಜೀವಿ, ನೀನು ಸಾಹಸಿ. ನಿನ್ನಂಥವನು ಮನುಜರಿಗೂ ಸಹ ಇಂತಹ ವೈಭೋಗ ಕೊಡಬೇಕಾಗಿತ್ತು. ಕೊಡದಿರುವ ಕಾರಣವೇನು? ನಿನಗೆ ಲೀಲೆ (=play) ಸೇರದೊ?’
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಕವಿಯು ಪ್ರಕೃತಿಯ ಹಾಗು ಮನುಜರ ನಡುವಿನ ಈ ಕಂದರವನ್ನು ನೆನೆದು ವಿಷಾದಿಸುತ್ತಾನೆ:
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ನಮ್ಮನಷ್ಟೆ ಮರೆತಿದೆ!


http://sallaap.blogspot.com/2009/03/blog-post_30.html